ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಹಣಾಹಣಿಯನ್ನು ನೋಡಲು ಎದುರು ನೋಡುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮಳೆ ನಿರಾಸೆಯುಂಟು ಮಾಡಿದೆ. ಸೌಥಾಂಪ್ಟನ್ನಲ್ಲಿ ಮುಂಜಾನೆಯಿಂದಲೇ ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ಮೊದಲ ಸೆಶನ್ ಆಟ ಮಳೆಗೆ ಬಲಿಯಾಗಿದೆ.
ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನು ನೀಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೊದಲ ದಿನದಾಟವನ್ನು ಸಂಪೂರ್ಣವಾಗಿ ಮಳೆಗೆ ಆಹುತಿಯಾಗಬಹುದು ಎಂದು ನಾಸಿರ್ ಹುಸೇನ್ ಹೇಳಿಕೆ ನೀಡಿದ್ದಾರೆ.
ಮಳೆಯಿಂದಾಗಿ ಈಗಾಗಲೇ ಮೊದಲ ದಿನದಾಟ ತಡವಾಗಿದೆ. ಭಾರತೀಯ ಕಾಲಮಾನ 3 ಗಂಟೆಗೆ ಆರಂಭವಾಗಬೇಕುದ್ದ ಪಂದ್ಯ ಮಳೆಯಿಂದಾಗಿ ತಡವಾಗಿದೆ. ಟಾಸ್ ಪ್ರಕ್ರಿಯೆಯನ್ನು ಕೂಡ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ನಾಸಿರ್ ಹುಸೇನ್ ಮೊದಲ ದಿನದಾಟ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
WTC final: ಭಾರತ vs ನ್ಯೂಜಿಲೆಂಡ್ ಪಂದ್ಯದ ಮೊದಲ ಸೆಶನ್ ಮಳೆಗೆ ಆಹುತಿ!
ಆದರೆ ಮಳೆಯಿಂದಾಗಿ ವ್ಯರ್ಥವಾಗುವ ಸಮಯವನ್ನು ಬಳಸಿಕೊಳ್ಳಲು ಮೀಸಲು ದಿನವನ್ನು ಈ ವಿಶೇಷ ಪಂದ್ಯಕ್ಕಾಗಿ ನಿಗದಿಗಿಳಿಸಲಾಗಿದೆ. ಆಟದ ಐದು ದಿನಗಳ ಕಾಲ ಮಳೆಯಿಂದಾಗಿ ವ್ಯರ್ಥವಾಗುವ ಸಮಯವನ್ನು ಮೀಸಲು ದಿನದಾಟದಲ್ಲಿ ಬಳಸಿಕೊಳ್ಳಲಾಗುತ್ತದೆ.
"ಈ ಮಳೆಯನ್ನು ನೋಡುತ್ತಿದ್ದರೆ ಇಂದೂ ದಿನವಿಡೀ ಈ ಮಳೆ ಮುಂದುವರಿಯುವಂತೆ ಕಾಣಿಸುತ್ತಿದೆ. ಅದೃಷ್ಟವಶಾತ್ ನಾವು ಆರನೇ ದಿನವನ್ನು ಮಿಸಲು ದಿನವಾಗಿ ಹೊಂದಿದ್ದೇವೆ" ಎಂದು ನಾಸಿರ್ ಹುಸೇನ್ ಹೇಳಿಕೆಯನ್ನು ನೀಡಿದ್ದಾರೆ.
ಮೀಸಲು ದಿನವನ್ನು ಐದು ದಿನಗಳ ಪೂರ್ಣಪ್ರಮಾಣದ ಆಟವನ್ನು ನಡೆಸಲು ಮೀಸಲಿಸಲಾಗಿದೆ. ಐದು ದಿನಗಳ ಆಟದಲ್ಲಿ ಮಳೆಯಿಂದ ವ್ಯರ್ಥವಾದ ಸಮಯವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮಾತ್ರ ಮೀಸಲು ದಿನವನ್ನು ಬಳಸಿಕೊಳ್ಳಲಾಗುತ್ತದೆ. ಈಗಿನ ಸ್ಥಿತಿಯಲ್ಲಿ ಈ ಪಂದ್ಯ ಮೀಸಲು ದಿನಕ್ಕೆ ವಿಸ್ತರಿಸುವುದು ಬಹುತೇಕ ಸ್ಪಷ್ಟವಾಗಿದೆ.