ಸೌಥಾಂಪ್ಟನ್, ಜೂನ್ 24: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳಿಂದ ಸೋಲು ಕಂಡಿದೆ. ಈ ಸೋಲಿನ ಬಗ್ಗೆ ಸಾಕಷ್ಟು ವಿಮರ್ಶೆಗಳು ಈಗ ನಡೆಯುತ್ತಿದೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಈ ಐತಿಹಾಸಿಕ ಪಂದ್ಯದ ಸೋಲಿಗೆ ಕಾರಣವಾದ ಸಂಗತಿಯಾವುದು ಎಂದು ವಿವರಿಸಿದ್ದಾರೆ.
10 ಎಸೆತಗಳ ಅಂತರದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಅವರ ವಿಕೆಟನ್ನು ಕಳೆದುಕೊಂಡಿತು. ಇದು ಟೀಮ್ ಇಂಡಿಯಾದ ಮೇಲೆ ಹೆಚ್ಚಿನ ಒತ್ತಡ ಬೀಳುವಂತೆ ಮಾಡಿತು ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದಿರುವುದಕ್ಕೆ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ನೀವು ಶ್ರೇಷ್ಠ ತಂಡವಾಗಿದ್ದೀರಿ. ಟೀಮ್ ಇಂಡಿಯಾ ತಮ್ಮ ಪ್ರದರ್ಶನದಿಂದಾಗಿ ನಿರಾಸೆಗೊಂಡಿದೆ. ನಾನು ಈಗಾಗಲೇ ಹೇಳಿದಂತೆ ಆರಂಭಿಕ 10 ಓವರ್ಗಳು ಬಹಳ ನಿರ್ಣಾಯಕವಾಗಿತ್ತು. ಆದರೆ ಈ ಸಂದರ್ಣದಲ್ಲಿ ಭಾರತ 10 ಎಸೆತಗಳ ಅಂತರದಲ್ಲಿ ಕೊಹ್ಲಿ ಹಾಗೂ ಪೂಜಾರ ಇಬ್ಬರ ವಿಕೆಟ್ ಕೂಡ ಕಳೆದುಕೊಂಡಿತು. ಇದು ತಂಡದ ಮೇಲೆ ಸಾಕಷ್ಟು ಒತ್ತಡವನ್ನು ಉಂಟು ಮಾಡಿತು" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
WTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರ
ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಕೇವಲ 170 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಕೇವಲ 139 ರನ್ಗಳ ಗುರಿಯನ್ನು ನಿಗದಿಪಡಿಸಿತು. ಇದನ್ನು ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಜೋಡಿ ಮುರಿಯದ ಮೂರನೇ ವಿಕೆಟ್ಗೆ ಸಾಧಿಸುವಲ್ಇ ಯಶಸ್ವಿಯಾಗಿತ್ತು.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಭಾರತ ತಂಡಕ್ಕಿಂತ ನ್ಯೂಜಿಲೆಂಡ್ ತಂಡ ಉತ್ತಮವಾಗಿ ಸಿದ್ಧತೆಯನ್ನು ನಡೆಸಿದೆ ಎಂದಿದ್ದರು. ಈ ಸರಣಿಗೂ ಮುನ್ನ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಭಾಗಿಯಾಗಿತ್ತು. ನ್ಯೂಜಿಲೆಂಡ್ ಈ ಸರಣಿಯನ್ನು ಕೂಡ ಗೆದ್ದು ಬೀಗಿತ್ತು.