ಭುವನೇಶ್ವರ್ ಕುಮಾರ್ ಬೇಕಿತ್ತು ಎಂದ ಆಕಾಶ್
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಭುವನೇಶ್ವರ್ ಕುಮಾರ್ ಅವರನ್ನು ಟೀಮ್ ಇಂಡಿಯಾ ಇಂಗ್ಲೆಂಡ್ನ ಪರಿಸ್ಥಿತಿಯಲ್ಲಿ ಮಿಸ್ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. ಸ್ವಿಂಗ್ ಬೌಲರ್ ಆಗಿ ಭುವನೇಶ್ವರ್ ಕುಮಾರ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ವಿವಿಧ ಆಯಾಮಗಳಲ್ಲಿ ತಂಡಕ್ಕೆ ನೆರವಾಗುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಮೂರು ಆಯಾಮದಲ್ಲಿ ತಂಡಕ್ಕೆ ನೆರವು
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಮಾನಿಯೋರ್ವರು ಭುವನೇಶ್ವರ್ ಕುಮಾರ್ ಅಲಭ್ಯತೆಯ ಬಗ್ಗೆ ಆಕಾಶ್ ಚೋಪ್ರ ಬಳಿ ಕೇಳಿದ ಪ್ರಶ್ನೆಗೆ ಉತ್ತರವನ್ನು ನೀಡುತ್ತಾ ಈ ಅಭಿಪ್ರಾಯವನ್ನು ವ್ಯಕ್ರಪಡಿಸಿದ್ದಾರೆ. "ಭಾರತ ಖಂಡಿತವಾಗಿಯೂ ಭುವನೇಶ್ವರ್ ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಆತನಲ್ಲಿ ಮೂರು ವಿಶೇಷತೆಗಳು ಇವೆ. ಮೊದಲನೆಯದಾಗಿ ಹೊಸ ಚೆಂಡಿನಲ್ಲಿ ಆತ ಮ್ಯಾಜಿಕ್ ಮಾಡಬಲ್ಲ. ಸುದೀರ್ಘ ಸ್ಪೆಲ್ ಮಾಡುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಹಾಗೂ ಬ್ಯಾಟಿಂಗ್ನಲ್ಲಿಯೂ ಭುವನೇಶ್ವರ್ ತಂಡಕ್ಕೆ ಕೊಡುಗೆ ನೀಡಬಲ್ಲರು" ಎಂದು ಆಕಾಶ್ ಚೋಪ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೂರ್ಣ ಪ್ರಮಾಣದ ಸ್ವಿಂಗ್ ಬೌಲರ್
ಇನ್ನು ಈ ಹಂತದಲ್ಲಿ ಎದುರಾಳಿ ನ್ಯೂಜಿಲೆಂಡ್ ಬೌಲರ್ಗಳ ರೀತಿಯಲ್ಲಿ ಭುವನೇಶ್ವರ್ ಕುಮಾರ್ ಪೂರ್ಣ ಪ್ರಮಾಣದಲ್ಲಿ ಸ್ವಿಂಗ್ ಬೌಲರ್ ಆಗಿ ತಂಡಕ್ಕೆ ನೆರವಾಗುತ್ತಿದ್ದರು ಎಂದಿದ್ದಾರೆ ಚೋಪ್ರ. ಈಗ ಟೀಮ್ ಇಂಡಿಯಾದಲ್ಲಿರುವ ಬೌಲರ್ಗಳ ಪೈಕಿ ಇಶಾಂತ್ ಶರ್ಮಾ ಮಾತ್ರವೇ ಉತ್ತಮ ಸ್ವಿಂಗ್ ಮಾಡಬಲ್ಲವರಾಗಿದ್ದಾರೆ ಎಂದಿದ್ದಾರೆ.
ಇಂಗ್ಲೆಂಡ್ನಲ್ಲಿ ಉತ್ತಮ ಪ್ರದರ್ಶನ
ಇನ್ನು ಭುವನೇಶ್ವರ್ ಕುಮಾರ್ ಇಂಗ್ಲೆಂಡ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. 2014ರ ಪ್ರವಾಸದಲ್ಲಿ ಭುವಿ 5 ಪಂದ್ಯಗಳಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 19 ವಿಕೆಟ್ ಸಂಪಾದಿಸಿದ್ದಾರೆ. ಜೊತೆಗೆ ಬ್ಯಾಟಿಂಗ್ನಲ್ಲಿಯೂ ಗಮನಾರ್ಹ ಪ್ರದರ್ಶನವನ್ನು ನೀಡಿದ್ದು 3 ಅರ್ಧಶತಕಗಳ ಸಹಿತ 247 ರನ್ ಬಾರಿಸಿದ್ದಾರೆ.