ಸೌಥಾಂಪ್ಟನ್, ಜೂನ್ 22: ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಮಳೆ ಸತತವಾಗಿ ಅಡ್ಡಿಯಾಗುತ್ತಿದೆ. ಮೊದಲ ನಾಲ್ಕು ದಿನಗಳಲ್ಲಿ ಎರಡು ದಿನ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ. ನಾಲ್ಕನೇ ದಿನದಾಟ ಮಳೆಯಿಂದಾಗಿ ಸಂಪೂರ್ಣ ವ್ಯರ್ಥವಾದ ಬಳಿಕ ಮಾಜಿ ಭಾರತೀಉ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
"ಫೈನಲ್ ಹಂತಕ್ಕೇರಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಗೆಲುವು ಸಾಧಿಸಲು ಹವಣಿಸುತ್ತಿವೆ. ಆದರೆ ಐಸಿಸಿ ಈ ಪಂದ್ಯಕ್ಕಾಗಿ ಸರಿಯಾದ ನಿಯಮವನ್ನು ರೂಪಿಸಿಲ್ಲ" ಎಂದು ವಿವಿಎಸ್ ಲಕ್ಷ್ಮಣ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯದ ನಾಲ್ಕನೇ ದಿನದ ಆಟವೂ ಒಂದೂ ಎಸೆತ ಕಾಣದೆ ರದ್ದಾಯಿತು.
ಇಂಥ ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಯಬಾರದಿತ್ತು: ಕೆವಿನ್ ಪೀಟರ್ಸನ್
ಆರಂಭಿಕ ನಾಲ್ಕು ದಿನಗಳಲ್ಲಿ 141.1 ಓವರ್ಗಳ ಆಟವಷ್ಟೇ ಆಡಲು ಸಾಧ್ಯವಾಗಿದೆ. ಮಳೆ ಹಾಗೂ ಮಂದ ಬೆಳಕು ನಿರಂತರವಾಗಿ ಪಂದ್ಯಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಮೀಸಲು ದಿನವಾಗಿ ಒಂದು ದಿನವನ್ನು ನಿಗದಿಗೊಳಿಸಿದೆಯಾದರೂ ಫಲಿತಾಂಶ ದೊರೆಯುವ ಸಾಧ್ಯತೆ ಈಗ ಕ್ಷೀಣಿಸಿದೆ. ಹೀಗಾಗಿ ಐಸಿಸಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದೆ.
"ಇದು ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಮೂಡಿಸುವ ಸಂಗತಿಯಾಗಿದೆ. ನನ್ನ ಪ್ರಕಾರ ಐಸಿಸಿ ಸರಿಯಾದ ನಿಯಮವನ್ನು ಅಳವಡಿಸಿಕೊಂಡಿಲ್ಲ. ಎಲ್ಲರೂ ಬಯಸುವುದು ಒಂದು ಚಾಂಪಿಯನ್ ತಂಡವನ್ನು" ಎಂದು ವಿವಿಎಸ್ ಲಕ್ಷ್ಮಣ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
"ಸಾಕಷ್ಟು ಸಮಯಾವಕಾಶ ಲಭ್ಯವಿದ್ದರಿಂದ ನಿತ್ಯವೂ 90 ಓವರ್ಗಳಂತೆ ಐದು ದಿನಗಳಲ್ಲಿ 450 ಓವರ್ಗಳನ್ನು ಆಡುವುದನ್ನು ಐಸಿಸಿ ಖಚಿತಪಡಿಸಿಕೊಳ್ಳಬೇಕಿತ್ತು. ನಾನು ಐಸಿಸಿಯಿಂದ ಇದನ್ನು ನಿರೀಕ್ಷಿಸಿದ್ದೆ. ಒಂದು ಮೀಸಲು ದಿನ ಇದೆ ಎಂದು ಕೂಡ ನಾವು ಉತ್ಸಾಹಿತರಾಗಿದ್ದೆವು. ಆದರೆ ಹಾಗಿದ್ದರೂ ಹವಾಮಾನ ಪಂದ್ಯವನ್ನು ಪೂರ್ಣಗೊಳಿಸಲು ಅವಕಾಶ ನೀಡುತ್ತದೆ ಎಂದು ನಾನು ಭಾವಿಸುವುದಿಲ್ಲ" ಎಂದು ವಿವಿಎಸ್ ಲಕ್ಷ್ಮಣ್ ಬೇಸರವನ್ನು ಹೊರಹಾಕಿದ್ದಾರೆ.