ಸೌಥಾಂಪ್ಟನ್, ಜೂನ್ 22: ಕಡೆಗೂ ಹವಾಮಾನ ಕ್ರಿಕೆಟ್ ಪ್ರೇಮಿಗಳ ಮೇಲೆ ಕರುಣೆ ತೋರಿದಂತಿದೆ. ಮಳೆ ಸುರಿದ ಪರಿಣಾಮವಾಗಿ ಐದನೇ ದಿನದಾಟವೂ ಒಂದು ಗಂಟೆಗಳ ಕಾಲ ವಿಳಂಬವಾಗಿ ಆರಂಭವಾಗಿದ್ದು ಕ್ರೀಸ್ ಕಾಯ್ದುಕೊಂಡಿದ್ದ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಬ್ಯಾಟಿಂಗ್ ನಡೆಸಲು ಕ್ರೀಸ್ಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾಗೆ ಸಲಹೆಯೊಂದನ್ನು ನೀಡಿದ್ದಾರೆ.
ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಲೈನ್ಅಪ್ನ ಪ್ರಮುಖ ಅಸ್ತ್ರವಾಗಿದ್ದಾರೆ. ಹೀಗಾಗಿ ಭಾರತಕ್ಕೆ ವಿಲಿಯಮ್ಸನ್ ವಿಕೆಟ್ ಪಡೆಯುವುದು ಬಹಳ ಅಗತ್ಯವೂ ಹೌದು. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಸದಸ್ಯನಾಗಿ ಕೇನ್ ವಿಲಿಯಮ್ಸನ್ ಅವರನ್ನು ಮೆಂಟರ್ ಆಗಿರುವ ವಿವಿಎಸ್ ಲಕ್ಷ್ಮಣ್ ಸಾಕಷ್ಟು ಹತ್ತಿರದಿಂದ ಬಲ್ಲವರಾಗಿರುವ ಕಾರಣ ಈ ಸಲಹೆ ಸಾಕಷ್ಟು ಕುತೂಹಲ ಮೂಡಿಸಿದೆ.
ಇಂಥ ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಯಬಾರದಿತ್ತು: ಕೆವಿನ್ ಪೀಟರ್ಸನ್
ಕೇನ್ ವಿಲಿಯಮ್ಸನ್ ಜೊತೆಗೆ ಕರ್ತವ್ಯ ನಿರ್ವಹಿಸಿದ ಅನುಭವದ ಹಿನ್ನೆಲೆಯಲ್ಲಿ ಈ ಸಲಹೆಯನ್ನು ವಿವಿಎಸ್ ಲಕ್ಷ್ಮಣ್ ನೀಡಿದ್ದಾರೆ. ಭಾರತೀಯ ಬೌಲರ್ಗಳು ನ್ಯೂಜಿಲೆಂಡ್ ತಂಡದ ನಾಯಕನನ್ನು ತಾಳ್ಮೆಗೆಡುವಂತೆ ಮಾಡಬೇಕು. ಆಗ ಕೇನ್ ವಿಲಿಯಮ್ಸನ್ ಕೆಟ್ಟ ಹೊಡೆತಗಳನ್ನು ಬಾರಿಸುತ್ತಾರೆ ಎಂದು ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.
"ಆತನ ಮನಸ್ಸಿನಲ್ಲಿ ಗೊಂದಲವಾಗುವಂತೆ ಮಾಡಬೇಕು. ಆತನೇನಾದರೂ ತಾಳ್ಮೆಯನ್ನು ಕಳೆದುಕೊಂಡರೆ ಆತ ತಪ್ಪುಹೊಡೆತಗಳನ್ನು ಬಾರಿಸುತ್ತಾನೆ. ಅದನ್ನು ಈಗ ಭಾರತೀಯ ಬೌಲರ್ಗಳು ಎದುರು ನೋಡಿತ್ತಿದ್ದಾರೆ" ಎಂದು ವಿವಿಎಸ್ ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ. ಐದನೇ ದಿನದಾಟಕ್ಕೂ ಮುನ್ನ ಸ್ಟಾರ್ಸ್ಪೋರ್ಟ್ಸ್ನಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಈ ಸಲಹೆ ನೀಡಿದ್ದಾರೆ ವಿವಿಎಸ್ ಲಕ್ಷ್ಮಣ್.
"ಕೇನ್ ವಿಲಿಯಮ್ಸನ್ ಅವರಲ್ಲಿರುವ ಶ್ರೇಷ್ಠತೆಯೇನೆಂದರೆ ಆತ ಕೇವಲ ತಾಂತ್ರಿಕವಾಗಿ ಬಲಿಷ್ಠವಾಗಿಲ್ಲ. ಆತನಲ್ಲಿ ಸುದೀರ್ಘ ಕಾಲ ತಾಳ್ಮೆಯಿಂದಿರುವ ಸಾಮರ್ಥ್ಯವಿದೆ. ಇದು ಎದುರಾಳಿಗಳಿಗೆ ಸವಾಲಾಗುತ್ತದೆ" ಎಂದು ವಿವಿಎಸ್ ಲಕ್ಷ್ಮಣ್ ಕೇನ್ ವಿಲಿಯಮ್ಸನ್ ಸಾಮರ್ಥ್ಯದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.