"ನನ್ನ ಮತ್ತು ನನ್ನ ತಮ್ಮ ಕೃನಾಲ್ ಪಾಂಡ್ಯನದ್ದು ಗಟ್ಟಿತಲೆ!"
"ಸದ್ಯ ಕ್ರಿಕೆಟ್ ಜಗತ್ತು ಯಾವ ರೀತಿ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗಟ್ಟಿತಲೆ ಇರಬೇಕು. ನಾನು ಮತ್ತು ನನ್ನ ತಮ್ಮ ಕೃನಾಲ್ ಪಾಂಡ್ಯ ಇಬ್ಬರೂ ಗಟ್ಟಿ ತಲೆಯನ್ನು ಹೊಂದಿದ್ದು, ಕ್ರಿಕೆಟ್ನಲ್ಲಿ ಅಪಾರವಾದ ಹಣವಿದೆ ಎಂಬುದನ್ನು ಒಪ್ಪುತ್ತೇವೆ. ಹಲವಾರು ಮಂದಿ ಈ ಇಬ್ಬರಿಗೂ ಹಣ ಸಿಕ್ಕ ಮೇಲೆ ಹೆಚ್ಚು ಹಾರಾಡುತ್ತಾ ಇದ್ದಾರೆ ಎಂದೆಲ್ಲಾ ಟೀಕಿಸಿದರು. ಆದರೆ ಅಂತಿಮವಾಗಿ ನನ್ನ ಮತ್ತು ನನ್ನ ತಮ್ಮನ ಕಾಲು ಇದೇ ಕ್ರಿಕೆಟ್ ಕ್ರೀಡಾಂಗಣದ ನೆಲದ ಮೇಲಿರುತ್ತದೆ" ಎಂದು ಹಾರ್ದಿಕ್ ಪಾಂಡ್ಯ ದುಡ್ಡು ಬಂದ ನಂತರ ಪಾಂಡ್ಯ ಬ್ರದರ್ಸ್ ಸಾಕಷ್ಟು ಬದಲಾಗಿದ್ದಾರೆ ಎನ್ನುವವರಿಗೆ ಚಾಟಿ ಬೀಸಿದ್ದಾರೆ.
ಕ್ರಿಕೆಟ್ನಲ್ಲಿ ದುಡ್ಡಿಲ್ಲದೇ ಇದ್ದಿದ್ದರೆ ಪೆಟ್ರೋಲ್ ಬಂಕ್ ಕೆಲಸ ಮಾಡ್ತಿದ್ದೆ
ಈ ಕುರಿತಾಗಿ ಇನ್ನೂ ಮುಂದುವರಿದು ಮಾತನಾಡಿರುವ ಹಾರ್ದಿಕ್ ಪಾಂಡ್ಯ ಕ್ರಿಕೆಟ್ನಲ್ಲಿ ದುಡ್ಡಿದೆ ಎಂಬುದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. "ಕ್ರಿಕೆಟ್ನಲ್ಲಿ ದುಡ್ಡಿರುವುದು ನಿಜ, ಆ ದುಡ್ಡು ಒಳ್ಳೆಯದು ಕೂಡ ಹೌದು. ಆ ಹಣ ಓರ್ವ ಕ್ರಿಕೆಟಿಗನ ಬದುಕನ್ನೇ ಬದಲಾಯಿಸಿಬಿಡುತ್ತದೆ, ಅದಕ್ಕೆ ನಾನೇ ತಾಜಾ ಉದಾಹರಣೆ. ಕ್ರಿಕೆಟ್ನಲ್ಲಿ ಹಣವಿಲ್ಲ ಎಂದಿದ್ದರೆ ನಾನು ಕ್ರಿಕೆಟಿಗನಾಗುವ ಬದಲು ಯಾವುದಾದರೂ ಪೆಟ್ರೋಲ್ ಬಂಕ್ನಲ್ಲಿ ಕೆಲಸಗಾರನಾಗಿ ದುಡಿಮೆ ಮಾಡುತ್ತಿದ್ದೆ. ನಿಜವಾಗಿಯೂ ನಾನು ತಮಾಷೆ ಮಾಡುತ್ತಿಲ್ಲ, ನನಗೆ ನನ್ನ ಕುಟುಂಬದವರೇ ಮೊದಲ ಆದ್ಯತೆ, ಅವರ ಉತ್ತಮ ಜೀವನಕ್ಕೋಸ್ಕರ ಹಣದ ಅಗತ್ಯತೆ ಇದ್ದೇ ಇರುತ್ತದೆ" ಎಂದು ಹಾರ್ದಿಕ್ ಪಾಂಡ್ಯ ಕ್ರಿಕೆಟ್ನಲ್ಲಿ ಹಣವಿದೆ ಮತ್ತು ಅದರ ಅಗತ್ಯತೆ ಆಟಗಾರರಿಗಿದೆ ಎಂಬುದನ್ನು ಮನದಟ್ಟು ಮಾಡಿದ್ದಾರೆ.
ಕ್ರಿಕೆಟ್ನಲ್ಲಿ ಹಣವಿಲ್ಲ ಎಂದರೆ ಎಷ್ಟು ಜನ ಕ್ರಿಕೆಟ್ ಆಡುತ್ತಾರೋ ಗೊತ್ತಿಲ್ಲ
"2019ರ ಸಮಯದಲ್ಲಿ ವ್ಯಕ್ತಿಯೋರ್ವರು ಯುವ ಕ್ರಿಕೆಟಿಗರು ಹಣಕ್ಕೋಸ್ಕರ ಆಟವನ್ನಾಡಬಾರದು ಎಂದಿದ್ದರು, ಆದರೆ ಅದನ್ನು ನಾನು ಒಪ್ಪಲಿಲ್ಲ. ಒಂದು ಹಳ್ಳಿಯಿಂದ ಅಥವಾ ಸಾಮಾನ್ಯ ಪಟ್ಟಣದಿಂದ ಬಂದ ಬಡ ಕುಟುಂಬದ ಕ್ರಿಕೆಟಿಗನಿಗೆ ದೊಡ್ಡ ಒಪ್ಪಂದಗಳ ಆಫರ್ ಬಂದರೆ ಅದನ್ನು ಆತ ತಿರಸ್ಕರಿಸುವುದಿಲ್ಲ. ತನ್ನ ಕುಟುಂಬದವರಿಗೋಸ್ಕರ ಹಾಗೂ ತನ್ನ ಆಪ್ತರಿಗೋಸ್ಕರ ಆತ ಅದನ್ನು ಸ್ವೀಕರಿಸುತ್ತಾನೆ. ಇನ್ನು ಓರ್ವ ಕ್ರಿಕೆಟಿಗನಿಗೆ ಉತ್ತಮ ಹಣ ದೊರೆತರೆ ಆತ ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ಆಟವನ್ನಾಡುತ್ತಾನೆ. ಹೀಗಾಗಿ ಓರ್ವ ಕ್ರಿಕೆಟಿಗನಿಗೆ ಕೇವಲ ಆಟ ಮಾತ್ರವಲ್ಲದೇ ಸಂಪಾದನೆಯೂ ಕೂಡ ಮುಖ್ಯವಾದದ್ದು. ಒಂದುವೇಳೆ ಕ್ರಿಕೆಟ್ನಲ್ಲಿ ಹಣವಿಲ್ಲ ಎಂದರೆ ಎಷ್ಟು ಜನ ಕ್ರಿಕೆಟ್ ಆಡಲು ಮುಂದೆ ಬರುತ್ತಾರೋ ನನಗಂತೂ ಗೊತ್ತಿಲ್ಲ" ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.