ಐಸಿಸಿ ಟೂರ್ನಿಯ ವೈಫಲ್ಯಕ್ಕೆ ಅಖ್ತರ್ ಹೇಳಿದ ಕಾರಣ
ಟೀಮ್ ಇಂಡಿಯಾ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆದರೆ ನಂತರ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್ ವಿನ್ನರ್ಗಳ ಕೊರತೆ ಉಂಟಾಯಿತು. ಇದು ಟೀಮ್ ಇಂಡಿಯಾ ಮುಂದಿನ ಯಾವುದೇ ಟೂರ್ನಿ ಗೆಲ್ಲದಿರಲು ಕಾರಣವಾಗಿದೆ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ-ಯುವಿಯಂತಾ ಮ್ಯಾಚ್ ವಿನ್ನರ್ಗಳ ಅಗತ್ಯವಿದೆ
'ಭಾರತ ಇನ್ನೂ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಸೀಮಿತ ಓವರ್ಗಳಲ್ಲಿ ಅಗ್ರ ತಂಡಗಳ ಒಂದಾಗಿದೆ. ಅಗ್ರ ನಾಲ್ಕು ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಿದಾಗ, ಅವರು ಗೆಲುವನ್ನು ಕಾಣುತ್ತಿದ್ದಾರೆ. ಆದರೆ ಅವರು ವಿಫಲರಾದರೆ ತಂಡ ಸಂಪೂರ್ಣವಾಗಿ ವಿಫಲಾವಾಗುತ್ತದೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಂತಾ ಮ್ಯಾಚ್ ವಿನ್ನರ್ಗಳ ಅಗತ್ಯ ಭಾರತಕ್ಕಿದೆ ಎಂದಿದ್ದಾರೆ.
ಮೊದಲಿಗೆ ಅಗ್ರ ಕ್ರಮಾಂಕವನ್ನು ಕೆಡವಿದರೆ ಸಾಕಿತ್ತು
ನಾವು 1998 ರಲ್ಲಿ ಭಾರತದಲ್ಲಿ ಪ್ರವಾಸ ಮಾಡಿದಾಗ, ನಾವು ಭಾರತದ ಅಗ್ರ ಕ್ರಮಾಂಕವನ್ನು ಕೆಡವಿದರೆ ಸಾಕಿತ್ತು, ನಮ್ಮ ಗೆಲುವು ಖಚಿತವಾಗಿರುತ್ತಿತ್ತು. ಆ ಸಮಯದಲ್ಲಿ ಯುವರಾಜ್ ಸಿಂಗ್ ಅಥವಾ ಎಂ.ಎಸ್. ಧೋನಿ ತಂಡದಲ್ಲಿ ಇರಲಿಲ್ಲ. ಆದರೆ ಈ ಇಬ್ಬರು ಅದನ್ನು ಬದಲಾಯಿಸಿ ಬಿಟ್ಟರು ಎಂದು ಶೋಯೆಬ್ ಹೇಳಿದ್ದಾರೆ.
ಯುವಿ-ಧೋನಿ ಬದಲಾಯಿಸಿ ಬಿಟ್ಟರು
ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರ ಬ್ಯಾಟಿಂಗ್ನಿಂದ ಕಳೆದ 2 ದಶಕಗಳಲ್ಲಿ ಭಾರತೀಯ ಕ್ರಿಕೆಟ್ ಸಂಪೂರ್ಣವಾಗಿ ಬದಲಾಗಿದೆ. ಹಲವು ಐಸಿಸಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. 2013 ರಿಂದ, ಭಾರತ ತಂಡವು ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದಾಗಿ ನಂಬರ್ ತಂಡವಾಗಿದ್ದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸವು ಕಳೆದ ಬಾರಿಗಿಂತ ಕಠಿಣವಾಗಿರುತ್ತದೆ
ಹಾಲಿ ಭಾರತ ತಂಡವನ್ನು ಪಾಕ್ ವೇಗಿ ಶೋಯೆಬ್ ಅಖ್ತರ್ ಶ್ಲಾಘಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದ್ದರೂ ಭಾರತ ತಂಡವು ಇನ್ನೂ ತುಂಬಾ ಪ್ರಬಲವಾಗಿದೆ ಮತ್ತು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಆದರೆ ಈ ಬಾರಿ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸವು ಭಾರತ ತಂಡಕ್ಕೆ ಸುಲಭವಲ್ಲ ಎಂದಿದ್ದಾರೆ ಅಖ್ತರ್.
ಸ್ಮಿತ್ ಉಪಸ್ಥಿತಿ ಭಾರತಕ್ಕೆ ಸವಾಲು
ಕಳೆದ ಬಾರಿ ಪ್ರವಾಸದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲುವನ್ನು ಸಾಧಿಸಿತ್ತು. ಆದರೆ ಈ ಬಾರಿ ಅದು ಸಾಕಷ್ಟು ಕಷ್ಟಕರವಾಗಿರಲಿದೆ. ಈ ಬಾರಿ ಸ್ಟೀವ್ ಸ್ಮಿತ್ ಉಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿಭಿನ್ನ ತಂಡವಾಗಲಿದೆ ಎಂದು ಅಖ್ತರ್ ಎಚ್ಚರಿಸಿದ್ದಾರೆ. ಜೊತೆಗೆ ಮುಂದಿನ ಆರರಿಂದ ಎಂಟು ತಿಂಗಳು ಯಾವುದೇ ಕ್ರಿಕೆಟ್ ನಡೆಯಲಾರದು ಎಂದು ಅವರು ಹೇಳಿದ್ದಾರೆ.