ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 2019ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕಮ್ಬ್ಯಾಕ್ನ ಸೂಚನೆ ಕೊಟ್ಟಿದ್ದಾರೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ಮತ್ತೊಮ್ಮೆ ಮೈದಾನಕ್ಕೆ ಇಳಿಯುವ ಸಾಧ್ಯತೆಯಿದೆ ಎಂದಿದ್ದಾರೆ ಯುವರಾಜ್ ಸಿಂಗ್.
ಯುವರಾಜ್ ಸಿಂಗ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಅಚ್ಚರಿಯ ಘೋಷಣೆ ಮಾಡಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹೇಳೊಕೊಂಡಿದ್ದಾರೆ. ಅಲ್ಲದೆ ಇದಕ್ಕಿಂತ ವಿಶೇಷವಾದ ಭಾವನೆ ಬೇರೆ ಇಲ್ಲ ಎಂದು ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್: ಸ್ಪಿನ್ ದಾಳಿಗೆ ಪರದಾಡಿದ ಭಾರತೀಯ ಆಟಗಾರರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಇನ್ಜಮಾಮ್
ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕದ ವಿಡಿಯೋ ಹಂಚಿಕೊಂಡು ಈ ಪೋಸ್ಟ್ ಮಾಡಿದ್ದಾರೆ ಯುವಿ. ಇದರಲ್ಲಿ "ನಿಮ್ಮ ನಿರ್ದಿಷ್ಟ ಸ್ಥಾನವನ್ನು ದೇವರು ನಿಗದಿಪಡಿಸಿದ್ದಾರೆ. ಸಾರ್ವಜನಿಕರ ಒತ್ತಾಯದ ಮೇರೆಗೆ ನಾನು ಬಹುಶಃ ಮುಂದಿನ ಫೆಬ್ರವರಿಯಲ್ಲಿ ಪಿಚ್ಗೆ ಮರಳಲಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದಗಳು. ನನಗೆ ಅದು ಬಹಳಷ್ಟು ಅಗತ್ಯವಿದೆ. ಭಾರತೀಯ ತಂಡವನ್ನು ನೀವು ಪ್ರೋತ್ಸಾಹಿಸುತ್ತಾ ಇರಿ. ನಿಜವಾದ ಅಭಿಮಾನಿ ಕಠಿಣ ಸಂದರ್ಭದಲ್ಲಿಯೂ ತಮ್ಮ ಬೆಂಬಲವನ್ನು ನೀಡುತ್ತಾರೆ" ಎಂದು ಯುವರಾಜ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
ಭಾರತದ ಪರವಾಗಿ ಒಂದೂವರೆ ದಶಕಕ್ಕೂ ಅಧಿಕ ಕಾಲ ಆಡಿರುವ ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರವಾಗಿ ಅನೇಕ ಸ್ಮರಣೀಯ ಇನ್ನಿಂಗ್ಸ್ ನೀಡಿದ್ದಾರೆ. ಅದರಲ್ಲೂ 2011ರಲ್ಲಿ ಏಕದಿನ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ನೀಡಿದ ಆಲ್ರೌಂಡರ್ ಆಟ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣವಾಗಿತ್ತು ಎಂಬುದು ಗಮನಾರ್ಹ ಸಂಗತಿ. ಈ ವಿಶ್ವಕಪ್ನಲ್ಲಿ ಯುವಿ 90.50 ಸರಾಸರಿಯಲ್ಲಿ 362 ರನ್ ಬಾರಿಸಿದ್ದಾರೆ. ಅಲ್ಲದೆ ಬೌಲಿಂಗ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ಯುವಿ 15 ವಿಕೆಟ್ ಸಂಪಾದಿಸಿದ್ದರು. ಯುವರಾಜ್ ಸಿಂಗ್ ವೃತ್ತಿ ಜೀವನದ ಅತ್ಯುತ್ತಮ ಪ್ರದರ್ಶನವನ್ನು ಈ ವಿಶ್ವಕಪ್ನಲ್ಲಿ ನೀಡಿದ್ದರು. ಆದರೆ ಅದಾದ ನಂತರ ಯುವರಾಜ್ ಸಿಂಗ್ ಕ್ಯಾನ್ಸರ್ಗೆ ತುತ್ತಾಗಿ ಚಿಕಿತ್ಸೆಗೆ ಒಳಗಾಗಿ ಚೇತರಿಸಿ ಕಮ್ಬ್ಯಾಕ್ ಮಾಡಿದ್ದರು.
2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ಯುವರಾಜ್ ಸಿಂಗ್ ಕೆಲ ವಿದೇಶಿ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಲ್ಲದೆ ಕಳೆದ ಮಾರ್ಚ್ನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನಲ್ಲಿಯೂ ಯುವರಾಜ್ ಸಿಂಗ್ ಭಾಗಿಯಾಗಿದ್ದರು.
ಟೀಮ್ ಇಂಡಿಯಾ ಆಟಗಾರರ ಧೈರ್ಯ ಸಾಕಾಗಲಿಲ್ಲ: ಸೋತ ಬಳಿಕ ನಾಯಕ ಕೊಹ್ಲಿ ಮಾತು
ಇನ್ನು ಯುವರಾಜ್ ಸಿಂಗ್ ದೇಶೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವ ಬಗ್ಗೆ ಇದಕ್ಕೂ ಮೊದಲು ನಿರ್ಧಾರವನ್ನು ಮಾಡಿದ್ದಾರೆ ಎಂಬಂತಾ ಬೆಳವಣಿಗೆಗಳು ನಡೆದಿತ್ತು. ಆದರೆ ನಂತರ ಅದು ತಣ್ಣಗಾಗಿತ್ತು. ಇದೀಗ ಯುವರಾಜ ಸಿಂಗ್ ಅವರೇ ಕಮ್ಬ್ಯಾಕ್ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರ ಕಮ್ಬ್ಯಾಕ್ ಯಾವ ರೀತಿ ಇರಲಿದೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಸ್ವತಃ ಯುವರಾಜ್ ಸಿಂಗ್ ಮಾಹಿತಿ ನೀಡುವ ಸಾಧ್ಯತೆಯಿದೆ.