ಸೋಲನ್ನು ಸಮೀಪಕ್ಕೆ ಸೆಳೆದುಕೊಂಡಿದ್ದ ಭಾರತ
ನಾಯಕ ವಿರಾಟ್ ಕೊಹ್ಲಿ (94 ರನ್), ಕೆಎಲ್ ರಾಹುಲ್ (62) ಸ್ಫೋಟಕ ಅರ್ಧ ಶತಕದ ನೆರವಿನಿಂದ ಭಾರತ ತಂಡ, ವಿಂಡೀಸ್ ನೀಡಿದ್ದ 208 ರನ್ ಗುರಿಯನ್ನು ತಲುಪಿ ಸಂಭ್ರಮಿಸಿದ್ದು ನಿಜ. ಆದರೆ ವಿಂಡೀಸ್ ಇನ್ನಿಂಗ್ಸ್ನಲ್ಲಿ ಭಾರತ ಬಹಳಷ್ಟು ಕ್ಯಾಚ್ಗಳನ್ನು ಕೈಚೆಲ್ಲಿ ಸೋಲನ್ನು ಸಮೀಪಕ್ಕೆ ಸೆಳೆದುಕೊಂಡಿದ್ದೂ ಅಷ್ಟೇ ನಿಜ.
ರನ್ ಕೊಟ್ಟಿದ್ದೀರಿ, ರನ್ ಹೊಡೀಲೇಬೇಕು
'ಭಾರತ (ತಂಡ) ಇವತ್ತು ಫೀಲ್ಡಿಂಗ್ ವಿಚಾರದಲ್ಲಿ ತುಂಬಾ ದುರ್ಬಲವಾಗಿತ್ತು! ಯುವ ಆಟಗಾರರು ಚೆಂಡನ್ನು ಕೊಂಚ ತಡವಾಗಿ ತಲುಪುತ್ತಿದ್ದಾರೆ. ಇಲ್ಲಿ ಕೊಟ್ಟ ರನ್ಗಳೆಲ್ಲ ಯುವ ಆಟಗಾರರಿಂದ ಬರಲಿ,' ಎಂದು ವಿಂಡೀಸ್ ಇನ್ನಿಂಗ್ಸ್ ವೇಳೆ ಯುವರಾಜ್ ಟ್ವೀಟ್ ಮಾಡಿದ್ದರು. ಆದರೆ ಭಾರತ ಗೆದ್ದ ಬಳಿಕ ತಂಡದ ಹೋರಾಟವನ್ನು ಶ್ಲಾಘಿಸಿ ಯುವಿ ಮತ್ತೊಂದು ಟ್ವೀಟ್ ಮಾಡಿದ್ದರು.
ಕ್ಯಾಚ್ ಕೈಚೆಲ್ಲಿದ ಸುಂದರ್, ಶರ್ಮಾ
ಅಂದ್ಹಾಗೆ, ಕೆರಿಬಿಯನ್ ಇನ್ನಿಂಗ್ಸ್ನ 16ನೇ ಓವರ್ನಲ್ಲಿ ಶಿಮ್ರಾನ್ ಹೆಟ್ಮೈಯರ್ 44 ರನ್ ಗಳಿಸಿದ್ದಾಗ ವಾಷಿಂಗ್ಟನ್ ಸುಂದರ್ ಕ್ಯಾಚ್ ಬಿಟ್ಟಿದ್ದರು. ಅನಂತರ ಹೆಟ್ಮೈಯರ್ 56 ರನ್ ಕೊಡುಗೆಯಿತ್ತರು. ಅದೇ ಓವರ್ನಲ್ಲಿ ರೋಹಿತ್ ಶರ್ಮಾ ಕೂಡ 24 ರನ್ ಮಾಡಿದ್ದ ಕೀರನ್ ಪೊಲಾರ್ಡ್ ಕ್ಯಾಚ್ ಕೈಚೆಲ್ಲಿದರು. ಪೊಲಾರ್ಡ್ 19 ಎಸೆತಗಳಿಗೆ 37 ರನ್ ಚಚ್ಚಿದರು.
ರನ್ ಒತ್ತಡ ಹೇರಿದ್ದ ಕೆರಿಬಿಯನ್ನರು
ಕೊಹ್ಲಿ ಕೂಡ ಕ್ಯಾಚೊಂದನ್ನು ಡ್ರಾಪ್ ಮಾಡಿದ್ದರು. ಅಲ್ಲದೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಿಸ್ ಫೀಲ್ಡಿಂಗ್ಗಾಗಿ ಎದುರಾಳಿ ವಿಂಡೀಸ್ಗೆ ಒಂದಿಷ್ಟು ರನ್ ಕೊಡುಗೆಯಿತ್ತಿತ್ತು. ಇವೆಲ್ಲದರ ಪರಿಣಾಮ ಮೊದಲ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ 207 ರನ್ ಬಾರಿಸಿ ಆತಿಥೇಯರಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿತ್ತು.