ಭಾರತ ತಂಡದಲ್ಲಿ ಇಬ್ಬರಿಗೆ ಕೊರೊನಾ
ಶ್ರೀಲಂಕಾ ಪ್ರವಾಸ ಸರಣಿಯ ಪಂದ್ಯಗಳು ಮುಗಿಯುತ್ತಲೇ ಭಾರತೀಯ ತಂಡದಲ್ಲಿ ಕೃನಾಲ್ ಪಾಂಡ್ಯ ಅಲ್ಲದೆ ಇನ್ನಿಬ್ಬರಿಗೆ ಕೋವಿಡ್-19 ಬಂದಿರುವುದು ವರದಿಯಾಗಿದೆ. ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮತ್ತು ಆಲ್ ರೌಂಡರ್, ಕನ್ನಡಿಗ ಕೃಷ್ಣಪ್ಪ ಗೌತಮ್ಗೆ ಕೋವಿಡ್ ಪಾಸಿಟಿವ್ ಬಂದಿದೆ. ಆದರೆ ಜುಲೈ 29ಕ್ಕೆ ಪ್ರವಾಸ ಸರಣಿ ಕೊನೆಗೊಂಡಿರುವುದರಿಂದ ತಂಡಕ್ಕೆ ಹೆಚ್ಚಿನ ಭೀತಿ ಇಲ್ಲ. ಆದರೆ ಇಂಗ್ಲೆಂಡ್ ಪ್ರವಾಸದಲ್ಲಿರುವ ತಂಡಕ್ಕೆ ಬೆಂಬಲವಾಗಿ ಹೋಗಲು ಲಭ್ಯರಿದ್ದ ಆಟಗಾರರಿಗೇನಾದರೂ ಕೋವಿಡ್ ಸೋಂಕು ತಾಗಿದರೆ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೇಲೂ ಕೊರೊನಾ ಪರಿಣಾಮ ಬೀರಲಿದೆ.
9+2 ಮಂದಿ ಕ್ವಾರಂಟೈನ್
ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್ ಬಂದಾಗ ಪಾಂಡ್ಯ ಜೊತೆ ಸಂಪರ್ಕಿಸಿದ್ದ ಅಥವಾ ಸಂಪರ್ಕದ ಅನುಮಾನವಿದ್ದ 9 ಮಂದಿ ಭಾರತೀಯ ಆಟಗಾರರು ಐಸೊಲೇಶನ್ ಪಾಲಿಸಿದ್ದರು. ಇದರಿಂದ ದ್ವಿತೀಯ ಮತ್ತು ತೃತೀಯ ಪಂದ್ಯದಲ್ಲಿ ಭಾರತಕ್ಕೆ ಸೋಲಾಗಿತ್ತು. ಈಗ ಮತ್ತಿಬ್ಬರು ಕ್ವಾರಂಟೈನ್ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಯುಜುವೇಂದ್ರ ಚಾಹಲ್ ಮತ್ತು ಕೃಷ್ಣಪ್ಪ ಗೌತಮ್ ಕೂಡ ಕ್ವಾರಂಟೈನ್ ಪಾಲಿಸುತ್ತಿರುವುದಾಗಿ ತಿಳಿದು ಬಂದಿದೆ.
ಟಿ20ಐ ಸರಣಿಯಲ್ಲಿ ಭಾರತಕ್ಕೆ ಮುಖಭಂಗ
ಕೋವಿಡ್-19 ಸೋಂಕಿನ ಪರಿಣಾಮವಾಗಿಯೇ ಭಾರತೀಯ ತಂಡ ಟಿ20ಐ ಸರಣಿಯಲ್ಲಿ ಮುಖಭಂಗ ಅನುಭವಿಸುವಂತಾಗಿದೆ. ಏಕದಿನ ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದು ಸರಣಿಯನ್ನೂ ವಶಪಡಿಸಿಕೊಂಡಿದ್ದ ಭಾರತ, ಟಿ20ಐ ಸರಣಿಯಲ್ಲಿ ಮೊದಲ ಒಂದು ಪಂದ್ಯ ಗೆದ್ದು ಇನ್ನುಳಿದ ಎರಡೂ ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿದೆ. ಕೋವಿಡ್ ಕಾರಣ 9 ಆಟಗಾರರು ಕ್ವಾರಂಟೈನ್ನಲ್ಲಿ ಇದ್ದಿದ್ದರಿಂದ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿದ್ದ ಹೊಸ ಆಟಗಾರರಿಂದ ನಿರೀಕ್ಷಿತ ಆಟ ಬಾರದೆ ಭಾರತ ಟಿ20ಐ ಸರಣಿಯನ್ನು ಕಳೆದುಕೊಂಡಿದೆ.
ಇಂಗ್ಲೆಂಡ್ನಿಂದ ಬಂದ ಕೊರೊನಾ ಸೋಂಕು
ಭಾರತ ವಿರುದ್ಧದ ಸರಣಿಗೂ ಮುನ್ನ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ ಪ್ರವಾಸ ಸರಣಿ ಆಡಿತ್ತು. ಆ ಸರಣಿ ವೇಳೆ ಇಂಗ್ಲೆಂಡ್ ತಂಡದಲ್ಲಿ ಹಲವರಿಗೆ ಕೊರೊನಾ ಸೋಂಕು ತಗುಲಿದ್ದು ವರದಿಯಾಗಿತ್ತು. ಇಂಗ್ಲೆಂಡ್ನಿಂದ ವಾಪಸ್ಸಾದ ಬಳಿಕ ಶ್ರೀಲಂಕಾ ತಂಡದಲ್ಲೂ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದವು. ಬಳಿಕ ಈಗ ಭಾರತೀಯ ತಂಡದಲ್ಲೂ ಒಂದೊಂದಾಗಿ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಅಂದರೆ ಅಸಲಿಗೆ ಸೋಂಕು ಇಂಗ್ಲೆಂಡ್ನಿಂದ ಬಂದಿದೆಯಾ ಎಂದು ಅನುಮಾನ ಬರುತ್ತಿದೆ.
ಕೊನೇ ಪಂದ್ಯದಲ್ಲಿ ಇಬ್ಬರೂ ಆಡಿರಲಿಲ್ಲ
ಭಾರತ-ಶ್ರೀಲಂಕಾ ನಡುವಿನ ಜುಲೈ 29ರ ಕೊನೇ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಮತ್ತು ಕೃಷ್ಣಪ್ಪ ಗೌತಮ್ ಇಬ್ಬರೂ ಆಡಿರಲಿಲ್ಲ. ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್ ಬಂದಿದ್ದ ಬೆನ್ನಲ್ಲೇ ಇಬ್ಬರೂ ಕೂಡ 9 ಆಟಗಾರರ ಜೊತೆ ಕ್ವಾರಂಟೈನ್ ಪಾಲಿಸಿದ್ದರು. ಹೀಗಾಗಿ ಸದ್ಯ ನೆಗೆಟಿವ್ ಬಂದಿರುವ ಆಟಗಾರರ ಸಂಪರ್ಕಕ್ಕೆ ಇಬ್ಬರೂ ಬಂದಿರುವ ಸಾಧ್ಯತೆ ಇಲ್ಲ. ಹೀಗಾಗಿ ಭಾರತಿಯ ತಂಡ ನಿರ್ವಹಣಾ ಸಮಿತಿಗೆ ಇದು ನಿರಾಳತೆ ನೀಡಿದೆ. ಆದರೆ ಕೊನೇ ಟಿ20ಐ ಪಂದ್ಯದಲ್ಲಿ ಭಾರತ 7 ವಿಕೆಟ್ ಸೋಲನುಭವಿಸಿತ್ತು.