ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯುಜುವೇಂದ್ರ ಚಹಾಲ್ಗೆ ಬೆಂಗಳೂರು ಮತ್ತು ಕರ್ನಾಟಕ ಎಂದರೆ ಅಪಾರವಾದ ಪ್ರೀತಿ ಮತ್ತು ಗೌರವ. ಈ ಹಿಂದೆ ಸಾಕಷ್ಟು ಬಾರಿ ಯುಜುವೇಂದ್ರ ಚಹಾಲ್ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕನ್ನಡಿಗರ ಕುರಿತು ಕನ್ನಡದಲ್ಲಿಯೇ ಬರೆದುಕೊಳ್ಳುವುದರ ಮೂಲಕ ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದನ್ನು ನೀವೆಲ್ಲಾ ನೋಡಿರುತ್ತೀರಿ. ಇದೀಗ ಮತ್ತೆ ಬೆಂಗಳೂರಿನ ಕೊರೊನಾ ಸೋಂಕಿತೆ ಚಿಕಿತ್ಸೆಗೆ ಯುಜುವೇಂದ್ರ ಚಹಾಲ್ ಆರ್ಥಿಕ ಸಹಾಯ ಮಾಡುವುದರ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.
ಬೆಂಗಳೂರಿನ ಅಮುದ ಎಂಬುವವರು ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿಗೆ ಒಳಗಾಗಿದ್ದು ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಹೆಚ್ಚುವರಿ ಹಣ ಬೇಕಾದಾಗ ಕೆಲವೊಂದಿಷ್ಟು ಸ್ನೇಹಿತರು ಸೇರಿ ಆಕೆಯ ಚಿಕಿತ್ಸೆಗೆ ಹಣ ಸಂಗ್ರಹಿಸಲು ಶುರು ಮಾಡಿದ್ದರು. ಅಮುದ ಚಿಕಿತ್ಸೆಗೆ 4 ಲಕ್ಷದ ಅಗತ್ಯತೆ ಇತ್ತು, ಯುಜುವೇಂದ್ರ ಚಹಾಲ್ ಇವರಿಗೆ 2 ಲಕ್ಷ ನೀಡುವುದರ ಮೂಲಕ ಚಿಕಿತ್ಸೆಗೆ ಬೇಕಾಗಿದ್ದ ಒಟ್ಟು ಹಣದಲ್ಲಿ ಅರ್ಧದಷ್ಟನ್ನು ತಾವೇ ನೀಡಿದ್ದಾರೆ.
ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಸೇರಿ ಕೊರೊನಾ ವಿರುದ್ಧ ಹೋರಾಡಲು ಹಣ ಸಂಗ್ರಹಿಸುತ್ತಿದ್ದ ಅಭಿಯಾನಕ್ಕೂ ಸಹ ಯುಜುವೇಂದ್ರ ಚಹಾಲ್ 95,000 ರೂಪಾಯಿಗಳನ್ನು ದೇಣಿಗೆ ನೀಡಿದ್ದರು. ಇದೀಗ ಎರಡನೇ ಬಾರಿಯೂ ಕೊರೊನಾ ವಿರುದ್ಧ ಹೋರಾಡಲು ಯುಜುವೇಂದ್ರ ಚಹಾಲ್ ಆರ್ಥಿಕ ನೆರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.