ಕೊರೊನಾವೈರಸ್ ಎರಡನೇ ಅಲೆ ಭಾರತ ದೇಶದಾದ್ಯಂತ ಹೆಚ್ಚಾಗುತ್ತಿದೆ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಎಷ್ಟೋ ಜನ ಸೋಂಕಿತರು ಆಕ್ಸಿಜನ್ ಸಿಗದೆ ಮರಣ ಹೊಂದುತ್ತಿದ್ದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಕೊವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿದೆ.
ಕಳೆದ ಶುಕ್ರವಾರ ( ಮೇ 7 ) ಟ್ವಿಟ್ಟರ್ ಮೂಲಕ ವಿರುಷ್ಕಾ ದಂಪತಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಇಡೀ ದೇಶವೇ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿದೆ, ಸೋಂಕಿತರಿಗೆ ಚಿಕಿತ್ಸೆ ಪಡೆಯಲು ಸರಿಯಾದ ಬೆಡ್ ವ್ಯವಸ್ಥೆ ಮತ್ತು ಆಕ್ಸಿಜನ್ ವ್ಯವಸ್ಥೆ ಸಿಗುತ್ತಿಲ್ಲ ಹೀಗಾಗಿ ಇಬ್ಬರೂ ಸೇರಿ #InThisTogether ಅಭಿಯಾನದ ಮೂಲಕ 7 ಕೋಟಿ ಹಣವನ್ನು ಸಂಗ್ರಹಿಸಿ ಕೊವಿಡ್ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿರುವುದಾಗಿ ತಿಳಿಸಿದೆ.
ಈ ಅಭಿಯಾನಕ್ಕೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ 2 ಕೋಟಿ ದೇಣಿಗೆಯನ್ನು ನೀಡಿದ್ದು ವಿರುಷ್ಕಾ ದಂಪತಿ ಬಳಿಕ ಸಾಕಷ್ಟು ಜನ ಕ್ರೀಡಾಭಿಮಾನಿಗಳು ಮತ್ತು ಕ್ರಿಕೆಟಿಗರು ತಮ್ಮ ಕೈಲಾದಷ್ಟು ಹಣವನ್ನು ಈ ಅಭಿಯಾನದಡಿ ದೇಣಿಗೆಯಾಗಿ ನೀಡುತ್ತಿದ್ದಾರೆ. ಇದೀಗ ಈ ಸಾಲಿಗೆ ಯುಜ್ವೇಂದ್ರ ಚಹಾಲ್ ಅವರು ಕೂಡಾ ಸೇರ್ಪಡೆಗೊಂಡಿದ್ದು 95000 ರೂಪಾಯಿ ದೇಣಿಗೆಯನ್ನು ಈ ಅಭಿಯಾನದಡಿ ಕೊವಿಡ್ ಪರಿಹಾರ ನಿಧಿಗೆ ನೀಡಿದ್ದಾರೆ.