ಆರ್ಸಿಬಿ ತಂಡಕ್ಕಾಗಿ ಒಟ್ಟಿಗೆ ಆಡಿರುವ ಕೊಹ್ಲಿ-ಚಹಾಲ್
ವಿರಾಟ್ ಕೊಹ್ಲಿ ಮತ್ತು ಯುಜ್ವೇಂದ್ರ ಚಹಾಲ್ ಇವರಿಬ್ಬರು ಭಾರತ ತಂಡ ಹಾಗೂ ಐಪಿಎಲ್ನಲ್ಲಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕಾಗಿ ಒಟ್ಟಿಗೆ ಆಡಿದ್ದರು. ಆರ್ಸಿಬಿಯ ನಾಯಕನಾಗಿ ವಿರಾಟ್ ಕೊಹ್ಲಿ ಆಗಾಗ್ಗೆ ಚಹಾಲ್ ಅವರಿಂದ ಉತ್ತಮ ಪ್ರದರ್ಶನ ಹೊರತರಲು ನೆರವಾದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ಅವಕಾಶ ಸಿಗುವಂತೆ ಮಾಡಿತು ಮತ್ತು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರು.
ಆದರೆ, ಕಾಲಾನಂತರದಲ್ಲಿ ಎದುರಾಳಿ ತಂಡಗಳು ಯುಜ್ವೇಂದ್ರ ಚಹಾಲ್ ಅವರ ಸ್ಪಿನ್ ಬೌಲಿಂಗ್ ಅನ್ನು ಅರ್ಥಮಾಡಿಕೊಂಡರು ಮತ್ತು ಅವರ ಬೌಲಿಂಗ್ ಮೇಲೆ ಪ್ರಾಬಲ್ಯ ಸಾಧಿಸಲು ಹಲವು ಮಾರ್ಗಗಳನ್ನು ರೂಪಿಸಿಕೊಂಡರು ಎಂದು ಮಾಜಿ ಭಾರತೀಯ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಹೇಳಿದರು.
ಭಾರತ ತಂಡದಲ್ಲಿ ಚಹಾಲ್ ಸ್ಥಾನದ ಬಗ್ಗೆ ಹಲವು ಪ್ರಶ್ನೆ
ಇಂದಿನ ಭಾರತ ತಂಡದಲ್ಲಿ ಚಹಾಲ್ ಸ್ಥಾನದ ಬಗ್ಗೆ ಹಲವು ಪ್ರಶ್ನೆಗಳೆದ್ದಿದ್ದು, ಲೆಗ್ ಸ್ಪಿನ್ನರ್ ಗಮನ ಹರಿಸಬೇಕಾದ ವಿಷಯ ಎಂದು ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ತಿಳಿಸಿದ್ದು, ಅವರ ಹೇಳಿಕೆ ಈ ಕೆಳಗಿದೆ.
"ಯುಜ್ವೇಂದ್ರ ಚಾಹಲ್ ವೃತ್ತಿಜೀವನದ ಗ್ರಾಫ್ ಆರಂಭದಲ್ಲಿ ಏರಿತು, ಕಾರಣ ವಿರಾಟ್ ಕೊಹ್ಲಿ. ಭಾರತ ತಂಡ ಮತ್ತು ಆರ್ಸಿಬಿ ನಾಯಕರಾಗಿ ಚಹಾಲ್ನ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದರು. ಆದರೆ ಯಾವುದೇ ಆಟಗಾರನ ವೃತ್ತಿಜೀವನದ ಪರೀಕ್ಷೆಯ ಭಾಗವೆಂದರೆ ಅವರು ಎದುರಾಳಿ ಆಟಗಾರನಿಂದ ವಿಶ್ಲೇಷಣೆಗೆ ಒಳಪಟ್ಟಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು".
"ಟಿ20 ಪಂದ್ಯಗಳಲ್ಲಿ ಎದುರಾಳಿ ಬ್ಯಾಟರ್ಗಳು ಪ್ರತಿ ಬಾಲ್ಗೆ ಹೊಡೆಯಲು ಪ್ರಯತ್ನಿಸುತ್ತಿರುವುದರಿಂದ ಅವರು ಔಟ್ ಆಗುವ ಹೆಚ್ಚಿನ ಅವಕಾಶಗಳಿವೆ. ಆದರೆ 50 ಓವರ್ಗಳ ಪಂದ್ಯಗಳಲ್ಲಿ ಎದುರಾಳಿಗಳ ಕೈಯಲ್ಲಿ ವಿಕೆಟ್ಗಳಿದ್ದರೆ ಕೊನೆಯ 10 ಓವರ್ಗಳಲ್ಲಿ ರನ್ ವೇಗವನ್ನು ಹೆಚ್ಚಿಸಬಹುದು ಎಂದು ಅವರಿಗೆ ತಿಳಿದಿದೆ," ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಅಭಿಪ್ರಾಯಪಟ್ಟರು.
ಏಕೆ ಸುಲಭವಾಗಿ ಹೊಡೆಯುತ್ತಾರೆಂದು ಸಮಾಲೋಚನೆ ಮಾಡಬೇಕು
ಬೌಲಿಂಗ್ ತಂತ್ರವು ಆಟದ ಒಂದು ನಿರ್ಣಾಯಕ ಭಾಗವಾಗಿದೆ. ಬೌಲರ್ಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಪಿಚ್ ಬಗ್ಗೆ ವಿವರವಾದ ಮಾಹಿತಿ ತಿಳಿದುಕೊಂಡಿರಬೇಕಿ. ಭಾರತದ ತಂಡದ ಮ್ಯಾನೇಜ್ಮೆಂಟ್ ಯುಜ್ವೇಂದ್ರ ಚಹಾಲ್ ಅವರೊಂದಿಗೆ ಕುಳಿತು ಬ್ಯಾಟರ್ಗಳು ಅವರ ಎಸೆತಗಳನ್ನು ಏಕೆ ಸುಲಭವಾಗಿ ಹೊಡೆಯುತ್ತಾರೆಂದು ಸಮಾಲೋಚನೆ ಮಾಡಬೇಕು ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ತಿಳಿಸಿದರು.
ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತನ್ನ ಬೌಲಿಂಗ್ನಲ್ಲಿ ಹೊಸ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬೇಕೆಂದು ಬಯಸುತ್ತೇನೆ. ಇದರಿಂದಾಗಿ ಚಹಾಲ್ ಭಾರತ ತಂಡಕ್ಕಾಗಿ ವಿಕೆಟ್-ಟೇಕರ್ ಆಗಿ ಮರಳುತ್ತಾನೆ ಎಂದು ಮಾಜಿ ಸ್ಪಿನ್ನರ್ ಹೇಳಿಕೆ ನೀಡಿದ್ದಾರೆ:
ಕಳೆದ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಆಯ್ಕೆಯಾಗಿದ್ದರೂ, ಒಂದೂ ಪಂದ್ಯವಾಡದೆ ಮರಳಿದರು. ಅವರ ಬದಲಿಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದರು. ಇನ್ನು ನ್ಯೂಜಿಲೆಂಡ್ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲಿ ಚಹಾಲ್ ಕೇವಲ ಒಂದು ಪಂದ್ಯದಲ್ಲಿ ಬೌಲಿಂಗ್ ಮಾಡಿದರು ಮತ್ತು 10 ಓವರ್ಗಳಲ್ಲಿ 67 ರನ್ಗಳನ್ನು ವಿಕೆಟ್ ರಹಿತರಾದರು.
ಕಳೆದ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್ ಆಗಿ ಮಿಂಚಿದರು. ಆದರೂ ಬಾಂಗ್ಲಾದೇಶ ವಿರುದ್ಧದ ಏಕದಿನ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಅವರ ಹೆಸರಿಲ್ಲ. ಹೀಗೆ ಕಡೆಗಣಿಸಿದರೆ ಭವಿಷ್ಯದಲ್ಲಿ ಈ ಲೆಗ್ ಸ್ಪಿನ್ನರ್ ಕಥೆ ಏನು ಎಂಬುದು ಕುತೂಹಲವಾಗಿದೆ.