ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಆಗಸ್ಟ್ 18ರಿಂದ ಆರಂಭವಾಗಲಿದೆ. ಈ ಸರಣಿಗೆ ಆತಿಥೇಯ ಜಿಂಬಾಬ್ವೆ ತಂಡವನ್ನು ಪ್ರಕಟಿಸಲಾಗಿದ್ದು 17 ಸದಸ್ಯರ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ರೇಗಿಸ್ ಚಕಬ್ವಾ ಮುನ್ನಡೆಸಲಿದ್ದಾರೆ. ಜಿಂಬಾಬ್ವೆ ತಂಡದ ಖಾಯಂ ನಾಯಕ ಕ್ರೇಗ್ ಇರ್ವಿನ್ ಗಾಯಗೊಂಡಿರುವ ಕಾರಣ ಈ ಸರಣಿಯಲ್ಲಿಯೂ ಚಕಬ್ವಾಗೆ ನಾಯಕತ್ವದ ಹೊಣೆಗಾರಿಗೆ ದೊರೆತಿದೆ.
ಜಿಂಬಾಬ್ವೆ ಹಾಗೂ ಭಾರತ ತಂಡಗಳು ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯ ಆಗಸ್ಟ್ 18ರಂದು ಆರಂಭವಾದರೆ ಎರಡನೆ ಪಂದ್ಯ ಆಗಸ್ಟ್ 20 ಹಾಗೂ 3ನೇ ಪಂದ್ಯ ಆಗಸ್ಟ್ 22ರಂದು ನಡೆಯಲಿದೆ.
ಜಿಂಬಾಬ್ವೆ ಸ್ಕ್ವಾಡ್ ಹೀಗಿದೆ: ರಿಯಾನ್ ಬರ್ಲ್, ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ಇನೋಸೆಂಟ್ ಕೈಯಾ, ತಕುದ್ಜ್ವಾನಾಶೆ ಕೈಟಾನೊ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರ, ಟೋನಿ ಮುನ್ಯೊಂಗಾ, ರಿಚರ್ಡ್ ನಾಗರವ, ವಿಕ್ಟರ್ ನ್ಯುಚಿ, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ
ಜಿಂಬಾಬ್ವೆ ಕ್ರಿಕೆಟ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು "ಖಾಯಂ ನಾಯಕ ಗ್ರೇಗ್ ಇರ್ವೀನ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರಣದಿಂದಾಗಿ ಈ ಸರಣಿಗೆ ಅಲಭ್ಯವಾಗಲಿದ್ದು ಅವರ ಗೈರಿನಲ್ಲಿ ಜಿಂಬಾಬ್ವೆ ತಂಡವನ್ನು ಚಕಾಬ್ವಾ ಮುನ್ನಡೆಸಲಿದ್ದಾರೆ" ಎಂದು ತಿಳಿಸಿದೆ.
ಇನ್ನು ಜಿಂಬಾಬ್ವೆ ತಂಡದಲ್ಲಿ ಸಾಕಷ್ಟು ಪ್ರಮುಖ ಆಟಗಾರರರು ಈ ಸರಣಿಯಿಂದ ಹೊರಗುಳಿಯುತ್ತಿದ್ದಾರೆ. ತಂಡದ ಪ್ರಮುಖ ಆಟಗಾರರಾದ ಬ್ಲೆಸಿಂಗ್ ಮುಸರಬಾನಿ, ಟೆಂಡೈ ಚಾಟರಾ, ವೆಲ್ಲಿಂಗ್ಟನ್ ಮಸಕಸಾ ಈ ಸರಣಿಯಿಂದ ಹೊರಗುಳಿದಿದ್ದಾರೆ. ಈ ಮೂವರು ಕೂಡ ಗಾಯದಿಂದ ಬಳಲುತ್ತಿದ್ದು ಪ್ರಮುಖ ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ.
ಭಾರತ ತಂಡಕ್ಕೆ ಕೆಎಲ್ ರಾಹುಲ್ ನಾಯಕ: ಇನ್ನು ಜಿಂಬಾಬ್ವೆ ಪ್ರವಾಸವನ್ನು ಕೈಗೊಳ್ಳಲಿರುವ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದ್ದು ಪ್ರವಾಸಕೈಗೊಳ್ಳಲು ಭಾರತ ತಂಡ ಸಜ್ಜಾಗಿದೆ. ಈ ಸರಣಕಿಯಲ್ಲಿ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಖಾಯಂ ನಾಯಕ ರೋಹಿತ್ ಶರ್ಮಾ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಭಾರತ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಳ್ಲಲಿದ್ದು ತಂಡವನ್ನು ಮುನ್ನಡೆಸಲಿದ್ದಾರೆ. ಇದಕ್ಕೂ ಮುನ್ನ ಶಿಖರ್ ಧವನ್ ಅವರನ್ನು ಈ ಸರಣಿಗೆ ನಾಯಕ ಎಂದು ಹೆಸರಿಸಲಾಗಿತ್ತು. ಆದರೆ ನಂತರ ರಾಹುಲ್ಗೆ ಈ ಹೊಣೆ ನೀಡಲಾಗಿದೆ.
ಭಾರತ ಸ್ಕ್ವಾಡ್ ಹೀಗಿದೆ: ಶಿಖರ್ ಧವನ್, ಕೆಎಲ್ ರಾಹುಲ್(ನಾಯಕ) ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.