ಅನಿರೀಕ್ಷಿತ ಬದಲಾವಣೆ
ಪಂದ್ಯದ ಆರಂಭದಲ್ಲೇ ಭಾರತ ಅನಿರೀಕ್ಷಿತ ಬದಲಾವಣೆಗೆ ಗುರಿಯಾಯಿತು. ಅನಾಸ್ ಎಡ್ತೋಡಿಕಾ ಗಾಯಗೊಂಡ ಕಾರಣ ಅವರ ಸ್ಥಾನದಲ್ಲಿ ಸಲಾಂ ರಂಜನ್ ಸಿಂಗ್ ಅಂಗಣಕ್ಕಿಳಿದರು. ಆರಂಭದ ಕೆಲವು ನಿಮಿಷಗಳ ಕಾಲ ಬಹೆರಿನ್ ಭಾರತ ತಂಡವನ್ನು ನಡುಗಿಸುವ ಪ್ರದರ್ಶನ ತೋರಿತ್ತು. ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತು. ಆದರೆ ಗೋಲ್ಕೀಪರ್ ಗುರ್ಪ್ರೀತ್ ಸಿಂಗ್ ಹಾಗೂ ಸಂದೇಶ್ ಜಿಂಗಾನ್ ಬಹೆರಿನ್ನ ಯಶಸ್ಸಿಗೆ ಅಡ್ಡಿಯಾದರು.
ಗೋಲಿಗೆ ಅವಕಾಶವಿತ್ತು
ಸುನಿಲ್ ಛೆಟ್ರಿ ಹಾಗೂ ಉದಾಂತ್ ಸಿಂಗ್ ಅವರಿಗೆ ಎರಡು ಬಾರಿ ಗೋಲು ಗಳಿಸುವ ಅವಕಾಶ ವಿದ್ದಿತ್ತು. ಆದರೆ ವಾಲೀದ್ ಅದಕ್ಕೆ ಆಸ್ಪದ ನೀಡಲಿಲ್ಲ. ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು. ಕೊನೆಯ ಕ್ಷಣದಲ್ಲಿ ಬಹೆರಿನ್ ಗೋಲ್ಬಾಕ್ಸ್ಗೆ ಗುರಿ ಇಟ್ಟರೂ, ಭಾರತದ ಡಿಫೆನ್ಸ್ ಮುರಿಯಲು ಸಾಧ್ಯವಾಗಲಿಲ್ಲ. ಪ್ರಥಮಾ‘ರ್ಧ ೦-೦.
ಡ್ರಾ ಸಂಭ್ರಮ
ಭಾರತಕ್ಕೆ ಡ್ರಾ ಸಾಧಿಸಿದರೆ ಅದೇ ಸಂಭ್ರಮ, ಬಹೆರಿನ್ಗೆ ಮುಂದಿನ ಹಂತ ತಲುಪಬೇಕಾದರೆ ಜಯ ಗಳಿಸಲೇಬೇಕು. ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಭಾರತದ ಪ್ರತಿಯೊಂದು ಹೆಜ್ಜೆಯೂ ಈಗ ಐತಿಹಾಸಿಕ ಸಾಧನೆಯಾಗಿ ರೂಪುಗೊಳ್ಳಲಿದೆ. 2011ರಲ್ಲಿ ಜನವರಿ 14ರಂದು ಕತಾರ್ನಲ್ಲಿ ನಡೆದ ಏಷ್ಯನ್ ಕಪ್ನಲ್ಲಿ ಬಹೆರಿನ್ ತಂಡ ಭಾರತದ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು.
ಎಂಟು ವರ್ಷಗಳ ಹಿಂದೆ
ಎಂಟು ವರ್ಷಗಳ ಹಿಂದೆ ಆಡಿದ ಇತ್ತಂಡಗಳಲ್ಲಿ ಇಬ್ಬರು ಮಾತ್ರ ಈಗ ತಂಡದಲ್ಲಿದ್ದಾರೆ. ಭಾರತದ ಪರ ಸುನಿಲ್ ಛೆಟ್ರಿ ಹಾಗೂ ಬಹೆರಿನ್ ಪರ ಅಬ್ದುಲ್ವಾಹಾಬ್ ಅಲ್ ಸಫಿ. ಅಂದು ಭಾರತದ ಗೋಲ್ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಹಾಗೂ ಬಹೆರಿನ್ ಗೋಲ್ಕೀಪರ್ ವಾಲೀದ್ ಅಲ್ ಹಯಾಮ್ ಬೆಂಚ್ನಲ್ಲಿದ್ದರು. ಈಗ ಗೋಲ್ಕೀಪಿಂಗ್ನಲ್ಲಿದ್ದಾರೆ. ಸುನಿಲ್ ಛೆಟ್ರಿ ಬದಲಿಗೆ ಪ್ರೊಣಾಯ್ಹಲ್ದಾರ್ ಅವರಿಗೆ ತಂಡದ ನಾಯಕತ್ವ ನೀಡಲಾಗಿತ್ತು. ಅನಿರುಧ್ ತಾಪಾ ಸ್ಥಾನದಲ್ಲಿ ರಾಲ್ವಿನ್ ಬೋರ್ಗಸ್ ಅಂಗಣಕ್ಕಿಳಿದರು.