ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮೇಲಿನ ಅಮಾನತು ನಿರ್ಧಾರವನ್ನು ಫಿಫಾ ಹಿಂತೆಗೆದುಕೊಂಡಿದೆ. ಈ ಮೂಲಕ ಭಾರತೀಯ ಫುಟ್ಬಾಲ್ಗೆ ಅತಿ ದೊಡ್ಡ ನಿರಾಳತೆ ದೊರೆತಂತಾಗಿದೆ. ಇದೇ ತಿಂಗಳ 16ನೇ ತಾರೀಕಿನಂದು ಫಿಫಾ ಭಾರತೀಯ ಫುಟ್ಬಾಲ್ ಮೇಲೆ ನಿಷೇಧವನ್ನು ಹೇರುವ ಮೂಲಕ ಆಘಾತ ನೀಡಿತ್ತು. ಈ ಮೂಲಕ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ದೊಡ್ಡ ಮಟ್ಟದ ಮುಖಭಂಗವಾಗಿತ್ತು. ಕಡೆಗೂ ಈ ನಿಷೇಧವನ್ನು ಫಿಫಾ ಹಿಂಪಡೆದುಕೊಂಡಿದೆ. ಈ ನಿರ್ಧಾರದಿಂದಾಗಿ ಮುಂದಿನ ಅಕ್ಟೋಬರ್ನಲ್ಲಿ ಭಾರತದಲ್ಲಿ ಆಯೋಜನೆಯಾಗಬೇಕಿರುವ ಅಂಡರ್-17 ವಿಶ್ವಕಪ್ಗೂ ಗ್ರೀನ್ ಸಿಗ್ನಲ್ ದೊರೆತಂತಾಗಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್)ನಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಉಲ್ಲೇಖಿಸಿ ಫಿಫಾ ಆಗಸ್ಟ್ 16 ರಂದು ಭಾರತವನ್ನು ನಿಷೇಧಿಸಿತು. ಆದರೆ ಈಗ ಫಿಫಾದ ಬ್ಯೂರೋ ಕೌನ್ಸಿಲ್ ಭಾರತದ ಮೇಲೆ ವಿಧಿಸಲಾಗಿದ್ದ ಕಠಿಣ ಕ್ರಮವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.
ಈ ಹಿಂದೆ ಫೆಡರೇಶನ್ ಅನ್ನು ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ಆಡಳಿತ ಮಂಡಳಿಯು ನಿಯಂತ್ರಿಸುತ್ತಿತ್ತು. ಹೊಸ ಸಮಿತಿಯನ್ನು ಆಯ್ಕೆ ಮಾಡುವವರೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಆಡಳಿತ ಮಂಡಳಿಗೆ ಅಧಿಕಾರವನ್ನು ನೀಡಿತು. ಇದೇ ಅವಧಿಯಲ್ಲಿ ಈ ಹಿಂದೆ ಎಐಎಫ್ಎಫ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿತರಾಗಿದ್ದ ಪ್ರಫುಲ್ ಪಟೇಲ್ ಅವರು ಫೆಡರೇಶನ್ನಲ್ಲಿ ಅಕ್ರಮವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಕಂಡುಬಂದಿತ್ತು. ಇವೆಲ್ಲವನ್ನೂ ಪರಿಗಣಿಸಿ ಎಐಎಫ್ಎಫ್ ಅನ್ನು ಅಮಾನತುಗೊಳಿಸಲು ಫಿಫಾ ನಿರ್ಧರಿಸಿತ್ತು.
ಫಿಫಾ ಅಮಾನತಿನ ಹಿನ್ನೆಲೆಯಲ್ಲಿ ಆಗಸ್ಟ್ 28 ರಂದು ಎಐಎಫ್ಎಫ್ ಚುನಾವಣೆಗಳನ್ನು ನಡೆಸಲು ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಸೇರಿದಂತೆ ಏಳು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ಇಬ್ಬರ ನಾಮಪತ್ರ ತಿರಸ್ಕೃತವಾಗಿದೆ.