ಗುವಾಹಟಿ, ಫೆಬ್ರವರಿ 8: ಕೇರಳ ಬ್ಲಾಸ್ಟರ್ಸ್ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಜಯದ ಅಗತ್ಯದೊಂದಿಗೆ ಅಂಗಣಕ್ಕಿಳಿದವು, ಆದರೆ ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವ ಮೂಲಕ ಕೇರಳ ಬ್ಲಾಸ್ಟರ್ಸ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ನೇ ಆಫ್ ಹಂತ ತಲಪುವ ಪ್ರಯತ್ನದಿಂದ ದೂರ ಸರಿಯಬೇಕಾಯಿತು. ನಾರ್ಥ್ ಈಸ್ಟ್ ತಂಡಕ್ಕೆ ಇನ್ನು ನಾಲ್ಕು ಪಂದ್ಯ ಬಾಕಿ ಇದ್ದು ಎಲ್ಲದಲ್ಲಿ ಜಯ ಗಳಿಸಿದರೂ ಟಾಪ್ ನಾಲ್ಕರ ಹಂತ ತಲುಪಲು ಸಾಧ್ಯವಿಲ್ಲ. 24 ಅಂಕ ಗಳಿಸಿದರರೂ ನಾರ್ಥ್ ಈಸ್ಟ್ ಆಸೆ ಈಡೇರದು.
ಗೋಲಿಲ್ಲದ ಪ್ರಥಮಾರ್ಧ
ಇತ್ತಂಡಗಳು 45ನಿಮಿಷಗಳ ಆಟದಲ್ಲಿ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಮನ ಮಾಡಲಿಲ್ಲ. ಇದರಿಂದಾಗಿ ಅವಕಾಶವೂ ಉತ್ತಮವಾಗಿರಲಿಲ್ಲ. 15ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟಟರ್ಸ್ ತಂಡಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಸತ್ಯಸೇನ್ ಸಿಂಗ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು. ಇದರೊಂದಿಗೆ ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತು. ಕೇರಳ ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಿಸಿದರೂ ಗೋಲು ಗಳಿಸುವಲ್ಲಿ ವಿಫಲವಾಯಿತು.
ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹದ ನಡುವೆಯೂ ನಾರ್ಥ್ ಈಸ್ಟ್ ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಯಿತು. ತಂಡಕ್ಕೆ ಜಯ ಗಳಿಸಲು ಉತ್ತಮ ಅವಕಾಶ ಇದಾಗಿದ್ದು, ಮುಂದಿನ 45 ನಿಮಿಷಗಳ ಅವಧಿಯಲ್ಲಿ ಆತಿಥೇಯ ತಂಡ ಯಶಸ್ಸು ಕಾಣಬಹುದೇ, ಅಥವಾ ನಾರ್ಥ್ ಈಸ್ಟ್ ನ ದೌರ್ಬಲ್ಯವನ್ನು ಅರಿತು ಕೇರಳ ಗೋಲು ಗಳಿಸಬಹುದೇ? ಕಾದು ನೋಡುವಂತಾಯಿತು.
ಗೆದ್ದರೂ ಲೆಕ್ಕಾಚಾರವಿದೆ
ಹೀರೋ ಇಂಡಿಯನ್ ಸೂಪರ್ ಲೀಗ್ ನ 76ನೇ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯೊಂದಿಗೆ ಅಂಗಣಕ್ಕಿಳಿಯಿತು. ಇಲ್ಲಿ ಗೆದ್ದರೆ ಮಾತ್ರ ನಾರ್ಐ್ ಈಸ್ಟ್ ನ ಪ್ಲೇ ಆಫ್ ಆಸೆ ಜೀವಂತವಾಗಿ ಉಳಿಯಲಿದೆ.
13 ಪಂದ್ಯಗಳನ್ನಾಡಿ 11 ಅಂಕ ಗಳಿಸಿರುವ ನಾರ್ಥ್ ಈಸ್ಟ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ತಂಡಕ್ಕೆ ಈಗಲೂ ಅಗ್ರ ನಾಲ್ಕರ ಹಂತ ತಲಪುವ ಅವಕಾಶ ಇದೆ. ಅದು ಉಳಿದಿರುವ ಎಲ್ಲ ಐದೂ ಪಂದ್ಯಗಳಲ್ಲಿ ಗೆದ್ದರೆ ಮಾತ್ರ. ಆದರೆ ತಂಡ ಇದುವರೆಗೂ ಜಯ ಕಂಡಿರುವುದು ಎರಡು ಪಂದ್ಯಗಳಲ್ಲಿ ಮಾತ್ರ. ತಂಡದ ಪ್ಲೇ ಆಫ್ ಆಸೆ ಇತರ ತಂಡಗಳ ಫಲಿತಾಂಶವನ್ನೂ ಅವಲಂಭಿಸಿದೆ, ಅಂದರೆ ಉಳಿದಿರುವ ಒಂದು ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿರುವ ಇತರ ತಂಡಗಳು ಸೋಲನುಭವಿಸಬೇಕಾಗಿದೆ. ಅಸಮೂಹ್ ಗ್ಯಾನ್ ಅವರ ಅನುಪಸ್ಥಿತಿ ತಂಡವನ್ನು ಕಾಡುವುದು ಸಹಜ.
ಕಳೆದ ಬಾರಿ ನಾರ್ಥ್ ಈಸ್ಟ್ ತಂಡ ಸೆಮಿಫೈನಲ್ ತಲಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾರ್ಥಲೋಮ್ಯೊ ಒಗ್ಬಚೆ ಈಗ ಕೇರಳ ಬ್ಲಾಸ್ಟರ್ಸ್ ಪರ ಆಡುತ್ತಿದ್ದು, ಈಗ ಅವರಿಗೂ ತನ್ನ ಮಾಜಿ ತಂಡದ ವಿರುದ್ಧ ಹಾಲಿ ತಂಡಕ್ಕೆ ಜಯ ತಂದುಕೊಡಬೇಕಾದ ಅನಿವಾರ್ಯತೆ ಇದೆ. ಪ್ಲೇ ಆಫ್ ಹಂತವನ್ನು ತಲಪುವ ಅವಕಾಶ ಹೊಂದಿದ್ದ ಕೇರಳಕ್ಕೆ, ಚೆನ್ನೈಯಿನ್ ತಂಡದ ವಿರುದ್ಧ 6-3 ಅಂತರದಲ್ಲಿ ಸೋಲನುಭವಿಸುವ ಮೂಲಕ ಆಸೆ ಕಮರಿತು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಯಶಸ್ಸಿನ ಹೆಜ್ಜೆ ಇಟ್ಟರೆ ಮಾತ್ರ ಕೇರಳಕ್ಕೆ ಉಳಿಗಾಲ.