ಜೇಮ್ಶೆಡ್ಪುರ, ಅಕ್ಟೋಬರ್ 22: ಫಾರೂಕ್ ಚೌಧರಿ (17ನೇ ನಿಮಿಷ ) ಮತ್ತು ಸರ್ಗಿಯೊ ಕ್ಯಾಸ್ಟಲ್ ಮಾರ್ಟಿನೇಜ್ (85ನೇ ) ಅವರು ಗಳಿಸಿದ ಗೋಲಿನ ನೇರವಿನಿಂದ ಒಡಿಶಾ ಎಫ್ ಸಿ ತಂಡವನ್ನು 2-1 ಗೋಲಿನಿಂದ ಮಣಿಸಿದ ಜೇಮ್ಶೆಡ್ಪುರ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನ ತನ್ನ ಮೊದಲ ಪಂದ್ಯದಲ್ಲಿ ಶುಭಾರಂಭ ಕಂಡಿದೆ.
ಬಿಕಾಶ್ ಜೈರು ರೆಡ್ ಕಾರ್ಡ್ ಪಡೆದು ಹೊರ ನಡೆದ ನಂತರ ಒಡಿಶಾ ಪರ ಅರಿದಾನೆ ಸ್ಯಾಂಟನ (40ನೇ ನಿಮಿಷ) ಗಳಿಸಿದ ಗೋಲು ಇತ್ತಂಡವನ್ನು ಸಮಬಲಗೊಳಿಸಿತು, ಕೇವಲ ಹತ್ತು ಆಟಗಾರನ್ನು ಒಳಗೊಂಡ ಜೇಮ್ಶೆಡ್ಪುರಕ್ಕೆ ದ್ವಿತೀಯಾರ್ಧದಲ್ಲಿ ಸಾಕಷ್ಟು ಹಿನ್ನಡೆ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು, ಅದು ಸಹಜವೇ ಆಗಿತ್ತು. ಏಕೆಂದರೆ ಒಡಿಶಾ ತಂಡದ ಮನೋಬಲವೂ ಹೆಚ್ಚಿತ್ತು. ಆದರೆ ಕ್ಯಾಸ್ಟಲ್ ಎಲ್ಲರ ನಿರೀಕ್ಷೆಯನ್ನೇ ಹುಸಿಗೊಳಿಸಿ ತಂಡಕ್ಕೆ ಜಯದ ಗೋಲು ಗಳಿಸಿದರು.
ಭಾರತ vs ದಕ್ಷಿಣ ಆಫ್ರಿಕಾ: ದ್ವಿಪಕ್ಷೀಯ ಟೆಸ್ಟ್ನಲ್ಲಿ ರೋಹಿತ್ ವಿಶೇಷ ದಾಖಲೆ
ಸಮಬಲದ ಹೋರಾಟ
ಜೇಮ್ಶೆಡ್ಪುರದ ಪರ ಫಾರೂಕ್ ಚೌಧರಿ ಹಾಗೂ ಒಡಿಶಾ ಪರ ಅರಿದಾನೆ ಸ್ಯಾಂಟನ ಗಳಿಸಿದ ಗೋಲುಗಳ ಮೂಲಕ ಪಂದ್ಯದ ಮೊದಲಾರ್ಧ 1-1 ಗೋಲಿನಿಂದ ಸಮಬಲಗೊಂಡಿತು. ಆದರೆ ಮನೆಯಂಗಣದಲ್ಲಿ ಜೇಮ್ಶೆಡ್ಪುರಕ್ಕೆ ಆರಂಭಿಕ ಹಿನ್ನಡೆ ಎಂದರೆ ತಪ್ಪಾಗಲಾರದು. ಏಕೆಂದರೆ ತಂಡದ ಪ್ರಮುಖ ಆಟಗಾರ ಬಿಕಾಶ್ ಜೈರು ರೆಡ್ ಕಾರ್ಡ್ ಪಡೆದು ಅಂಗಣದಿಂದ ಹೊರ ನಡೆದಿದ್ದೇ ಟಾಟಾ ಪಡೆಯ ಹಿನ್ನಡೆಗೆ ಕಾರಣವಾಯಿತು. 17ನೇ ನಿಮಿಷದಲ್ಲಿ ರಾಣಾ ಘರಾಮಿ ಉಡುಗೊರೆ ಗೋಲು ನೀಡಿದಂತೆ ಕಂಡು ಬಂದರೂ ಅದು ಫಾರೂಕ್ ಅಚ್ಚರಿಯ ಗೋಲಾಗಿತ್ತು. ತಂಡಕ್ಕೆ ಮುನ್ನಡೆ ದಕ್ಕಿತ್ತು. 35ನೇ ನಿಮಿಷದಲ್ಲಿ ಬಿಕಾಶ್ ಜೈರು ಉದ್ದೇಶಪೂರ್ವಕವಾಗಿ ಪ್ರಮಾದವೆಸಗಿದ ಕಾರಣ ರೆಫರಿ ನೇರವಾಗಿ ರೆಡ್ ಕಾರ್ಡ್ ನೀಡಿದರು, ಇದರಿಂದ ಆತಿಥೇಯ ತಂಡ ಕೇವಲ ಹತ್ತು ಆಟಗಾರರಲ್ಲೇ ಪಂದ್ಯ ಆಡುವಂತಾಯಿತು. 40ನೇ ನಿಮಿಷದಲ್ಲಿ ಟಾಟಾ ಪಡೆ ಅದಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಅರಿದಾನೆ ಸ್ಯಾಂಟನ ಅಭ್ಭುತ ಗೋಲು ಗಳಿಸಿ ತಂಡ ಸಮಬಲಗೊಳ್ಳುವಂತೆ ಮಾಡಿದರು. ಪ್ರಥಮಾರ್ಧ ಮುಗಿಯಲು ಕೆಲ ಕ್ಷಣಗಳು ಬಾಕಿ ಇರುವಾಗ ಜೆರ್ರಿ ಮೌಹಿಂತಂಗಾ ಒಡಿಶಾ ಪರ ಎರಡನೇ ಗೋಲು ಗಳಿಸುವ ಅವಕಾಶ ಗಳಿಸಿದ್ದರು, ಆದರೆ ಗುರಿ ತಪ್ಪಿದ ಕಾರಣ ಅವಕಾಶದಿಂದ ವಂಚಿತರಾದರು.
ಪೂರ್ವ ಭಾರತದ ತಂಡಗಳ ಸೆಣಸು
ಇಂಡಿಯನ್ ಸೂಪರ್ ಲೀಗ್ ನ ಮೂರನೇ ಪಂದ್ಯದಲ್ಲಿ ಪೂರ್ವ ಭಾರತದ ಎರಡು ತಂಡಗಳು ಮುಖಾಮುಖಿಯಾದವು.. ಕಳೆದ ಎರಡು ಋತುಗಳಲ್ಲಿ ಪ್ಲೇ ಆಫ್ ಹಂತದಿಂದ ವಂಚಿತವಾಗಿರುವ ಜೇಮ್ಶೆಡ್ಪುರ ಎಫ್ ಸಿ ಈ ಬಾರಿ ಪ್ಲೇ ಆಫ್ ಹಂತ ತಲುಪುವ ಗುರಿಯೊಂದಿಗೆ ಮನೆಯಂಗಣಕ್ಕೆ ಹೆಜ್ಜೆ ಇಟ್ಟಿತು. ಕಳೆದ ಋತುವಿನಲ್ಲಿ ಟಾಟಾ ಪಡೆ ಸಾಕಷ್ಟು ಬಾರಿ ಡ್ರಾ ಸಾಧಿಸಿದ್ದು ಅಂತಿಮ ಹಂತದಲ್ಲಿ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಈ ಬಾರಿ ಅಂಟೋನಿಯೋ ಇರಿಯೊಂಡೋ ಪಳಗಿರುವ ಜೇಮ್ಶೆಡ್ಪುರ ಮೊದಲ ಪಂದ್ಯದಿಂದಲೇ ಜಯದ ಆರಂಭ ಕಾಣುವ ಗುರಿ ಹೊಂದಿದೆ. ಸರ್ಗಿಯೊ ಕ್ಯಾಸ್ಟಲ್ ಹಾಗೂ ಸಿ.ಕೆ. ವಿನೀತ್ ಅವರು ಫಾರ್ವರ್ಡ್ ನಲ್ಲಿ ತಂಡಕ್ಕೆ ಆಧಾರ ಎನಿಸಿದ್ದಾರೆ. ನೋಯ್ ಅಕೋಸ್ಟ, ಪಿಟಿ, ಏಟೋರ್ ಮೊನ್ರೋಯ್ ಹಾಗೂ ಮೆಮೊ ತಂಡದ ಬೆನ್ನೆಲುಬು.
ನಿಸ್ಸಾನ್ ಜೊಂಗಾ' ಮೂಲಕ ಆರ್ಮಿ ಮೇಲಿನ ಪ್ರೀತಿ ತೋರಿಕೊಂಡ ಧೋನಿ
ಜೋಸೆಫ್ ಗೊಂಬಾವ್ ಕ್ಲಬ್ ಹೊಸದಾದರೂ ಪರಿಚಯದ ಆಟಗಾರರ ಮೂಲಕ ಯಶಸ್ಸಿನ ಹೆಜ್ಜೆ ಇಡುವ ತವಕದೊಂದಿಗೆ ಅಂಗಣಕ್ಕಿಳಿದ ಹೊಸ ತಂಡ ಒಡಿಶಾ ಎಫ್ ಸಿ ಯನ್ನು ಯಾವುದೇ ತಂಡವು ಹಗುರವಾಗಿ ಪರಿಗಣಿಸುವಂತಿಲ್ಲ, ಏಕೆಂದರೆ, ಡೆಲ್ಲಿ ಡೈನಮೋಸ್ ತಂಡದ ಹೆಚ್ಚಿನ ಆಟಗಾರರೇ ಒಡಿಶಾ ತಂಡದಲ್ಲಿದ್ದಾರೆ. ಕ್ಸಿಸ್ಕೋ ಹೆರ್ನಾಂಡಿಸ್, ಮಾರ್ಟಿನ್ ಗ್ಯುಡೆಸ್ , ಮಾರ್ಕಸ್ ತೇಬರ್ ಹಾಗೂ ಭಾರತದ ಉದಯೋನ್ಮುಖ ಆಟಗಾರ ನಿವೀತ್ ರಾಯ್ ತಂಡದ ಬಲವನ್ನು ಹೆಚ್ಚಿಸಲಿದ್ದಾರೆ. ಅರಿದಾನೆ ಸ್ಯಾಂಟನ ಮಿಂಚಿನ ಆಟಕ್ಕೆ ಹೆಸರಾಗಿದ್ದು. ಜೆರ್ರಿ, ನಂದ ಕುಮಾರ್ ಶೇಖರ್, ತಂಡಕ್ಕೆ ಬಲ ನೀಡಬಲ್ಲ ಇತರ ಯುವ ಆಟಗಾರರು.