ಪುಣೆ, ನವೆಂಬರ್ 24: ಸತತ ಜಯದೊಂದಿಗೆ ಮುನ್ನುಗ್ಗುತ್ತಿರುವ ಮಾಜಿ ಚಾಂಪಿಯನ್ ಎಟಿಕೆ ವಿರುದ್ಧ ಭಾನುವಾರ ಇಲ್ಲಿನ ಛತ್ರಪತಿ ಶಿವಾಜಿ ಅಂಗಣದಲ್ಲಿ ಹೋರಾಟ ನಡೆಸುವ ಮೂಲಕ ಒಡಿಶಾ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಮೊದಲ ಮನೆಯಂಗಣದ ಪಂದ್ಯವನ್ನು ಆಡಲಿದೆ..
ಜೋಸೆಫ್ ಗೊಂಬಾವ್ ಪಡೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಗಳಿಸಿದೆ. ಅಲ್ಲದೆ ಆರು ಗೋಲುಗಳನ್ನು ಗಳಿಸಿ, ಆರು ಗೋಲುಗಳನ್ನು ನೀಡಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬಿಡುವು ಇದ್ದ ಕಾರಣ ಸ್ಪೇನ್ ನ ಕೋಚ್ ಗೆ ತಮ್ಮ ತಂಡವನ್ನು ಸಜ್ಜುಗೊಳಿಸಲು ಸಾಕಷ್ಟು ಸಮಯ ಇದ್ದಿತ್ತು. ತಂಡದ ವಿನೀತ್ ರಾಯ್ ಮಾತ್ರ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.
ಆರಂಭದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ನಂತರ ಮುಂಬೈ ವಿರುದ್ಧದ ಪಂದ್ಯದಲ್ಲಿ ಅಮೂಲ್ಯ ಜಯ ಗಳಿಸಿತ್ತು. ನಂತರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ ಸಾಧಿಸಿತ್ತು. '' ಮೊದಲ ಮೂರು ಪಂದ್ಯಗಳಲ್ಲಿ ನಾವು ಉತ್ತಮ ಫುಟ್ಬಾಲ್ ಆಟವನ್ನು ಆಡಿದ್ದೇವೆ. ಕೇರಳ ವಿರುದ್ಧ ನಡೆದ ಪಂದ್ಯ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ನಾವು ಉತ್ತಮವಾಗಿಯೇ ಆಡಿದೆವು. ಆದರೆ ಫಲಿತಾಂಶ ಸಿಕ್ಕಿರಲಿಲ್ಲ. ಇದು ಫುಟ್ಬಾಲ್. ನಾಳೆ ನಮ್ಮ ಪಾಲಿಗೆ ಪ್ರಮುಖ ಪಂದ್ಯ. ಎಟಿಕೆ ಉತ್ತಮ ತಂಡ. ಅಲ್ಲದೆ ಅವರು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಆದರೆ ನಾವು ಹೋರಾಟಕ್ಕೆ ಸಜ್ಜಾಗಿದ್ದೇವೆ. ಮೂರು ಅಂಕಗಳನ್ನು ಗಳಿಸಲು ಮಾನಸಿಕವಾಗಿ ಸಜ್ಜಾಗಿದ್ದೇವೆ,'' ಎಂದು ಗೊಂಬಾವ್ ಹೇಳಿದ್ದಾರೆ.
ಅಂಕ ಪಟ್ಟಿಯಲ್ಲಿ ಆಗ್ರಾ ಸ್ಥಾನದಲ್ಲಿರುವ ಎಟಿಕೆ ಸತತ ಮೂರು ಪಂದ್ಯಗಳಲ್ಲಿ ಗೆದ್ದಿದ್ದು ಅದೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವ ಗುರಿ ಹೊಂದಿದೆ. ರಾಯ್ ಕೃಷ್ಣ ಹಾಗೂ ಡೇವಿಡ್ ವಿಲಿಯಮ್ಸ್ ಇದುವರೆಗೂ ಆರು ಗೋಲುಗಳನ್ನು ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಎಟಿಕೆ ತಂಡದ ಫಾರ್ವಾರ್ಡ್ ವಿಭಾಗ ಉತ್ತಮವಾಗಿದ್ದು, ಅದನ್ನು ನಿಯಂತ್ರಿಸಲು ಒಡಿಶಾದ ಡಿಫೆನ್ಸ್ ವಿಭಾಗ ಎಲ್ಲ ರೀತಿಯ ಪ್ರಯತ್ನ ಮಾಡಬೇಕಾಗಿದೆ, ಆದರೆ ಭುಜದ ನೋವಿನಿಂದ ಬಳಲುತ್ತಿರುವ ಪ್ರಣೋಯ್ ರಾಯ್ ಅವರ ಸೇವೆಯಿಂದ ಕೋಲ್ಕೊತಾ ತಂಡ ವಂಚಿತವಾಗಲಿದೆ. ಈ ವಾರದಲ್ಲಿ ಓಮನ್ ವಿರುದ್ಧದ ಫಿಫಾ ವಿಶ್ವ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ರಾಯ್ ಗಾಯಗೊಂಡಿದ್ದರು.
ಎಟಿಕೆ ತಂಡ ಪರಿಸ್ಥಿತಿಗೆ ಹೊಂದಿಕೊಂಡು ಆಡುವ ತಂಡವಾಗಿದೆ. ಉದಾಹರಣೆಗೆ ಚೆನ್ನೈಯಿನ್ ಎಫ್ ಸಿ ವಿರುದ್ಧ ಮನೆಯಂಗಣದ ಹೊರಗೆ ನಡೆದ ಪಂದ್ಯದಲ್ಲಿ ಡಿಫೆನ್ಸ್ ಆಟಕ್ಕೆ ಹೊರತಾಗಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಯಶಸ್ಸು ಕಂಡಿತ್ತು. ಇದೇ ತಂಡ ಮನೆಯಂಗಣದಿ ನಡೆದ ಪಂದ್ಯದಲ್ಲಿ ರಕ್ಷಣಾತ್ಮಕ ಆಟಕ್ಕೆ ಮನ ಮಾಡಿತ್ತು.
''ನಮಗೆ ನಮ್ಮದೇ ಆದ ಶೈಲಿಯ ಫುಟ್ಬಾಲ್ ಆಟವಿದೆ. ಎದುರಾಳಿ ತಂಡವನ್ನು ಗೌರವಿಸಿ 90 ನಿಮಿಷಗಳ ಆಟ ಆಡುವುದು ನಮ್ಮ ಸಿದ್ಧಾಂತ. ನಾವು ಯಾವಾಗಲೂ ಮುಂದಿನ ಮೂರು ಅಂಕ ಗಳಿಸುವ ಬಗ್ಗೆ ಗುರಿ ಹೊಂದಿರುತ್ತೇವೆ. ಪ್ರತಿಯೊಂದು ಪಂದ್ಯವನ್ನು ನಿಮ್ಮಿಂದ ಗೆಲ್ಲಲಾಗದು. ಆದರೆ ನಾವು ಪಂದ್ಯದಿಂದ ಪಂದ್ಯಕ್ಕೆ ಗಮನ ನೀಡುತ್ತಿರುತ್ತೇವೆ. ನಾವು ಓಡಬೇಕು ಹೊರತು ಹಾರಬಾರದು,'' ಎಂದು ಕೋಚ್ ಅಂಟೋನಿಯೋ ಹಬ್ಬಾಸ್ ಹೇಳಿದ್ದಾರೆ.