ಚೆನ್ನೈ, ಡಿಸೆಂಬರ್ 21: ಆಂಡ್ರೆ ಷೆಂಬ್ರಿ (4ನೇ ನಿಮಿಷ), ಲಾಲ್ ಲಿಯಾಂಜುವಾಲಾ ಚಾಂಗ್ಟೆ (30ನೇ ನಿಮಿಷ) ಮತ್ತು ನಿರಿಜುಸ್ ವಾಸ್ಕಿಸ್ (40ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಮಾಜಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೇರಳ ಬ್ಲಾಸ್ಟರ್ಸ್ ಪರ ನಾಯಕ ಬಾರ್ಥಲೋಮಿಯೋ ಓಗ್ಬ್ಯಾಚೆ (15ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
ಜಯದ ವೇದಿಕೆ ನಿರ್ಮಿಸಿದ ಚೆನ್ನೈಯಿನ್
ಹಿಂದಿನ ವೈಫಲ್ಯಗಳನ್ನೆಲ್ಲ ಕೇವಲ 45 ನಿಮಿಷಗಳಲ್ಲಿ ಮರೆಯುಂತೆ ಆಟ ಪ್ರದರ್ಶಿಸಿದ ಚೆನ್ನೈಯಿನ್ ಎಫ್ ಸಿ, ಪ್ರಥಮಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿದೆ. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಇತ್ತಂಡಗಳು ಮನ ಮಾಡಿದವು. ಚೆನ್ನೂಯಿನ್ ತಂಡಕ್ಕೆ 4ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಆಂಡ್ರೆ ಷೆಂಬ್ರಿ ಗಳಿಸಿದ ಗೋಲಿನಿಂದ ಚೆನ್ನೈಯಿನ್ ಪಡೆ ಮುನ್ನಡೆ ಕಂಡುಕೊಂಡಿತು. ಷೆಂಬ್ರಿ ಅವರು ಋತುವಿನ ಎರಡನೇ ಗೋಲು ಗಳಿಸಿದರು. ಕೇರಳ ದಿಟ್ಟ ಸವಾಲು ನೀಡುತ್ತಲೇ ಹೋರಾಟವನ್ನು ಮುಂದುವರಿಸಿತು. 15ನೇ ನಿಮಿಷದಲ್ಲಿ ನಾಯಕ ಬಾರ್ಥಲೋಮಿಯೋ ಓಗ್ಬ್ಯಾಚೆ ಅವರಿಗೆ ಗೋಲಿನ ಯಶಸ್ಸು. ಇದರೊಂದಿಗೆ ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಕೆಲ ಹೊತ್ತು ಪಂದ್ಯ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದರೂ ಆ ನಂತರ ಚೆನ್ನೈ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. 30ನೇ ನಿಮಿಷದಲ್ಲಿ ಲಾಲ್ ಲಿಯಾಂಜುವಾಲಾ ಚಾಂಗ್ಟೆ ಗಳಿಸಿದ ಗೋಲಿನಿಂದ ಚೆನ್ನೈ 2-1 ಅಂತರದಲ್ಲಿ ಮುನ್ನಡೆ ಕಂಡಿತು. ಕೆರಳದ ಪ್ರಯತ್ನಗಳು ಯಶಸ್ಸು ಕಾಣದಿರುವಾಗ ಚೆನ್ನೈ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು. ಇದುವರೆಗೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ನಿರಿಜುಸ್ ವಾಸ್ಕಿಸ್ 40ನೇ ನಿಮಿಷದಲ್ಲಿ ಗಳಿಸಿದ ಗೋಲು ಆತಿಥೇಯ ತಂಡಕ್ಕೆ 3-1 ಮುನ್ನಡೆ ತಂದು ಕೊಟ್ಟಿತು. 25ನೇ ನಿಮಿಷದಲ್ಲಿ ನಿರಿಜುಸ್ ವಾಸ್ಕಿಸ್ ಗಳಿಸಿದ ಗೋಲನ್ನು ರೆಫರಿ ನಿರಾಕರಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಚೆನ್ನೈನ ಆವೇಶದ ಆಟಕ್ಕೆ ಅದು ಅಡ್ಡಿ ಮಾಡಿಲ್ಲ.
ದಕ್ಷಿಣದ ಡರ್ಬಿ
ಅಂಕ ಪಟ್ಟಿಯಲ್ಲಿ ಕೆಳ ಹಂತದ ಮಧ್ಯದಲ್ಲಿರುವ ಕೇರಳ ಬ್ಲಾಸ್ಟರ್ಸ್ ಹಾಗೂ ಚೆನ್ನೈಯಿನ್ ಎಪ್ ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ ನ 42ನೇ ಪಂದ್ಯದಲ್ಲಿ ಮುಖಾಮುಖಿಯಾಗಲು ಅಂಗಣಕ್ಕಿಳಿದವು. ಎರಡೂ ತಂಡಗಳು ಇದುವರೆಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರದೆ ಕೆಳ ಹಂತದಲ್ಲೇ ಸಿಲುಕಿಕೊಂಡಿವೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಗಳು ಉಳಿದಿರುವುದರಿಂದ ಇತ್ತಂಡಗಳಿಗೂ ಚೇತರಿಸಿಕೊಳ್ಳಲು ಅವಕಾಶ ಇದೆ. ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಚೆನ್ನೈಯಿನ್ ತಂಡ ಜಾನ್ ಗ್ರಗೊರಿ ಅವರನ್ನು ಕೈ ಬಿಟ್ಟು ಓವೆನ್ ಕಾಯ್ಲ್ ಅವರಿಗೆ ಜವಾಬ್ದಾರಿ ನೀಡಿದೆ. ಪರಿಣಾಮ ಹಿಂದಿನ ಎರಡೂ ಪಂದ್ಯಗಳಲ್ಲಿ ತಂಡ ತೃಪ್ತಿದಾಯಕ ಪ್ರದರ್ಶನ ತೋರಿದೆ. ಕೊನೆಯ ಕ್ಷಣದಲ್ಲಿ ಗೋಲು ನೀಡುವ ಚಾಳಿಯನ್ನು ತೊರೆದರೆ ತಂಡ ಚೇತರಿಸಕೊಳ್ಳಬಲ್ಲದು.
ತಂಡದ ಮುಖ್ಯ ಸಮಸ್ಯೆಯೆಂದರೆ ತಡವಾಗಿ ಪಂದ್ಯಕ್ಕೆ ಹೊಂದಿಕೊಳ್ಳುವುದು. ತಂಡ ಇದುವರೆಗೂ ಪ್ರಥಮಾರ್ಧದಲ್ಲಿ ಗಳಿಸಿದ್ದು ಕೇವಲ ಒಂದು ಗೋಲು.ನಿರಿಜುಸ್ ವಾಸ್ಕಿಸ್ 4 ಗೊಲುಗಳನ್ನು ಗಳಿಸಿ ತಂಡದ ಗೌರವ ಕಾಯ್ದಿದ್ದಾರೆ. ಏಕೆಂದರೆ ತಂಡ ಗಳಿಸಿರುವ ಒಟ್ಟು ಗೋಲು ಬರೇ ಐದು. ಕೇರಳ ಬ್ಲಾಸ್ಟರ್ಸ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಜಯ ಕಂಡಿಲ್ಲ. ಅದರಲ್ಲಿ ಮೂರು ಡ್ರಾ ಸೇರಿದೆ. ಜೆಮ್ಷೆಡ್ಪುರ ಎಫ್ ಸಿ ವಿರುದ್ಧದ ಡ್ರಾ ತಂಡದ ಮನೋಬಲವನ್ನು ಹೆಚ್ಚಿರುವುದು ಸಹಜ. ಏಕೆಂದರೆ ಎರಡು ಗೋಲುಗಳಿಂದ ಹಿಂದೆ ಬಿದ್ದಿದ್ದರೂ ದಿಟ್ಟ ಹೋರಾಟ ನೀಡಿ ಅಂಕವನ್ನು ಹಂಚಿಕೊಳ್ಳವಲ್ಲಿ ಯಶಸ್ವಿಯಾಯಿತು. ಮೆಸ್ಸಿ ಬೌಲಿ ತಂಡದ ಸ್ಟಾರ್ ಆಟಗಾರ ಎನಿಸಿದ್ದಾರೆ. ಅದೇ ರೀತಿ ಮಾರಿಯೋ ಆರ್ಕ್ವೇಸ್ ಮತ್ತು ಜೇಕ್ಸನ್ ಸಿಂಗ್ ನೈಜ ಆಟ ಪ್ರದರ್ಶಿಸಿದರೆ ಚೆನ್ನೈಯಿನ್ ತಂಡಕ್ಕೆ ಹಾದಿ ಕಠಿಣವಾಗುವುದು ಸಹಜ.