ಬೆಂಗಳೂರು, ಅಕ್ಟೊಬರ್, 21: ಹಾಲಿ ಚಾಂಪಿಯನ್ ಬೆಂಗಳೂರು ವಿರುದ್ಧ ನಾರ್ತ್ ಈಸ್ಟ್ ಯುನೈಟೆಡ್ ೦-೦ ಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇತ್ತಂಡಗಳಿಗೂ ಪ್ರಥಮ ಹಾಗೂ ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಅವಕಾಶ ಸಿಕ್ಕರೂ ಅನುಭವದ ಆಟ ಯಶಸ್ಸಿಗೆ ಅವಕಾಶ ಮಾಡಿಕೊಡಲಿಲ್ಲ. ಹಾಗೆ ನೋಡಿದರೆ ನಾರ್ತ್ ಈಸ್ಟ್ ಯುನೈಟೆಡ್ ಮೇಲುಗೈ ಸಾಧಿಸಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.
46ನೇ ನಿಮಿಷದಲ್ಲಿ ರಾಫೆಲ್ ಆಗಸ್ಟಾಗೆ ಉತ್ತಮ ಪಾಸ್ ಸಿಕ್ಕಿದರೂ, ಅದಕ್ಕೆ ಉದಾಂತ್ ಸಿಂಗ್ ಉತ್ತಮ ರೀತಿಯಲ್ಲಿ ಸ್ಪಂದಿಸಿದರೂ ಗೋಲಿಗೆ ಅವಕಾಶ ಸಿಗಲಿಲ್ಲ, 52ನೇ ನಿಮಿಷದಲ್ಲಿ ನಾರ್ತ್ ಈಸ್ಟ್ ನ ಅಸಮಾಹ್ ಗ್ಯಾನ್ ಗೋಲು ಗಳಿಸುವ ಅವಕಾಶದಿಂದ ವಂಚಿತರಾದರು. 65ನೇ ನಿಮಿಷದಲ್ಲಿ ನಿಶು ಕುಮಾರ್ ಗೋಲು ಗಳಿಸಿಯೇ ಬಿಟ್ಟರು ಎಂಬ ಸಂಭ್ರಮ ಮನೆಮಾಡಿತ್ತು, ಆದರೆ ಅನುಭವಿ ಗೋಲ್ ಕೀಪರ್ ಸುಭಾಶಿಶ್ ರಾಯ್ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ರಕ್ಷಣೆ ನೀಡಿದರು. ಫ್ರೀ ಕಿಕ್ ಗೆ ನಿಶು ಕುಮಾರ್ ತುಳಿದ ಚೆಂಡಿಗೆ ರಾಯ್ ಉತ್ತಮ ರೀತಿಯಲ್ಲಿ ತಡೆದರು. ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಮೊದಲ ಪಂದ್ಯವನ್ನು ಡ್ರಾ ದಲ್ಲಿ ಕೊನೆಗೊಳಿಸಿತು.
ಭಾರತ vs ದಕ್ಷಿಣ ಆಫ್ರಿಕಾ: ಸಹಾ ಬದಲು ಮೈದಾನಕ್ಕಿಳಿದ ರಿಷಬ್ ಪಂತ್!
ಗೋಲಿಲ್ಲದ ಪ್ರಥಮಾರ್ಧ
ಆರಂಭದಲ್ಲಿ ಬೆಂಗಳೂರು ಎಫ್ ಸಿ ಉತ್ತಮ ಪಾಸ್ ಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ನಾರ್ತ್ ಈಸ್ಟ್ ಯುನೈಟೆಡ್ ದಿಟ್ಟ ಹೋರಾಟ ನೀಡಿದ ಕಾರಣ ಎಲ್ಲಿಯೂ ಗೋಲಿಗೆ ಅವಕಾಶ ಸಿಗಲಿಲ್ಲ, ಬೆಂಗಳೂರು ತಂಡದ ಗೋಲ್ ಕೀಪರ್ ಗುರ್ ಪ್ರೀತ್ ಸಿಂಗ್ ಸಂಧೂ ಒಂದು ಹಂತದಲ್ಲಿ ಉತ್ತಮ ರೀತಿಯಲ್ಲಿ ಗೋಲನ್ನು ತಡೆದು ತಂಡಕ್ಕೆ ರಕ್ಷಣೆ ನೀಡಿದರು. ನಾರ್ತ್ ಈಸ್ಟ್ ನ ಪ್ರಥಮಾರ್ಧದ ಆಟವನ್ನು ಗಮನಿಸಿದಾಗ ತಂಡ ಕಳೆದ ಬಾರಿಗಿಂತ ಇನ್ನೂ ಬಲಿಷ್ಠವಾಗಿದೆ ಎಂಬುದು ಸ್ಪಷ್ಟವಾಯಿತು. ಪ್ರಥಮಾರ್ಧದಲ್ಲಿ ಗೋಲಾಗಲಿಲ್ಲ, ಆದರೆ ಫುಟ್ಬಾಲ್ ನ ರೋಚಕ ಕ್ಷಣಗಳಿಗೆ ಕೊರತೆ ಇರಲಿಲ್ಲ. ಒಂದು ಹಂತದಲ್ಲಿ ಇತ್ತಂಡಗಳಿಗೂ ಗೋಲು ಗಳಿಸುವ ಅವಕಾಶ ಇದ್ದಿತ್ತು, ಸಂದೂ ಪ್ರವಾಸಿ ತಂಡಕ್ಕೆ ತಡೆಯೊಡ್ಡಿದರೆ, ಉದಾಂತ್ ಸಿಂಗ್ ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಮಾರ್ಟಿನ್ ಚಾವೆಸ್ ಗೆ ಹತ್ತು ಅಡಿಗಳ ಅಂತರದಲ್ಲಿ ಗೋಲು ಗಳಿಸುವ ಅವಕಾಶ ಇದ್ದಿತ್ತು, ಆದರೆ ಗುರಿ ಮಾತ್ರ ಇರಲಿಲ್ಲ. ಅಂತಿಮ ಹಂತದಲ್ಲಿ ನಾಯಕ ಸುನಿಲ್ ಛೆಟ್ರಿ ಕೂಡ ಸಿಕ್ಕ ಅವಕಾಶವನ್ನು ಗೋಲ್ ಬಾಕ್ಸ್ ತಲಪಿಸುವಲ್ಲಿ ವಿಫಲವಾದರು.
ಉತ್ತಮ ಹೋರಾಟದ ನಿರೀಕ್ಷೆ
ಹಾಲಿ ಚಾಂಪಿಯನ್ ಬೆಂಗಳೂರು ತಂಡ ಮನೆಯಂಗಣದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅಭಿಯಾನ ಆರಂಭಿಸಲು ಸಜ್ಜಾಯಿತು. ಕಳೆದ ವರ್ಷ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಇದೇ ನಾರ್ತ್ ಈಸ್ಟ್ ವಿರುದ್ಧ ಗೆದ್ದು ಫೈನಲ್ ತಲುಪಿತ್ತು. ಕೋಚ್ ಕಾರ್ಲಸ್ ಕ್ವಾಡ್ರಟ್ ಅವರ ರಣತಂತ್ರ ಹಾಗೂ ಸುನಿಲ್ ಛೆಟ್ರಿ ಅವರ ಸ್ಫೂರ್ತಿಯಲ್ಲಿರುವ ತಂಡ ಬ್ಲೂಸ್ ಸತತ ಎರಡನೇ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಆದರೆ ಐಎಸ್ ಎಲ್ ಇತಿಹಾಸದಲ್ಲಿ ಯಾವುದೇ ತಂಡ ಈ ಸಾಧನೆ ಮಾಡಿರಲಿಲ್ಲ. ಉತ್ತಮ ಗುಣಮಟ್ಟದ ಆಟಗಾರರು ಎರಡೂ ತಂಡದಲ್ಲಿರುವುದು ಗಮನಾರ್ಹ. ಮಿಕು ಅವರ ನಿರ್ಗಮನ ತಂಡದ ಬಲವನ್ನು ಕುಸಿಯುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ, ಆದರೆ ಉತ್ತಮ ಆಟಗಾರರಾದ ಮಾನ್ಯುಯಲ್ ಓನೂ ಮತ್ತು ಆಶಿಕ್ ಕುರುನಿಯನ್ ಆ ಸ್ಥಾನವನ್ನು ತುಂಬಲು ಸಜ್ಜಾಗಿದ್ದಾರೆ. ಇದಾರೆ ಜತೆಯಲ್ಲಿ ಛೆಟ್ರಿಯ ಕರಾಮತ್ತು ಎದುರಾಳಿಗಳಿಗೆ ಕಠಿಣ ಎನಿಸುವುದು ಸಹಜ.
ಪರ್ವತ ಪ್ರದೇಶದ ತಂಡ ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ಅದೇ ರೀತಿಯ ಪ್ರದರ್ಶನ ಮುಂದುವರಿಸುವ ಉತ್ಸಾಹದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಸಜ್ಜಾಯಿತು. ಕಳೆದ ಬಾರಿ ಕೋಚ್ ಎಲ್ಕೋ ಶೆಟ್ಟೋರಿ ಹಾಗೂ ಬಾರ್ತಲೋಮ್ಯೋ ಓಗ್ಬ್ಯಾಚೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು,. ಆದರೆ ಇಬ್ಬರೂ ಈಗ ಕೇರಳ ಬ್ಲಾಸ್ಟರ್ಸ್ ತಂಡದಲ್ಲಿದ್ದಾರೆ. ರಾಬರ್ಟ್ ಜರ್ನಿ ತಂಡಕ್ಕೆ ಹೊಸ ರೂಪ ನೀಡಿದ್ದಾರೆ. ಈಗ ನಾರ್ತ್ ಈಸ್ಟ್ ನ ಪ್ರಮುಖ ಆಟಗಾರ ಅಸಮಾಹ್ ಗ್ಯಾನ್. ಘಾನಾದ ಅಂತಾರಾಷ್ಟ್ರೀಯ ಆಟಗಾರ ಗ್ಯಾನ್ ಮೇಲೆ ತಂಡ ಬಹಳ ನಿರೀಕ್ಷೆ ಇಟ್ಟಿದೆ, ಗುಹಾವಟಿ ಮೂಲದ ತಂಡದ ವಿರುದ್ಧ ಬೆಂಗಳೂರು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಗಳಿಸಿದೆ.