ಚೆನ್ನೈಯಿನ್ ಎಫ್ ಸಿ ಉತ್ತಮ ಆರಂಭ ಕಂಡಿಲ್ಲ
ಅವರ ಎದುರಾಳಿ ಚೆನ್ನೈಯಿನ್ ತಂಡ ಉತ್ತಮ ಆರಂಭ ಕಾಣಲಿಲ್ಲ,ಎರಡು ಪಂದ್ಯಗಳನ್ನಾಡಿದ ತಂಡ ಗಳಿಸಿರುವುದು ಕೇವಲ ಒಂದು ಅಂಕ. ಅಲ್ಲದೆ ಎರಡು ಪಂದ್ಯಗಳನ್ನಾಡಿದರೂ ತಂಡ ಇನ್ನೂ ಗೋಲು ಗಳಿಸಬೇಕಾಗಿದೆ. ಆದರೆ, ಚೆನ್ನೈ ಪಂದ್ಯ ನಮಗೆ ಸುಲಭವಾಗಿಲ್ಲ ಎಂದು ಪ್ರಧಾನ ಕೋಚ್ ಅಂಟೋನಿಯೋ ಹಬ್ಬಾಸ್ ನಿರೀಕ್ಷಿಸಿದ್ದಾರೆ.
ಸ್ಪೇನ್ ಮೂಲದ ಕೋಚ್ ತಂತ್ರಗಾರಿಕೆ
''ಚೆನ್ನೈಯಿನ್ ತಂಡ ಮೊದಲ ಎರಡು ಪಂದ್ಯಗಳಲ್ಲಿ ಗೋಲು ಗಳಿಸಿಲ್ಲ, ಆದರೆ ಅವರು ಮುಂದಿನ ಪಂದ್ಯಗಳಲ್ಲಿ ಗೋಲು ಗಳಿಸಬಲ್ಲರು. ಅಂಕಿ ಅಂಶ ಮುಖ್ಯವಲ್ಲ. 90 ನಿಮಿಷಗಳ ಹೋರಾಟದಲ್ಲಿ ಉತ್ತಮ ಪ್ರದರ್ಶನ ತೋರುವುದು ಮುಖ್ಯವಾಗಿದೆ. ಯಾವುದೇ ಪಂದ್ಯ ಸುಲಭವಲ್ಲ. ಗೆಲ್ಲುವ ಆತ್ಮವಿಶ್ವಾಸದೊಂದಿಗೆ ನಾವು ಚೆನ್ನೈಗೆ ಹೋಗಬೇಕು, ಎಂದು ಸ್ಪೇನ್ ಮೂಲದ ಕೋಚ್ ಹೇಳಿದ್ದಾರೆ.
ಎಟಿಕೆಗೆ ಹೆಚ್ಚು ಗೋಲು ಗಳಿಸುವ ಗುರಿ
ಹಬ್ಬಾಸ್ ಅವರ ನೋವಿನ ಸಂಗತಿಯೆಂದರೆ ಅವರ ತಂಡ ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಫಲವಾಗುತ್ತಿತ್ತು. ರಾಯ್ ಕೃಷ್ಣ, ಡೇವಿಡ್ ವಿಲಿಯಮ್ಸ್ ಹಾಗೂ ಎಡು ಗಾರ್ಸಿಯಾ ಕೇರಳ ವಿರುದ್ಧದ ಪಂದ್ಯದಲ್ಲಿ ಉತ್ತಮ ಅವಕಾಶಗಳನ್ನು ನಿರ್ಮಿಸಿದ್ದರು. ಅದಕ್ಕೆ ಮೈಕಲ್ ಸೂಸೈರಾಜ್ ಮತ್ತು ಪ್ರಬೀರ್ ದಾಸ್ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದರು. ಹೈದರಾಬಾದ್ ವಿರುದ್ಧ ಅವರ ಎಲ್ಲ ಪ್ರಯತ್ನ ಯಶಸ್ಸು ನೀಡಿತ್ತು, ಕೇರಳ ವಿರುದ್ಧದ ವೈಫಲ್ಯವನ್ನು ಮರೆಯುವಂತೆ ಮಾಡಿತು. ಬುಧವಾರ ಚೆನ್ನೈಯಿನ್ ವಿರುದ್ಧ ಅದೇ ಪ್ರದರ್ಶನ ತೋರಲು ತಂಡ ಸಜ್ಜಾಗಿದೆ.
ಎರಡು ಬಾರಿ ಚಾಂಪಿಯನ್ ತಂಡ
''ಒಂದು ದಿನ ನೀವು ಸಾಕಷ್ಟು ಅವಕಾಶಗಳನ್ನು ಪಡೆಯಬಹುದು ಆದರೆ ಗೋಲು ಗಳಿಸುವಲ್ಲಿ ವಿಫಲರಾಗಬಹುದು. ಇನ್ನೊಂದು ದಿನ ನೀವು ಒಂದೇ ಅವಕಾಶ ಪಡೆದರೂ ಅದರಲ್ಲೇ ಗೋಲು ಗಳಿಸುತ್ತೀರಿ. ಗೋಲಿನ ರೂಪು ನೀಡುವುದಕ್ಕೆ ನಾವು ದಿನವೂ ಪ್ರಯತ್ನ ಮಾಡುತ್ತೇವೆ,. ನನಗೆ ಇದೊಂದು ಸಮಸ್ಯೆ ಅಲ್ಲ, ತಂಡ ಇದುವರೆಗೂ ಉತ್ತಮ ಅವಕಾಶಗಳನ್ನು ಸೃಷ್ಟಿಸಿದೆ, ಅದು ನನಗೆ ಮುಖ್ಯ ಎನಿಸುತ್ತದೆ,'' ಎಂದು ಹಬ್ಬಾಸ್ ಹೇಳಿದರು.
''ದೈಹಿಕವಾಗಿ ನಾವು 75% ಅಥವಾ 80% ಫಿಟ್ ಆಗಿದ್ದೇವೆ, ಯಾವುದೇ ರೀತಿಯ ಗಾಯದ ಸಮಸ್ಯೆ ಇಲ್ಲ, ಋತುವಿನ ಆರಂಭಕ್ಕೆ ಮುನ್ನ ನಮ್ಮ ಆಟಗಾರರು ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸಿರುವುದೇ ಇದಕ್ಕೆ ಕಾರಣ. ಆಟಗಾರರು ತಮ್ಮ ಗುರಿ ತಲುಪಲು ಉತ್ತಮ ರೀತಿಯಲ್ಲಿ ಶ್ರಮಿಸಿದ್ದಾರೆ,'' ಎಂದರು.