ಪುಣೆ, ಡಿಸೆಂಬರ್ 5: ಜುವಾನ್ ಅಂಟೋನಿಯೋ ಗೊನ್ಸಾಲೀಸ್ ಫೆರ್ನಾಂಡೀಸ್ 36ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಒಡಿಶಾ ಎಫ್ ಸಿ ತಂಡವನ್ನು 1-0 ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ. ಏಳು ಪಂದ್ಯಗಳನ್ನು ಆಡಿದ ಬೆಂಗಳೂರು 13 ಅಂಕಗಳನ್ನು ಗಳಿಸಿ ಹಾಲಿ ಚಾಂಪಿಯನ್ ಗೆ ತಕ್ಕುದಾದ ಸ್ಥಾನವನ್ನು ತಲುಪಿತು.
ಐಪಿಎಲ್ನಲ್ಲಿ ಬ್ಯಾಟ್ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್ ಯೋಹಾನ್ ಬ್ಲೇಕ್!?
ಪ್ರಥಮಾರ್ಧದಲ್ಲಿ ಬೆಂಗಳೂರು ಮೇಲುಗೈ
ನಿರೀಕ್ಷೆಯಂತೆ ಬೆಂಗಳೂರು ಮೊದಲ ಅವಧಿಯಲ್ಲಿ ಒಂದು ಗೋಲು ಗಳಿಸಿ ಮೇಲುಗೈ ಸಾಧಿಸಿದೆ. ಒಡಿಶಾ ಆರಂಭದಿಂದಲೂ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಉತ್ತಮ ಆರಂಭ ಕಂಡಿತ್ತು. ಆದರೆ 36 ನೇ ನಿಮಿಷದಲ್ಲಿ ಜುವಾನ್ ಅಂಟೋನಿಯೋ ಗೊನ್ಸಾಲೀಸ್ ಫೆರ್ನಾಂಡೀಸ್ ಗಳಿಸಿದ ಗೋಲು ಬೆಂಗಳೂರಿನ ಮುನ್ನಡೆಗೆ ಕಾರಣವಾಯಿತು. ಒಡಿಶಾ ಉತ್ತಮವಾಗಿಯೇ ಆಡಿತ್ತು. ಆದರೆ ಅವಕಾಶಗಳನ್ನು ನಿರ್ಮಿಸುವಲ್ಲಿ ವಿಫಲವಾಗಿತ್ತು. ಬೆಂಗಳೂರು ತಂಡ ಜಾಣ್ಮೆಯ ಆಟವನ್ನೇ ಆರಂಭದಿಂದ ಪ್ರದರ್ಶಿಸಿತ್ತು. ಒಡಿಶಾದ ನ್ಯೂನತೆಯನ್ನು ಚೆನ್ನಾಗಿ ಅರಿತುಕೊಳ್ಳಲು ಸಮಯ ತೆಗೆದುಕೊಂಡಿತು.
ದಿಮಾಸ್ ಡೆಲ್ಗಡೊ ನೀಡಿದ ಪಾಸ್ ನಿಶು ಕುಮಾರ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಅವರು ಚೆಂಡನ್ನು ಬಾಕ್ಸ್ ನ ಹತ್ತಿರವಿದ್ದ ಎರಿಕ್ ಪಾರ್ಥಲು ಅವರಿಗೆ ನೀಡಿದರು. ಎರಿಕ್ ಪಾರ್ಥಲು ಚೆಂಡನ್ನು ಜುವಾನ್ ಅವರೆಡೆಗೆ ಮಿಂಚಿನ ಗತಿಯಲ್ಲಿ ನೀಡಿದರು. ಅಷ್ಟೇ ವೇಗವಾಗಿ ಜುವಾನ್ ಗೋಲ್ ಬಾಕ್ಸ್ ಗೆ ಚೆಂಡನ್ನು ತಳ್ಳಿದರು. ಬೆಂಗಳೂರಿಗೆ ಜಯದ ವೇದಿಕೆ ನಿರ್ಮಿಸಿದಷ್ಟೇ ಸಮಭ್ರಮ. ಆ ನಂತರ ಉದಾಂತ್ ಸಿಂಗ್ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಗುರಿ ಗೋಲ್ ಬಾಕ್ಸ್ ಕಡೆಗೆ ಇರಲಿಲ್ಲ.
ಅಗ್ರ ಸ್ಥಾನದ ಗುರಿ
ಇಂಡಿಯನ್ ಸೂಪರ್ ಲೀಗ್ ನ 31ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರುವ ಗುರಿಯೊಂದಿಗೆ ಒಡಿಶಾ ಎಫ್ ಸಿ ವಿರುದ್ಧ ಇಲ್ಲಿನ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಅಂಗಣಕ್ಕಿಳಿಯಿತು. ಎರಡೂ ತಂಡಗಳು ಹಿಂದಿನ ಪಂದ್ಯದಲ್ಲಿ ಡ್ರಾ ಸಾಧಿಸಿದ್ದವು. ಒಡಿಶಾ ಅಂತಿಮ ಕ್ಷಣದಲ್ಲಿ ಗೋಲು ಗಳಿಸಿದರೆ, ಬೆಂಗಳೂರು ಅಂತಿಮ ಕ್ಷಣದಲ್ಲಿ ಗೋಲು ನೀಡಿ ಸಮಬಲ ಸಾಧಿಸಿತ್ತು. ಆತಿಥೇಯ ತಂಡ ತನ್ನ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧನೆ ಮಾಡಿತ್ತು. ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಒಡಿಶಾ ತಂಡ ಬೆಂಗಳೂರು ವಿರುದ್ಧವೂ ಅದೇ ರೀತಿಯ ಸಾಧನೆ ತೋರುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಡಿಫೆನ್ಸ್ ನಲ್ಲಿ ಸುಭಾಷ್ ಸಾರಂಗಿ ಹಾಗೂ ಜೆರ್ರಿ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಜೊತೆಯಲ್ಲಿ ಅರಿದಾನೆ ಸ್ಯಾಂಟಾನಾ ಹಾಗೂ ಕ್ಸಿಸ್ಕೋ ಹೆರ್ನಾಂಡೀಸ್ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದಾರೆ.
ರಣಜಿ ಟ್ರೋಫಿ 2019-20: 15 ಆಟಗಾರರ ಕರ್ನಾಟಕ ತಂಡ ಪ್ರಕಟ
ಬೆಂಗಳೂರು ಎಫ್ಸಿ ಹಿಂದಿನ ಪಂದ್ಯದಲ್ಲೇ ಆಗ್ರ ಸ್ಥಾನಕ್ಕೆ ಏರುತ್ತಿತ್ತು. ಆದರೆ ಹೈದರಾಬಾದ್ ಎಫ್ ಸಿ ಅದಕ್ಕೆ ಅವಕಾಶ ನೀಡಲಿಲ್ಲ. ಈ ಪಂದ್ಯದಲ್ಲಿ ಜಯ ಗಳಿಸಿದರೆ ಬೆಂಗಳೂರು ಅಗ್ರ ಸ್ಥಾನಕ್ಕೆ ಜಿಗಿಯಲಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಗೋಲು ಗಳಿಸಿರುವ ನಾಯಕ ಸುನಿಲ್ ಛೆಟ್ರಿ ಇಲ್ಲಯೂ ಗೋಲು ಗಳಿಸಿ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದಾರೆ. ರಾಫೆಯಲ್ ಅಗಸ್ಟೊ ಗೋಲು ಗಳಿಸುವ ನಿರೀಕ್ಷೆಯಲ್ಲಿ ತಂಡ ಇದೆ. ಉದಾಂತ್ ಸಿಂಗ್ ಇದುವರೆಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಪ್ರದರ್ಶಿಸದೇ ಇರುವುದು ಕ್ವಾಡ್ರಟ್ ಗೆ ಚಿಂತೆಯಾಗಿದೆ. ಆದರೆ ತಂಡದಲ್ಲಿ ಯಾರಾದರೊಬ್ಬರು ಜವಾಬ್ದಾರಿ ನಿಭಾಯಿಸುತ್ತಿರುವುದು ಸಂತಸದ ವಿಷಯ. ಬೆಂಗಳೂರು ಇಲ್ಲಿ ಗೆಲ್ಲುವ ಫೇವರಿಟ್ ಎನಿಸಿದೆ. ಆದರೆ ಇದು ಫುಟ್ಬಾಲ್. ತೊಂಬತ್ತು ನಿಮಿಷಗಳಲ್ಲಿ ಏನೂ ಆಗಬಹುದು ಎಂಬುದನ್ನು ಮರೆಯುವಂತಿಲ್ಲ.