ಹೈದರಾಬಾದ್, ನವೆಂಬರ್ 7: 86ನೇ ನಿಮಿಷದಲ್ಲಿ ಮ್ಯಾಕ್ಸಿಮಿಲಿಯಾನೊ ಬರೈರೋ ಪೆನಾಲ್ಟಿ ಯಿಂದ ಗಳಿಸಿದ ಗೋಲು ಪ್ರವಾಸಿ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ 1-0 ಜಯ ತಂದುಕೊಟ್ಟತ್ತು. ಹೈದರಾಬಾದ್ ಎಫ್ ಸಿ ಪಂದ್ಯದುದ್ದಕ್ಕೂ ಉತ್ತಮ ಹೋರಾಟ ನೀಡಿದ್ದರೂ ಶಂಕರ್ ಸಂಪಂಗಿರಾಜ್ ಮಾಡಿದ ಪ್ರಮಾದ ನಾರ್ತ್ ಈಸ್ಟ್ ಯುನೈಟೆಡ್ ಗೆ ಜಯದ ಉಡುಗೊರೆ ಸಿಗುವಂತೆ ಮಾಡಿತು. ನಿಗದಿತ ಅವಧಿಗೆ ಮುಗಿಯಲು ನಾಲ್ಕು ನಿಮಿಷ ಇರುವಾಗ ದಾಖಲಾದ ಈ ಗೋಲು ಆತಿಥೇಯ ತಂಡಕ್ಕೆ ಚೇತರಿಸಿಕೊಳ್ಳಲು ಆಗಲಿಲ್ಲ.
ಮ್ಯಾಚ್ ಫಿಕ್ಸಿಂಗ್: ಬಳ್ಳಾರಿ ತಂಡದ ನಾಯಕ ಸಿಎಂ ಗೌತಮ್, ಅಬ್ರಾಬ್ ಕಾಜಿ ಅರೆಸ್ಟ್
ಆಡಿದ ನಾಲ್ಕು ಪಂದ್ಯಗಳಿಂದ 8 ಅಂಕ ಗಳಿಸಿದ ನಾರ್ತ್ ಈಸ್ಟ್ ಯುನೈಟೆಡ್ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಜೋಸ್ ಲ್ಯೂಡೋ ನೀಡಿದ ಪಾಸ್, ಪೆನಾಲ್ಟಿ ವಲಯದಲ್ಲಿ ಶಂಕರ್ ಅವರ ಕೈಗೆ ತಗುಲಿದ್ದು ಪ್ರಮಾದವಾಯಿತು.
ಗೋಲಿಲ್ಲದ ಪ್ರಥಮಾರ್ಧ
ಎರಡೂ ತಂಡಗಳು ಉತ್ತಮ ರೀತಿಯಲ್ಲಿ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಕಾರಣ ದಾಳಿಯ ವಿಭಾಗದಲ್ಲಿ ಇತ್ತಂಡಗಳು ಯಶಸ್ಸು ಕಾಣಲಿಲ್ಲ. ಹೈದರಾಬಾದ್ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತ್ತು. ಇತ್ತಂಡಗಳ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಗೋಲ್ ಗಳಿಕೆಗೆ ಅವಕಾಶ ಸಿಗಲಿಲ್ಲ.
ಜಯದ ಗುರಿ ಹೊತ್ತ ಹೈದರಾಬಾದ್
ಹೀರೋ ಇಂಡಿಯನ್ ಸೂಪರ್ ಲೀಗ್ ನ 16ನೇ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ತಂಡಗಳು ಮುಖಾಮುಖಿಯಾದವು, ಹೈದರಾಬಾದ್ ಈ ಹಿಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಮನೆಯಂಗಣದಲ್ಲಿ ಜಯ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಸತತ ಎರಡು [ಪಂದ್ಯಗಳಲ್ಲಿ ಸೋತು ಕಂಗೆಟ್ಟಿದ್ದ ಹೈದರಬಾದ್ ಗೆ ಮೂರನೇ ಪಂದ್ಯದಲ್ಲಿ ಸಿಕ್ಕ ಜಯ ಹೈದರಾಬಾದ್ ನ ಫುಟ್ಬಾಲ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮನೆಮಾಡಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭೋತ್ಸವಕ್ಕೆ ಅಂತ್ಯ ಹಾಡಿದ ಬಿಸಿಸಿಐ!
ಅದೇ ಉತ್ಸಾಹ ಆಟಗಾರರಲ್ಲೂ ಮುಂದುವರಿದರೆ ನಾರ್ತ್ ಈಸ್ಟ್ ವಿರುದ್ಧ ಜಯದ ಹಾದಿ ಸುಗಮವಾಗಬಹುದು. ಮಾರ್ಸೆಲೋ ಪೆರೇರಾ ಹೈದರಾಬಾದ್ ತಂಡದ ಜಯದ ಬೆನ್ನೆಲುಬು, ಆದರೆ ಕೋಚ್ ಫಿಲ್ ಬ್ರೌನ್ ಅವರು ಮಾರ್ಸೆಲೋ ಅವರ ಮೇಲೆ ಹೆಚ್ಚು ಒತ್ತಡ ಹಾಕದೆ, ರಾಬಿನ್ ಸಿಂಗ್, ಮೊಹಮ್ಮದ್ ಯಾಸಿರ್, ನಿಖಿಲ್ ಪೂಜಾರಿ ಹಾಗೂ ಮಾರ್ಕೊ ಸ್ಟ್ಯಾಂಕೋವಿಕ್ ಅವರಿಗೆ ಹೆಚ್ಚಿನ ಜವಾಬ್ದಾರಿ ಹೊರುವಂತೆ ಸೂಚಿಸಿದ್ದಾರೆ. ಹೈದರಾಬಾದ್ ತಂಡದ ಡಿಫೆನ್ಸ್ ವಿಭಾಗ ನಿರೀಕ್ಷಿತ ಮಟ್ಟದಲ್ಲಿ ಜವಾಬ್ದಾರಿ ವಹಿಸಿಲ್ಲ, ಆಡಿರುವ ಪಂದ್ಯಗಳಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡದಿರುವುದೇ ಇದಕ್ಕೆ ನಿದರ್ಶನ.
ನಾರ್ತ್ ಈಸ್ಟ್ ಯುನೈಟೆಡ್ ತಂಡ ಗೋವಾ ವಿರುದ್ಧ ಉತ್ತಮವಾಗಿ ಆಡಿದರೂ ಅಂತಿಮ ಕ್ಷಣದಲ್ಲಿ ಗೋಲು ನೀಡಿ ಮೂರು ಅಂಕಗಳಿಂದ ವಂಚಿತವಾಗಿತ್ತು. ಆದರೆ ತಂಡದಲ್ಲಿ ಜಯ ತಂದು ಕೊಡಬಲ್ಲ ಅಸಮೋಹ್ ಗ್ಯಾನ್, ಮಾರ್ಟಿನ್ ಚಾವೇಸ್, ನಿಖಿಲ್ ಕದಮ್ ಹಾಗೂ ರೆಡೀಮ್ ತ್ಲ್ಯಾಂಗ್ ಇದ್ದಾರೆ. ಸುಭಾಶಿಶ್ ರಾಯ್, ಹೀರಿಂಗ್ಸ್ ಕಯ್ ಹಾಗೂ ರಾಕೇಶ್ ಪ್ರಧಾನ್ ಲಭ್ಯ ಇರುವುದರಿಂದ ತಂಡದ ಬಲ ಹೆಚ್ಚಿದೆ.