ಗೋವಾ, ಜನವರಿ 25: ಹೀರೋ ಇಂಡಿಯನ್ ಸೂಪರ್ ಲೀಗ್ನಲ್ಲಿ ಉತ್ತಮ ಆರಂಭ ಕಂಡಿದ್ದರೂ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಕೋಚ್ ಗೆರಾರ್ಡ್ ನಸ್ ಇಲ್ಲದೇ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ. ಜಮ್ಶೆಡ್ಪುರ ವಿರುದ್ಧದ ಪಂದ್ಯದಲ್ಲಿ ಜಯ ಕಾಣದೆ ಐದನೇ ಸ್ಥಾನಕ್ಕೆ ಕುಸಿಯುವಂತಾಯಿತು. ಈಗ ತಂಡವು ಅತ್ಯಂತ ಬಲಿಷ್ಠವಾದ ಕೆಟಿಕೆ ಮೋಹನ್ ಬಾಗನ್ ವಿರುದ್ಧ ಮಂಗಳವಾರ ಕಠಿಣ ಸವಾಲನ್ನು ಎದುರಿಸಲಿದೆ.
ಲೀಗ್ ೩ ನೇ ಹಂತ ತಲುಪಿರುವ ಈ ಸಂದರ್ಭದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಮತ್ತೆ ಸೋಲಿನ ಹಾದಿಯನ್ನು ಹಿಡಿಯುವುದು ಸೂಕ್ತವಲ್ಲ. ಅದೃಷ್ಟವಶಾತ್ ನಾರ್ಥ್ ಈಸ್ಟ್ ತಂಡ ಋತುವಿನ ಉದ್ದಕ್ಕೂ ಎಲ್ಲ ಬಲಿಷ್ಠ ತಂಡದ ವಿರುದ್ಧ ಗೋಲು ಗಳಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚಿನ ಗೋಲುಗಳು ಅನಿರೀಕ್ಷಿತವಾಗಿ ಬಂದರೂ ಅಲ್ಲಿ ತಂಡದ ಶ್ರಮ ಇದೆ. ಭಾನುವಾರ ಜಮ್ಶೆಡ್ ಪುರ ವಿರುದ್ಧ ನಡೆದ ಪಂದ್ಯದಲ್ಲಿ ದೇಶ್ರಾನ್ ಬ್ರೌನ್ ಅವರು ಗೋಲು ಗಳಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಐಎಸ್ಎಲ್: ಬೆಂಗಳೂರಿಗೆ ಜಯ ನೀಡದೆ ಸ್ಫೂರ್ತಿ ಮೆರೆದ ಒಡಿಶಾ
ಬ್ರೌನ್ ಬೆಂಗಳೂರು ತಂಡದಿಂದ ಬಂದ ಆಟಗಾರ. ಜಮೈಕ ಮೂಲದ ಈ ಆಟಗಾರ ಬೆಂಗಳೂರು ತಂಡದಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದರು. ಆದರೆ ನಾರ್ಥ್ ಈಸ್ಟ್ ಪರ ಉತ್ತಮ ಆರಂಭ ಕಂಡಿದ್ದಾರೆ. ''ಬೆಂಗಳೂರು ಆಟಕ್ಕಿಂತ ಇಲ್ಲಿಯ ಆಟ ವಿಭಿನ್ನವಾಗಿದೆ'' ಎಂದು ಹೇಳಿರುವ ಬ್ರೌನ್ ಎಟಿಕೆಎಂಬಿ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸವನ್ನು ಹೊಂದಿದ್ದಾರೆ.
''ನನ್ನ ಪ್ರಕಾರ ಇಲ್ಲಿ ನಾವು ಅತಿ ಹೆಚ್ಚು ಗೋಲು ಗಳಿಸುವ ಅವಕಾಶವನ್ನು ಪಡೆಯಲಿದ್ದೇವೆ. ಇಲ್ಲಿಯ ಆಟದ ಶೈಲಿ ನನಗೆ ಇಷ್ಟವಾಗಿದೆ. ನಾನು ತಂಡಕ್ಕಾಗಿ ಉತ್ತಮ ರೀತಿಯಲ್ಲಿ ಶ್ರಮ ವಹಿಸಲಿದ್ದೇನೆ. ಬೆಂಗಳೂರು ತಂಡಕ್ಕೆ ಹೋಲಿಸಿದರೆ ಇಲ್ಲಿಯ ಹುಡುಗರು ಮಿಡ್ ಫೀಲ್ಡ್ ನಲ್ಲಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಬೆಂಗಳೂರಿನ ಆಟಗಾರರು ಕ್ರಾಸ್ಪಾಸ್ ನಲ್ಲಿ ನಿಸ್ಸೀಮರು. ಆದರೆ ಕ್ರಾಸ್ಪಾಸ್ಗಳನ್ನು ನಿಯಂತ್ರಿಸುವುದು ಕಷ್ಟ. ಸ್ಟ್ರೈಕರ್ಗಳಿಗೆ ಇದರಿಂದ ಸುಲಭವಾಗಿ ಚೆಂಡು ಸಿಗುವುದಿಲ್ಲ'' ಎಂದು ಬ್ರೌನ್ ಹೇಳಿದ್ದಾರೆ.
ಬ್ರೌನ್ ಅವರು ಮತ್ತೊಬ್ಬ ಆಟಗಾರ ಫೆಡ್ರಿಕೋ ಗಲ್ಲೇಗೋ ಅವರೊಂದಿಗೆ ಅಂಗಳಕ್ಕೆ ಇಳಿಯಲಿದ್ದಾರೆ. ಗಲ್ಲೇಗೋ ಅವರು ಜಮ್ಶೆಡ್ಪುರ ವಿರುದ್ಧದ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಲು ನೆರವಾಗಿದ್ದರು. ಈ ಇಬ್ಬರು ಆಟಗಾರರಿಂದಾಗಿ ನಾರ್ಥ್ ಈಸ್ಟ್ ನ ಬಲ ಹೆಚ್ಚಲಿದೆ. '' ನಾವು ನಮ್ಮ ಯೋಜನೆಗಳಿಗೆ ಬದ್ಧರಾಗಿದ್ದೇವೆ. ಅವರದ್ದು ಉತ್ತಮ ತಂಡ. ಆದರೆ ಯಾವುದೇ ತಂಡ ಅವರನ್ನು ಸೋಲಿಸಬಹುದು. ನಾವು ಆರಂಭದಿಂದಲೂ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರೆ ಯಶಸ್ಸು ಕಾಣಬಹುದು'' ಎಂದು ಬ್ರೌನ್ ಹೇಳಿದ್ದಾರೆ.
ಎಟಿಕೆಎಂಬಿ ಉತ್ತಮ ಪ್ರದರ್ಶನ ತೋರುತ್ತಿದ್ದು ಮುಂಬೈ ಸಿಟಿ ತಂಡದಂತೆ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ. ಚೆನ್ನೈಯಿನ್ ವಿರುದ್ಧ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಗೋಲು ಗಳಿಸುವ ಮೂಲಕ ಆಂಟೋನಿಯೋ ಲೋಫೇಸ್ ಹಬ್ಬಾಸ್ ಪಡೆ ಸೋಲನ್ನು ತಪ್ಪಿಸಿಕೊಂಡಿದ್ದು ನಾರ್ಥ್ ಈಸ್ಟ್ ತಂಡವು ತಮಗೆ ಕಠಿಣ ಸವಾಲನ್ನು ನೀಡಲಿದೆ ಎಂದು ಹಬ್ಬಾಸ್ ಎಚ್ಚರಿಸಿದ್ದಾರೆ.
''ಚೆನ್ನೈಯಿನ್ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡವು ೯೦ ನಿಮಿಷಗಳ ಕಾಲ ಉತ್ತಮ ಫುಟ್ಬಾಲ್ ಆಡಿತ್ತು. ನಮಗೆ ಜಯದ ಅಗತ್ಯವಿದೆ ಎಂದು ಆಟಗಾರರು ಅರಿತಿದ್ದಾರೆ. ನಾವು ನಮ್ಮ ಆಟದ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ಹೊಸ ಕ್ರಮಕ್ಕೆ ಒಗ್ಗಿಕೊಂಡಿದ್ದೇವೆ. ಇದರಿಂದ ಹೆಚ್ಚು ಗೋಲು ಗಳಿಸಲು ಸಾಧ್ಯವಿದೆ'' ಎಂದು ಹೇಳಿದ್ದಾರೆ.
''ನಾವು ನಮ್ಮ ಎದುರಾಳಿಯನ್ನು ಗೌರವಿಸಬೇಕು. ಮೂರು ಅಂಕಗಳಿಗಾಗಿ ಎದುರಾಳಿಯನ್ನು ಸೋಲಿಸಬೇಕಾದ ಅನಿವಾರ್ಯತೆ ಇದೆ. ಅವರು ಅತ್ಯಂತ ಕಠಿಣ ಎದುರಾಳಿಗಳು. ಅವರಲ್ಲಿ ಉತ್ತಮ ಆಟಗಾರರಿದ್ದಾರೆ. ಇದರಿಂದಾಗಿ ನಾಳೆಯ ಪಂದ್ಯ ಕಠಿಣವೆನಿಸಬಹುದು ಎಂದು ಹೇಳಿದ್ದಾರೆ.