ಗೋವಾ, ಫೆಬ್ರವರಿ 21: ಬೆಂಗಳೂರು ಎಫ್ ಸಿ ವಿರುದ್ಧ 2-1 ಗೋಲಿನಿಂದ ಜಯ ಗಳಿಸಿದ ಎಫ್ ಸಿ ಗೋವಾ ತಂಡಕ್ಕೆ ಇನ್ನು ಪ್ಲೇ ಆಫ್ ಹಂತ ತಲುಪಲು ಕೇವಲ ಒಂದೇ ಮೆಟ್ಟಿಲು. ಈ ಸೋಲಿನೊಂದಿಗೆ ಬೆಂಗಳೂರು ತಂಡದ ಪ್ಲೇ ಆಫ್ ಕನಸು ನುಚ್ಚುನೂರಾಯಿತು. ಇದೇ ಮೊದಲು ಬಾರಿಗೆ ಬೆಂಗಳೂರು ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ತಲಪುವಲ್ಲಿ ವಿಫಲವಾಯಿತು.
ಗೋವಾ ಮುನ್ನಡೆ: 45 ನಿಮಿಷಗಳ ಪ್ರಥಮಾರ್ಧದಲ್ಲಿ ಗೋವಾ ತಂಡ 2-1 ಗೋಲುಗಳಿಂದ ಮೇಲುಗೈ ಸಾಧಿಸಿದೆ. ಐಗೊರ್ ಆಂಗುಲೊ (20ನೇ ನಿಮಿಷ) ಹಾಗೂ ರೀಡಿಮ್ ತ್ಲಾಂಗ್ (23ನೇ ನಿಮಿಷ) ಗಳಿಸಿದ ಗೋಲುಗಳು ಗೋವಾ ತಂಡಕ್ಕೆ ಮುನ್ನಡೆ ತಂದುಕೊಟ್ಟಿತಲ್ಲದೆ ಮುಂದಿನ 45 ನಿಮಿಷಗಳ ಆಟವನ್ನು ಆತ್ಮವಿಶ್ವಾಸದಲ್ಲಿ ಆಡಲು ಅನುವುಮಾಡಿಕೊಟ್ಟಿತು. 33ನೇ ನಿಮಿಷದಲ್ಲಿ ಸುರೇಶ್ ಸಿಂಗ್ ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಉತ್ತಮ ರೀತಿಯಲ್ಲಿ ತಿರುಗೇಟು ನೀಡಿತು. ಆದರೆ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ ಕಾರಣ ಬೆಂಗಳೂರು ಸಮಬಲ ಸಾಧಿಸುವಲ್ಲಿ ವಿಫಲವಾಯಿತು.
ಮೊದಲನೇ ಗೋಲನ್ನು ಆಂಗುಲೋ ಸುಲಭವಾಗಿ ಗಳಿಸಿದರು. ಇದಕ್ಕೆ ಮುಖ್ಯ ಕಾರಣ ಎರಿಕ್ ಪಾರ್ಥಲು ಮಾಡಿದ ಪ್ರಮಾದ. ಪೆನಾಲ್ಟಿ ವಲಯದಲ್ಲಿ ಬಂದ ಚೆಂಡನ್ನು ನೇರವಾಗಿ ಪಾಸ್ ಮಾಡಲುವಲ್ಲಿ ವಿಫಲರಾದ ಎರಿಕ್ ಪಾರ್ಥಲು ಅವರಿಂದ ಗ್ಲಾನ್ ಮಾರ್ಟಿನ್ ನಿಂತ್ರಿಸಿ ಆಂಗುಲೋ ಅವರಿಗೆ ನೀಡಿದರೆ ಯಾವುದೇ ನಿಯಂತ್ರಣ ಇಲ್ಲದ ಕಾರಣ ಆಂಗುಲೋ ಸುಲಭವಾಗಿ ಚೆಂಡನ್ನು ಗೋಲ್ ಬಾಕ್ಸ್ ಗೆ ಗುರಿ ಇಟ್ಟರು. ಗುರ್ ಪ್ರೀತ್ ಸಿಂಗ್ ಸಂಧೂಗೆ ಯಾವುದೇ ರೀತಿಯಲ್ಲಿ ಚೆಂಡನ್ನು ತಡೆಯಲಾಗಲಿಲ್ಲ.
ಜಯವೊಂದೇ ಮಂತ್ರ: ಈ ಹಂತದಲ್ಲಿ ಜಯವೊಂದೇ ತಂಡಗಳ ಮಂತ್ರವಾಗಿದೆ, ಇಲ್ಲಿ ಡ್ರಾ ಗಳಿಸಿದರೆ ಯಾವುದೇ ಪ್ರಯೋಜನವಿಲ್ಲ. ಜಯ ಗಳಿಸಿದರೆ ಮಾತ್ರ ಮುಂದಿನ ಹಾದಿ ಸುಗಮವಾಗಲಿದೆ. ಈ ಪಂದ್ಯ ಇತ್ತಂಡಗಳಿಗೂ ಫೈನಲ್ ಪಂದ್ಯವಿದ್ದಂತೆ. ಮುಂಬೈ ಸಿಟಿ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಈ ಪಂದ್ಯಕ್ಕೆ ಆಗಮಿಸಿತ್ತು. ಸುನಿಲ್ ಛೆಟ್ರಿ ಹಾಗೂ ಕ್ಲೈಟನ್ ಸಿಲ್ವಾ ಇಬ್ಬರೂ ತಲಾ ಎರಡು ಗೋಲು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಲ್ಲಿಯೂ ಬೆಂಗಳೂರು ಈ ಇಬ್ಬರು ಆಟಗಾರರಿಂದ ಗೋಲಿನ ನಿರೀಕ್ಷೆಯೊಂದಿಗೆ ಅಂಗಣಕ್ಕಿಳಿಯಿತು. ಗೋವಾ ತಂಡ 3-1 ಗೋಲುಗಳ ಅಂತರದಲ್ಲಿ ಒಡಿಶಾ ವಿರುದ್ಧ ಜಯ ಗಳಿಸಿ ಆತ್ಮವಿಶ್ವಾಸದೊಂದಿಗೆ ಈ ಪಂದ್ಯಕ್ಕೆ ಆಗಮಿಸಿತ್ತು.
ಸತತ ಆರು ಪಂದ್ಯಗಳಲ್ಲಿ ಡ್ರಾ ಕಂಡಿದ್ದ ಗೋವಾಕ್ಕೆ ಈ ಜಯ ಹೊಸ ಆತ್ಮವಿಶ್ವಾಸವನ್ನು ಮೂಡಿಸಿತ್ತು. ಜಾರ್ಜ್ ಮೆಂಡೋನ್ಸಾ ಅವರನ್ನು ಅಂಗಣಕ್ಕೆ ಇಳಿಸು ನಿರ್ದಾರ ಕೈಗೊಂಡಿದ್ದು ಕೋಚ್ ಜುವಾನ್ ಫೆರಾಂಡೋ ಅವರ ಉತ್ತಮ ತೀರ್ಮಾನವಾಗಿತ್ತು ಮತ್ತು ಅದಕ್ಕೆ ಬೆಲೆಯು ಸಿಕ್ಕಿತು. ಇಲ್ಲಿ ಜಯ ಗಳಿಸಿದರೆ ಗೋವಾ ತಂಡ ಪ್ಲೇ ಆಫ್ ಗೆ ಕೇವಲ ಒಂದೇ ಹೆಜ್ಜೆ ಬಾಕಿ ಇರುತ್ತದೆ.