ಗೋವಾ, ಫೆಬ್ರವರಿ 3: ನಾರ್ಥ್ ಈಸ್ಟ್ ತಂಡದ ಎಲ್ಲ ಆಸೆಗಳೂ ಕಮರಿಹೋಗುತ್ತಿವೆ ಎಂಬ ಸ್ಥಿತಿ ನಿರ್ಮಾಣವಾದಾಗ ಖಾಲೀದ್ ಜಮೀಲ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿರುವುದು ತಂಡಕ್ಕೆ ಹೊಸ ಜೀವ ತುಂಬಿದಂತಾಗಿದೆ. ಅಂಕಪಟ್ಟಿಯಲ್ಲಿ ವಿರುದ್ಧ ಸ್ಥಾನದಲ್ಲಿದ್ದ ತಂಡದ ಪ್ಲೇ ಆಫ್ ಆಸೆ ಅತಂತ್ರವಾಗಿತ್ತು. ಗೆರಾರ್ಡ್ ನಸ್ ನಿರ್ಗಮನದ ನಂತರ ತಂಡದ ಜಯದ ಆಸೆ ದೂರವಾಗಿತ್ತು. ಆದರೆ ಜಮೀಲ್ ಆಗಮನದ ನಂತರ ತಂಡ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಿತು.
ಅಗ್ರ ಸ್ಥಾನದಲ್ಲಿದ್ದ ಮುಂಬೈ ಸಿಟಿ ಎಫ್ ಸಿ ವಿರುದ್ಧ ಜಯ ಗಳಿಸಿದ ನಾರ್ಥ್ ಈಸ್ಟ್ ಯುನೈಟೆಡ್ ಈಗ ಗೋವಾದ ವಿರುದ್ಧ ಜಯ ಗಳಿಸಲು ಗುರುವಾರದ ಪಂದ್ಯದಲ್ಲಿ ಹೋರಾಟ ನಡೆಸಲಿದೆ.14 ಪಂದ್ಯಗಳ ನಂತರ ಇತ್ತಂಡಗಳು 21 ಅಂಕ ಗಳಿಸಿದ್ದು, ನಾರ್ಥ್ ಈಸ್ಟ್ ಈಗ ಐದನೇ ಸ್ಥಾನದಲ್ಲಿದೆ. ನಾರ್ಥ್ ಈಸ್ಟ್ ಯುನೈಟೆಡ್ ಕಳೆದ ನಾಲ್ಕು ಪಂದ್ಯಗಳಿಂದ ಸೋಲು ಕಂಡಿರಲಿಲ್ಲ. ಗೋವಾ ಕಳೆದ ಏಳು ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಇದರಿಂದಾಗಿ ಪಂದ್ಯ ಸಾಕಷ್ಟು ಕುತೂಹಲಗಳಿಗೆ ಸಾಕ್ಷಿಯಾಗಲಿದೆ.
ಐಎಸ್ಎಲ್ 2021: ಈಸ್ಟ್ ಬೆಂಗಾಲ್ ವಿರುದ್ಧ ಗೆದ್ದ ಬೆಸ್ಟ್ ಬೆಂಗಳೂರು
"ಅವರ ಆಟವನ್ನು ನಾವು ಗಮನಿಸಿದ್ದೇವೆ. ನಾವು ಪಂದ್ಯದ ಬಗ್ಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದೇವೆ. ಉತ್ತಮ ರೀತಿಯಲ್ಲಿ ಹೋರಾಟ ನೀಡಿ ಪಂದ್ಯವನ್ನು ಗೆಲ್ಲಲು ಯತ್ನಿಸುತ್ತೇವೆ," ಎಂದು ನಾರ್ಥ್ ಈಸ್ಟ್ ತಂಡದ ಕೋಚ್ ಅಲಿಸನ್ ಖಾರ್ಸಿಂಟಿನ್ ಹೇಳಿದ್ದಾರೆ. ಕಳೆದ ಎಂಟು ಪಂದ್ಯಗಳಲ್ಲಿ ನಾರ್ಥ್ ಈಸ್ಟ್ ತಂಡ ಕ್ಲೀನ್ ಶೀಟ್ ಗಳಿಸದಿದ್ದರೂ ನೂತನ ಕೋಚ್ ಬಂದ ನಂತರ ಸತತ ಮೂರು ಜಯ ಗಳಿಸಿದೆ, ಇದು ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ನಾರ್ಥ್ ಈಸ್ಟ್ ಈ ಸಾಧನೆ ಮಾಡಿದೆ
"ಇದಕ್ಕೆ ಕೋಚ್ ಖಲಿದ್ ಅವರ ಶ್ರಮವೇ ಕಾರಣ. ಕೋಚಿಂಗ್ ಸಿಬ್ಬಂದಿ ಮತ್ತು ಆಟಗಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ನಾವು ಯಾವುದೇ ಬದಲಾವಣೆ ಮಾಡಿಲ್ಲ. ನಾವು ನಮ್ಮ ಅಟ್ಯಾಕ್ ವಿಭಾಗದ ಬಲವನ್ನು ಹೆಚ್ಚಿಸಿದ್ದೇವೆ. ನಾವು ಕ್ರಿಯಾಶೀಲ ಫುಟ್ಬಾಲ್ ಆಡಲಿದ್ದೇವೆ,'' ಎಂದರು. ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಪಂದ್ಯ 1-1ರಲ್ಲಿ ಸಮಬಲಗೊಂಡಿತ್ತು. ಆದರೆ ಗೋವಾದ ಕೋಚ್ ಜುವಾನ್ ಫೆರಾಂಡೊ ನಾರ್ಥ್ ಈಸ್ಟ್ ವಿರುದ್ಧದ ಪಂದ್ಯ ಕಠಿಣವಾಗಲಿದೆ ಎಂದರು.
"ನಾರ್ಥ್ ಈಸ್ಟ್ ಆಟಗಾರರು ಖುಷಿಯಾಗಿದ್ದಾರೆ. ಅವರು ಪ್ರತಿಯೊಂದು ಪಂದ್ಯ, ಪ್ರತಿಯೊಂದು ನಿಮಿಷವನ್ನೂ ಸಂಭ್ರಮಿಸುತ್ತಿದ್ದಾರೆ, ಅವರ ಡ್ರೆಸ್ಸಿಂಗ್ ರೂಮಿನಲ್ಲಿ ಆಟಗಾರರು ಸಂಭ್ರಮದಲ್ಲಿದ್ದಾರೆ. ಅವರು ಕಠಿಣ ಪಂದ್ಯಗಳನ್ನು ಗೆದ್ದಿದ್ದಾರೆ. ಆಟಗಾರರು ಪಿಚ್ ನಲ್ಲಿ ಫ್ರೀ ಇದ್ದಾರೆ. ಅವರ ತಂಡದಲ್ಲಿ ಧನಾತ್ಮಕ ಅಂಶ ಹೆಚ್ಚಿದೆ," ಎಂದರು.
ಪ್ಲೇ ಆಫ್ ಗೆ ಹಂತಕ್ಕಾಗಿ ತಂಡಗಳ ನಡುವಿನ ಕಾವು ಏರಿರುವುದನ್ನು ಫೆರಾಂಡೊ ಒಪ್ಪಿಕೊಂಡಿದ್ದಾರೆ. "ಒತ್ತಡದ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಇದು ಭಾರತದ ಲೀಗ್ ದೃಷ್ಟಿಯಿಂದ ಉತ್ತಮವಾದುದು, ಹೆಚ್ಚು ಕಡಿಮೆ ಎರಡು ತಂಡಗಳ ನಡುವೆ 3-4 ಅಂಕಗಳ ಅಂತರವಿದೆ. ನಾವು ಈ ಸಂದರ್ಭದಲ್ಲಿ ವಿರಮಿಸವಂತಿಲ್ಲ. ಪ್ರತಿಯೊಂದು ಪಂದ್ಯವೂ ಪ್ರಮುಖವಾದುದು, ಮೂರು ಅಂಕಗಳನ್ನು ಗಳಿಸುವುದು ನಮ್ಮ ಗುರಿ,' ಎಂದರು.