ಗೋವಾ, ಮಾರ್ಚ್ 13: ಬಲಿಷ್ಠ ಎಟಿಕೆ ಮೋಹನ್ ಬಾಗನ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ಮೊದಲ ಬಾರಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿದೆ. ಬಿಪಿನ್ ಸಿಂಗ್ 90ನೇ ನಿಮಿಷದಲ್ಲಿ ಗಳಿಸಿದ ಗೋಲು ಮುಂಬೈ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿತು. ಪ್ರಥಮಾರ್ಧದಲ್ಲಿ ತಿರಿ ನೀಡಿದ ಉಡುಗೊರೆ ಗೋಲು ಮುಂಬೈ ತಂಡಕ್ಕೆ ಅದೃಷ್ಟದ ಸಮಬಲ ಸಾಧಿಸುವಂತೆ ಮಾಡಿತು.
1-1 ಸಮಬಲದ ಪ್ರಥಮಾರ್ಧ: ಎಟಿಕೆ ಮೋಹನ್ ಬಾಗನ್ ಹಾಗೂ ಮುಂಬೈ ಸಿಟಿ ತಂಡಗಳ ನಡುವಿನ ಫೈನಲ್ ಪಂದ್ಯದ ಪ್ರಥಮಾರ್ಧ 1-1 ರಲ್ಲಿ ಸಮಬಲಗೊಂಡಿದೆ. ಮುಂಬೈ ಪೆನಾಲ್ಟಿ ವಲಯದ ಸಮೀಪ ಮಾಡಿದ ಪ್ರಮಾದದ ಪಾಸ್ ನ ಪರಿಣಾಮ ಡೇವಿಡ್ ವಿಲಿಯಮ್ಸ್ (18ನೇ ನಿಮಿಷ) ಗಳಿಸಿದ ಗೋಲು ಹಾಲಿ ಚಾಂಪಿಯನ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಆದರೆ 29ನೇ ನಿಮಿಷದಲ್ಲಿ ತಿರಿ ನೀಡಿದ ಉಡುಗೊರೆ ಗೋಲು ಪ್ರಥಮಾರ್ಧವನ್ನು 1-1ರಿಂದ ಸಮಬಲಗೊಳಿಸಿತು. ತಿರಿ ಈ ಋತುವಿನಲ್ಲಿ ಎರಡನೇ ಬಾರಿಗೆ ಎದುರಾಳಿ ತಂಡಕ್ಕೆ ಉಡುಗೊರೆ ನೀಡಿದರು. 45ನೇ ನಿಮಿಷದಲ್ಲಿ ಅಮೆ ರಣವಾಡೆ ಚೆಂಡನ್ನು ನಿಯಂತ್ರಿಸಲು ಹೋಗಿ ತೀವ್ರವಾಗಿ ಗಾಯಗೊಂಡಿದ್ದು ಪಂದ್ಯವನ್ನು ಕೆಲ ಹೊತ್ತು ನಿಲ್ಲಿಸಬೇಕಾಯಿತು. ಇತ್ತಂಡಗಳ ಆಟಗಾರರು ಆತಂಕದಲ್ಲಿರುವುದು ಕಂಡು ಬಂತು. ರಣವಾಡೆ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಫೈನಲ್ ಫೈಟ್: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಇದುವರೆಗೂ ಇದುವರೆಗೂ ನಡೆದದ್ದು ಫೈನಲ್ ತಲಪುವ ಹೋರಾಟ. ಶನಿವಾರ ನಡೆದದ್ದು ಮುಂಬೈ ಸಿಟಿ ಎಫ್ ಸಿ ತಂಡವು ಮೋಹನ್ ಬಾಗನ್ ವಿರುದ್ಧ ಸೆಣಸಲಿದೆ. ಮುಂಬೈ ಜಯ ಗಳಿಸಿದರೆ ಮೊದಲ ಬಾರಿ ಪ್ರಶಸ್ತಿ ಗೆದ್ದ ಸಂಭ್ರಮಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಮೋಹನ್ ಬಾಗನ್ ಮತ್ತು ಮುಂಬೈ ಸಿಟಿ ಇತರ ತಂಡಗಳಿಗಿಂತ ತಾವೇ ಬಲಿಷ್ಠ ಎಂಬುದನ್ನು ಸಾಬೀತುಮಾಡಿ ಫೈನಲ್ ತಲುಪಿವೆ. 12ಜಯ ಹಾಗೂ ಕೇವಲ 4 ಸೋಲುಗಳನ್ನು ಕಂಡ ಈ ಎರಡೂ ತಂಡಗಳು ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿವೆ.
ಗೋವಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶೂಟೌಟ್ ಮೂಲಕ ಜಯ ಗಳಿಸಿ ಫೈನಲ್ ತಲುಪಿರುವ ಮುಂಬೈ ಸಿಟಿ ಈಗ ಫೈನಲ್ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಲೀಗ್ ಹಂತದಲ್ಲಿ ಮುಂಬೈ ತಂಡ ಬಾಗನ್ ವಿರುದ್ಧ ಜಯ ಗಳಿಸಿತ್ತು. ಇದರಿಂದ ಲೀಗ್ ವಿನ್ನರ್ಸ್ ಶೀಲ್ಡ್ ತನ್ನದಾಗಿಸಿಕೊಂಡಿತ್ತು. ಮುಂಬೈ ತಂಡವನ್ನು ಫೈನಲ್ ಗೆ ತಲುಪಿಸುವಲ್ಲಿ ರಣತಂತ್ರ ರೂಪಿಸಿದ ಸರ್ಗಿಯೊ ಲೊಬೆರಾ ಅವರ ಪಾತ್ರ ಪ್ರಮುಖವಾದುದು. ಮುಂಬೈ ಇದುವರೆಗೂ ಉತ್ತಮ ರೀತಿಯಲ್ಲೇ ಪ್ರದರ್ಶನ ನೀಡುತ್ತಾ ಬಂದಿತ್ತು. ಅದೇ ರೀತಿ ಫೈನಲ್ ನಲ್ಲೂ ಉತ್ತಮ ಪ್ರದರ್ಶನ ನೀಡಬಹುದೆಂಬುದು ಮುಂಬೈ ಅಭಿಮಾನಿಗಳ ನಿರೀಕ್ಷೆ. ಗೋವಾದ ಐಗರ್ ಆಂಗುಲೊ ಮತ್ತು ಬಾಗನ್ ನ ರಾಯ್ ಕೃಷ್ಣ ತಲಾ 14 ಗೋಲುಗಳನ್ನು ಗಳಿಸಿ ಗೋಲ್ಡ್ ಬೂಟ್ ಸ್ಪರ್ಧೆಯಲ್ಲಿದ್ದಾರೆ. ಶನಿವಾರದ ಪಂದ್ಯ ಗೋಲ್ಡನ್ ಬೂಟ್ ವಿಜೇತರನ್ನೂ ನಿರ್ಧರಿಸಲಿದೆ.ರಾಯ್ ಕೃಷ್ಣ ಒಂದು ಗೋಲು ಗಳಿಸಿದರೂ ಗೋಲ್ಡನ್ ಬೂಟ್ ಅವರ ಪಾಲಾಗಲಿದೆ.