ಟಾಟಾ ಪಡೆಗೆ ಜಯದ ಹಂಬಲ
ಸತತ ಮೂರು ಸೋಲುಗಳ ನಂತರ ಕಂಗೆಟ್ಟಿರುವ ಜೆಮ್ಷೆಡ್ಪುರ ಎಫ್ ಸಿ ತಂಡಕ್ಕೆ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ಹಂತ ತಲುಪವು ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜಯ ಕಾಣಬೇಕಾದ ಅನಿವಾರ್ಯತೆ ಇದೆ. ಜಯವನ್ನೇ ಗುರಿಯಾಗಿಸಿಕೊಂಡ ಇತ್ತಂಡಗಳು ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿ ಅಂಗಣಕ್ಕಿಳಿದವು.ಕಳೆದ ವರ್ಷ ಚೆನ್ನೈಯಿನ್ ಎಫ್ ಸಿ ತಂಡ ಮಧ್ಯತರದಲ್ಲಿ ಆದ ಬದಲಾವಣೆಯಲ್ಲಿ ಯಶಸ್ಸು ಕಾಣಲು ಕೊಯ್ಲ್ ಅವರ ಪಾತ್ರ ಪ್ರಮುಖವಾಗಿತ್ತು. ತಂಡವನ್ನು ಫೈನಲ್ ಕೊಂಡೊಯ್ಯವಲ್ಲಿ ಕೊಯ್ಲ್ ಅವರ ಯೋಜನೆಗಳು ಪ್ರಮುಖವಾಗಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ತಂಡವನ್ನು ಫೈನಲ್ ಗೆ ಕೊಂಡೊಯ್ಯವಲ್ಲಿ ಕೊಯ್ಲ್ ಪ್ರಮುಖ ಪಾತ್ರವಹಿಸಿದ್ದರು. ಸದ್ಯ ಜೆಮ್ಷೆಡ್ಪುರ ತಂಡ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೂ ತಮ್ಮ ತಂಡ ಪ್ಲೇ ಆಫ್ ಹಂತ ತಲುಪಲಿದೆ ಎಂದು ಕೋಚ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಚೌಧರಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ
ಇದಕ್ಕಾಗಿ ತಂಡ ಸೈಮಿನ್ಲೆನ್ ಡೌಂಗಲ್ ಅವರನ್ನು ಸಾಲವಾಗಿ ಪಡೆದಿದ್ದು ಮತ್ತು ಫಾರೂಕ್ ಚೌಧರಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ, ಇಬ್ಬರೂ ಇಂದಿನ ಪಂದ್ಯದಲ್ಲಿ ಆಡಲಿದ್ದಾರೆ. ಎದುರಾಳಿ ತಂಡಕ್ಕೆ ಹೋಲಿಕೆ ಮಾಡಿ ಹೇಳುವುದಾದರೆ, ಹೈದರಾಬಾದ್ ತಂಡ ಉತ್ತಮ ಸ್ಥಿತಿಯಲ್ಲಿದೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿರಲಿಲ್ಲ. ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ ಇತ್ತೀಚಿನ ಪಂದ್ಯಗಳಲ್ಲಿ ದುರ್ಬಲಗೊಂಡಿದ್ದು, ಹಿಂದಿನ ಮೂರು ಪಂದ್ಯಗಳಲ್ಲಿ 9 ಗೋಲುಗಳನ್ನು ನೀಡಿದೆ. ಹೈದರಾಬಾದ್ ಇದರ ಸದುಪಯೋಗ ಪಡೆಯಲು ಉತ್ಸುಕವಾಗಿದೆ. ಆದರೆ ಈ ಹಿಂದೆ ಮೂರು ಬಾರಿ ಪರಸ್ಪರ ಮುಖಾಮುಖಿಯಾದಾಗ ಹೈದರಾಬಾದ್ ತಂಡಕ್ಕೆ ಜೆಮ್ಷೆಡ್ಪುರ ವಿರುದ್ಧ ಜಯ ಗಳಿಸಲು ಸಾಧ್ಯವಾಗಲಿಲ್ಲ.
ತಂಡದ ಹಿನ್ನಡೆಗೆ ಪ್ರಮುಖ ಕಾರಣ
ಜೆಮ್ಷೆಡ್ಪುರದ ಯಶಸ್ಸಿನಲ್ಲಿ ಪ್ರಮುಖಪಾತ್ರವಹಿಸಿದ್ದ ನೆರಿಜಸ್ ವಾಸ್ಕಿಸ್ ಕಳೆದ ಎರಡು ಪಂದ್ಯಗಳಲ್ಲಿ ಗೋಲು ಗಳಿಸಿರಲಿಲ್ಲ ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಆದರೆ ಹಿಂದಿನ ಸಾಧನೆಗಳನ್ನು ಮೆಲುಕು ಹಾಕುವುದಕ್ಕಿಂತ ಇಂದಿನ ಪಂದ್ಯದ ಬಗ್ಗೆ ಗಮನ ಹರಿಸಿದರೆ ಉತ್ತಮ ಪಂದ್ಯವೊಂದು ರೂಪುಗೊಳ್ಳಲು ಸಾಧ್ಯ.