ಬೆಂಗಳೂರು, ಫೆಬ್ರವರಿ 22: ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಎಟಿಕೆ ತಂಡ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ವಿರುದ್ಧ ಜಯ ಗಳಿಸುವ ಉದ್ದೇಶ ಹೊಂದಿದೆ.
ಡೆಸೆಂಬರ್ ನಲ್ಲಿ ನಡೆದ ಪಂದ್ಯದಲ್ಲಿ ಎಟಿಕೆ ತಂಡ ಪಂದ್ಯದ ಆರಂಭದಿಂದ ಅಂತ್ಯದ ವರೆಗೂ ಪ್ರಭುತ್ವ ಸಾಧಿಸಿ 1-0 ಅಂತರದಲ್ಲಿ ಜಯ ಗಳಿಸಿತ್ತು. ಎರಡೂ ತಂಡಗಳು ಈಗಾಗಲೇ ಪ್ಲೇ ಆಫ್ ಗೆ ಅರ್ಹತೆ ಪಡೆದಿರುವುದರಿಂದ ಇತ್ತಂಡಗಳ ಕೋಚ್ ಗಳು ತಮ್ಮ ಮೊದಲ ಆಯ್ಕೆಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಬೆಂಗಳೂರು ತಂಡ ಚೆನ್ನೈಯಿನ್ ಹಾಗೂ ಕೇರಳ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ ಒಂದು ಅಂಕವನ್ನು ಗಳಿಸಲು ಶಕ್ಯವಾಗಿ ಅದು ತನ್ನ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲವಾಗಿತ್ತು. ಎಎಫ್ ಸಿ ಅರ್ಹತಾ ಸುತ್ತಿನ ಪಂದ್ಯದಲ್ಲೂ ಮಾಲ್ದೀವ್ಸ್ ನ ಮಾಜಿಯಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು.
ಖುಷಿಯ ವಿಚಾರವೆಂದರೆ ಸುನಿಲ್ ಛೆಟ್ರಿ ಹಾಗೂ ಜುವಾನನ್ ತಂಡಕ್ಕೆ ಮರಳಿದ್ದಾರೆ. ನಾಲ್ಕನೇ ಬಾರಿಗೆ ಯಲ್ಲೋ ಕಾರ್ಡ್ ಪಡೆದ ಅಲ್ಬರ್ಟ್ ಸೆರಾನ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
''ಎಟಿಕೆ ತಂಡ ಪ್ರಶಸ್ತಿ ಗೆದ್ದ ನಂತರ ಪ್ಲೇ ಆಫ್ ತಲುಪಿದ ಏಕೈಕ ತಂಡವೆನಸಿದೆ. ಉಳಿದಂತೆ ಎಲ್ಲಾ ತಂಡಗಳು ಪ್ರಶಸ್ತಿ ಗೆದ್ದ ನಂತರ ಸಂಕಟ ಎದುರಿಸಿವೆ. ಆದರೆ ನಾವು ಮೂರನೇ ಋತುವಿನ್ನೂ ಪ್ಲೇ ಆಫ್ ಹಂತ ತಲುಪಿದ್ದೇವೆ,'' ಎಂದು ಕ್ವಾಡ್ರಾಟ್ ಹೇಳಿದ್ದಾರೆ.
ಕಳೆ ವಾರಾಂತ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ 3-1 ಗೋಲುಗಳಿಂದ ಸೋಲು ಅನುಐವಿಸಿರುವ ಎಟಿಕೆ ಈಗ ಪುಟಿದೇಳುವ ತವಕದಲ್ಲಿದೆ. ಆಂಟೋನಿಯೋ ಹಬ್ಬಾಸ್ ಪಡೆ, ಪ್ಲೇ ಆಫ್ ಗೆ ಮುನ್ನ ನಡೆಯುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ.
ಹಿಂದಿನ ಪಂದ್ಯದಲ್ಲಿ ಗಾಯಗೊಂಡ ಕಾರಣ ಎಟಿಕೆಯ ಸೆಂಟರ್ ಬ್ಯಾಕ್ ಆಟಗಾರ ಅನಾಸ್ ಎಡಥೋಡಿಕಾ ಆರು ತಿಂಗಳ ಅವಧಿಗೆ ಆಟದಿಂದ ಹೊರಗುಳಿಯಲಿದ್ದಾರೆ. ಆಕ್ರಮಣಕಾರಿ ಮಿಡ್ ಫೀಲ್ಡರ್ ಜೇವಿಯರ್ ಹೆರ್ನಾಂಡೀಸ್ ಅಮಾನತುಗೊಂಡಿರುವುದರಿಂದ ಡೇವಿಡ್ ವಿಲಿಯಮ್ಸ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
''ನಾಳೆಯ ಪಂದ್ಯದಲ್ಲಿ ನಾವು ಗೆಲ್ಲಬೇಕಾಗಿದೆ. ನಮ್ಮ ಯೋಚನೆಗಳು ಯಾವುದೇ ಕಾರಣಕ್ಕೂ ಬದಾಳಗುವುದಿಲ್ಲ. ಬೆಂಗಳೂರು ಉತ್ತಮ ಕ್ಲಬ್, ಅವರು ಹಾಲಿ ಚಾಂಪಿಯನ್ನರು. ಆದ್ದರಿಂದ ನಮಗೆ ಪಂದ್ಯ ಕಠಿಣ ಎನಿಸಬಹುದು. ನಾವು ಎದುರಾಳಿಗಳನ್ನು ಗೌರವಿಸಿತ್ತೇವೆ. ಸುನಿಲ್ ಛೆಟ್ರಿಯ ಬಗ್ಗೆ ನಾವು ಯಾವುದೇ ಹೊಸ ಯೋಜನೆ ಹಾಕಿಕೊಂಡಿಲ್ಲ. ನಮ್ಮ ಯೋಜನೆ ಬೆಂಗಳೂರು ಎಫ್ ಸಿ ವಿರುದ್ಧವೇ ಹೊರತು ಯಾವುದೇ ವೈಯಕ್ತಿಕ ಆಟಗಾರನ ವಿರುದ್ಧವಲ್ಲ. ಎಂದು ಹಬ್ಬಾಸ್ ಹೇಳಿದ್ದಾರೆ.