ಕೋಲ್ಕತಾ, ಜನವರಿ 13: ಹಾಲಿಚರಣ್ ನಾರ್ಜರಿ (70ನೇ ನಿಮಿಷ) ಗಳಿಸಿದ ಗೋಲಿನಿಂದ ಎಟಿಕೆ ತಂಡವನ್ನು 1-0 ಅಂತರದಲ್ಲಿ ಮಣಿಸಿದ ಕೇರಳ ಬ್ಲಾಸ್ಟರ್ಸ್ ತಂಡ ಇಂಡಿಯನ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನತಲುಪಿತು. ಋತುವಿನಲ್ಲಿ ಸತತ ವೈಫಲ್ಯ ಕಾಣುತ್ತಿದ್ದ ಕೇರಳ ಈಗ ಸತತ ಎರಡನೇ ಜಯ ಗಳಿಸಿ ನಾಲ್ಕನೇ ಸ್ಥಾನವನ್ನು ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಇದರೊಂದಿಗೆ ಕಳೆದ ಆರು ಪಂದ್ಯಗಳಿಂದ ಎಟಿಕೆ ತಂಡಕ್ಕೆ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲ್ಲುವಲ್ಲಿ ವಿಫಲವಾಯಿತು.
ಗೋಲಿಲ್ಲದ ಪ್ರಥಮಾರ್ಧ
ಎರಡೂ ತಂಡಗಳು ಉತ್ತಮ ರೀತಿಯಲ್ಲಿ ಪ್ರಥಮಾರ್ಧದಲ್ಲಿ ಪೈಪೋಟಿ ನೀಡಿದವು, ಆದರೆ ಗೋಲು ದಾಖಲಾಗಲಿಲ್ಲ. 45 ನಿಮಿಷಗಳ ಕಾಲ ಕುತೂಹಲದ ಫುಟ್ಬಾಲ್ ಕಂಡು ಬಂತು, ಆದರೆ ಅವಕಾಶಗಳು ಗೋಲಾಗಿ ರೂಪುಗೊಳ್ಳಲಿಲ್ಲ. 28ನೇ ನಿಮಿಷದಲ್ಲಿ ಮೆಸ್ಸಿ ಬೌಲಿ ಇಟ್ಟ ಗುರಿ ಗೋಲ್ ಬಾಕ್ಸ್ ನ ಹೊರಭಾಗದಲ್ಲಿ ಹಾದು ಹೋಯಿತು. ಪ್ರಬೀರ್ ದಾಸ್ ಅವರನ್ನು ಮುಂಗೈಯಿಂದ ತಿವಿದ ಮಾರಿಯೋ ಆರ್ಕ್ವೇಸ್ ಯಲ್ಲೋ ಕಾರ್ಡ್ ಗೆ ಗುರಿಯಾದರು. 42ನೇ ನಿಮಿಷದಲ್ಲಿ ಅರ್ಮಾಂಡೂ ಸೊಸಾ ಪೆನಾ ಅವರಿಗೆ ಪೆನಾಲ್ಟಿ ಮೂಲಕ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಚೆಂಡು ಗೋಲ್ ಬಾಕ್ಸ್ ನಿಂದ ಹೊರ ಸಾಗಿತು.
ಸೇಡಿನ ಪಂದ್ಯ
ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವುದನ್ನು ಗಮನದಲ್ಲಿರಿಸಿಕೊಂಡು ಎಟಿಕೆ ತಂಡ ಕೇರಳ ಬ್ಲಾಸ್ಟರ್ಸ್ ಗೆ ಆತಿಥ್ಯ ನೀಡಿತು, ಋತುವಿನ ಮೊದಲ ಪಂದ್ಯದಲ್ಲೇ ಎಟಿಕೆ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೋಲನುಭವಿಸಿತ್ತು. ಈಗ ಮನೆಯಂಗಣದಲ್ಲಿ ಜಯ ಗಳಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಆ ನಂತರ ಎಟಿಕೆ ಪ್ರತಿಯೊಂದು ಪಂದ್ಯದಲ್ಲಿ ಯಶಸ್ಸಿನ ಹಾದಿ ತುಳಿಯುತ್ತಲೇ ಬಂತು.ಗೋವಾ ಹಾಗೂ ಬೆಂಗಳೂರು ಎಫ್ ಸಿ ವಿರುದ್ಧವೂ ಸಮಬಲ ಸಾಧಿಸಿ ಅಂಕ ಹಂಚಿಕೊಂಡಿತ್ತು. ಇದರಿಂದಾಗಿ ಎಟಿಕೆ ತಂಡ ಋತುವಿನಲ್ಲಿ ಇದುವರೆಗೂ ಬಲಿಷ್ಠ ತಂಡವಾಗಿ ಮೂಡಿ ಬಂದಿತ್ತು. ಆಕ್ರಮಣವೇ ಇರಲಿ ಅಥವಾ ರಕ್ಷಣಾತ್ಮಕ ಆಟವೇ ಇರಲಿ ಎಟಿಕೆ ಎಲ್ಲಿಯೂ ತಪ್ಪಿನ ಹೆಜ್ಜೆ ಇಟ್ಟಿಲ್ಲ.
ಉತ್ತಮ ಆಕ್ರಮಣಕಾರಿ ತಂಡ ಎನಿಸಿರುವ ಎಟಿಕೆ ಉತ್ತಮ ಡಿಫೆನ್ಸ್ ವಿಭಾಗವಾಗಿಯೂ ಮಿಂಚಿದೆ. ಇದಕ್ಕೆ ಆರು ಶೂಟೌಟ್ ಗಳೇ ಸಾಕ್ಷಿ. ಡೇವಿಡ್ ವಿಲಿಯಮ್ಸ್ ಹಾಗೂ ರಾಯ್ ಕೃಷ್ಣ ಒಂದಾಗಿ 13 ಗೋಲುಗಳನ್ನು ಗಳಿಸಿದ್ದು, 5 ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ. ಈ ಕಾರಣಕ್ಕೆಗಿಯೇ ರಾಯ್ ಕೃಷ್ಣ ಅವರಿಗೆ ಈ ಪಂದ್ಯದ ನಾಯಕನ ಜವಾಬ್ದಾರಿ ನೀಡಲಾಯಿತು. ಆಗಸ್ಟ್ ಇಗ್ನೇಸ್ ಅಮಾನತಿನಿಂದ ಮುಕ್ತಗೊಂಡ ಕಾರಣ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದ ಬ್ಯಾಕ್ ಲೈನ್ ವಿಭಾಗ ಬಲಿಷ್ಠಗೊಂಡಿದೆ.
ಮೊದಲ ಪಂದ್ಯದಲ್ಲಿ ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ನಿರಂತರ ವೈಫಲ್ಯ ಕಂಡಿತ್ತು. ಅದು ಎಟಿಕೆಯ ಸಾಧನೆಗೆ ವಿರುದ್ಧವಾಗಿತ್ತು. ಹೈದರಾಬಾದ್ ವಿರುದ್ಧ 6-1 ಗೋಲುಗಳ ಅಂತರದಲ್ಲಿ ಜಯ ಗಳಿಸುವುದಕ್ಕೆ ಮುನ್ನ ಕೇರಳ ಬ್ಲಾಸ್ಟರ್ಸ್ ತಂಡ 9 ಪಂದ್ಯಗಳಲ್ಲಿ ಜಯ ಕಂಡಿರಲಿಲ್ಲ. ಒಗ್ಬಚೆ ಹಾಗೂ ಬೌಲಿ ತಂಡದ ಪರ ಮಿಂಚಬೇಕಾದ ಅನಿವಾರ್ಯತೆ ಇದೆ.