ಆಕ್ರಮಣಕಾರಿ ಆಟ
ಎಟಿಕೆಎಂಬಿ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. ಮಾರ್ಸೆಲೊ ಪೆರೆರಾ ಗಾಯಗೊಂಡರು. ಆದರೆ ಕೆಲ ಹುತ್ತಿನಲ್ಲೇ ಅಂಗಣ ಪ್ರವೇಶಿಸಿದರು. 24ನೇ ನಿಮಿಷದಲ್ಲಿ ರಾಯ್ ಕೃಷ್ಣ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಹೆಡರ್ ಮೂಲಕ ಚಿಮ್ಮಿದ ಚೆಂಡು ಗೋಲ್ ಬಾಕ್ಸ್ ನ ಮೇಲಿಂದ ಸಾಗಿತು. 35ನೇ ನಿಮಿಷದಲ್ಲಿ ಒಡಿಶಾಕ್ಕೆ ಸುಲಭವಾಗಿ ಗೋಲು ಗಳಿಸಬಹುದಾಗಿತ್ತು, ಆದರೆ ಜಾಕೋಬ್ ಅವರ ಹೆಡರ್ ಗುರಿ ತಲುಪಲಿಲ್ಲ. ಒಎಫ್ ಸಿ ಇದೇ ರೀತಿಯ ಆಟವನ್ನು ಪ್ರದರ್ಶಿಸಿದರೆ ಗೋಲು ದಾಖಲಾಗುವುದು ಖಚಿತ.
ಜಯದ ನಿರೀಕ್ಷೆ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸತತ ಎರಡು ಜಯ ಕಂಡಿರುವ ಎಟಿಕೆ ಮೋಹನ್ ಬಾಗನ್ ತಂಡ ಸಂಕಷ್ಟಟದಲ್ಲಿರುವ ಒಡಿಶಾ ಎಫ್ ಸಿ ವಿರುದ್ಧ ಮತ್ತೊಂದು ಜಯದ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಎರಡೂ ಜಯಗಳಲ್ಲಿ ಆಂಟೋನಿಯೋ ಹಬ್ಬಾಸ್ ಪಡೆ ಕ್ಲೀನ್ ಶೀಟ್ ಸಾಧನೆ ಮಾಡಿರುವುದು ವಿಶೇಷವಾಗಿದೆ. ತಿರಿ, ಪ್ರೀತಮ್ ಕೊತಾಲ್ ಮತ್ತು ಸಂದೇಶ್ ಜಿಂಗಾನ್ ಅವರನ್ನೊಳಗೊಂಡ ಡಿಫೆನ್ಸ್ ಘಟಕ ಎಟಿಕೆ ಮೋಹನ್ ಬಾಗನ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಬ್ಯಾಕ್ ಲೈನ್ ನಲ್ಲಿ ಅನುಭವಿ ಆಟಗಾರರು ಇರುವುದರಿಂದ ಚೆಂಡಿನ ನಿಯಂತ್ರಣದಲ್ಲೂ ಎಟಿಕೆ ಮೋಹನ್ ಬಾಗನ್ ಮೇಲುಗೈ ಸಾಧಿಸಿದೆ. ರಾಯ್ ಕೃಷ್ಣ ತಂಡದ ಜಯದಲ್ಲಿ ಇದುವರೆಗೂ ಪ್ರಮುಖ ಪಾತ್ರವಹಿಸಿದ್ದಾರೆ.
ಗೋಲಾಗಿಸುವಲ್ಲಿ ಎಟಿಕೆ ಮೇಲು
ಮೂರು ಪಂದ್ಯಗಳಲ್ಲಿ ಮೂರು ಗೋಲು ಗಳಿಸಿ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಟಿಕೆ ಮೋಹನ್ ಬಾಗನ್ ಉತ್ತಮ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಡಿಫೆನ್ಸ್ ವಿಭಾಗದಲ್ಲಿ ದುರ್ಬಲವಾಗಿರುವ ಒಡಿಶಾ ವಿರುದ್ಧ ಕೋಲ್ಕೊತಾದ ತಂಡ ಮತ್ತಷ್ಟು ಗೋಲಿನ ಯಶಸ್ಸು ಕಾಣುವ ಸಾಧ್ಯತೆ ಇದೆ. ಆಡಿರುವ ಎರಡು ಪಂದ್ಯಗಳಲ್ಲಿ ಒಡಿಶಾ ಈಗಾಗಲೇ ಮೂರು ಗೋಲುಗಳನ್ನು ನೀಡಿದೆ. ಹಿಂದಿನ ಪಂದ್ಯದಲ್ಲಿ ಡಿಗೋ ಮೌರಿಸಿಯೊ ಗಳಿಸಿದ ಗೋಲು ತಂಡವನ್ನು ಸೋಲಿನಿಂದ ಪಾರು ಮಾಡಿತ್ತು. ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಬಲಿಷ್ಠ ಎಟಿಕೆ ಮೋಹನ್ ಬಾಗನ್ ವಿರುದ್ಧ ತಮ್ಮ ತಂಡ ಯಶಸ್ಸು ಕಾಣಲಿದೆ ಎಂಬ ನಂಬಿಕೆಯಲ್ಲಿ ಸಜ್ಜುಗೊಳಿಸಿದ್ದಾರೆ.