ಬೆಂಗಳೂರು, ಜನವರಿ 9: ಗುರುವಾರ (ಜನವರಿ 9) ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್ಸಿ, ಆಟದ ಲಯ ಕಳೆದುಕೊಂಡಿರುವ ಜೇಮ್ಷೆಡ್ಪುರ ಎಫ್ಸಿ ವಿರುದ್ಧ ಗೆಲ್ಲುವ ಫೇವರಿಟ್ ಎನಿಸಿದೆ.
ಗೋವಾ ವಿರುದ್ಧ 2-1 ಗೋಲಿನಿಂದ ಗೆದ್ದ ಆತ್ಮ ವಿಶ್ವಾಸದೊಂದಿಗೆ ನಾಳೆಯ ಪಂದ್ಯಕ್ಕೆ ಸಜ್ಜಾಗಿರುವ ಬೆಂಗಳೂರು ಕಳೆದ ಐದು ಪಂದ್ಯಗಳಲ್ಲಿ ಜಯವನ್ನೇ ಕಂಡಿರದ ಜೆಮ್ಷೆಡ್ಪುರ ವಿರುದ್ಧ ಗೆದ್ದು ಎರಡನೇ ಸ್ಥಾನ ತಲಪುವ ಗುರಿಯಲ್ಲಿದೆ. 11 ಪಂದ್ಯಗಳನ್ನಾಡಿರುವ ಕಾರ್ಲಸ್ ಕ್ಬಾಡ್ರಾಟ್ ಪಡೆ 19 ಅಂಕಗಳೊಂದಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಗುರುವಾರ ಜಯ ಗಳಿಸಿದರೆ ಪ್ಲೇ ಆಫ್ ತಲಪುವ ತನ್ನ ಗುರಿಯನ್ನು ಮತ್ತಷ್ಟು ಭದ್ರಪಡಿಸಲಿದೆ. ಜೆಮ್ಷೆಡ್ಪುರ ಕೂಡ ಜಯದ ಗುರಿಯೊಂದಿಗೆ ಬೆಂಗಳೂರಿಗೆ ಆಗಮಿಸಿದೆ. 10 ಪಂದ್ಯಗಳನ್ನಾಡಿರುವ ಟಾಟಾ ಪಡೆ 13 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಇಲ್ಲಿ ಜೆಮ್ಷೆಡ್ಪುರ ಸೋತರೆ ನಾಲ್ಕರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಮತ್ತೆ ಹಿಂದೇಟು ಹಾಕಿದಂತಾಗುತ್ತದೆ.
ಗೋವಾ ವಿರುದ್ಧ ಎರಡು ಗೋಲುಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ಸುನಿಲ್ ಛೆಟ್ರಿ, ಮತ್ತೊಮ್ಮೆ ಬೆಂಗಳೂರು ತಂಡದ ಆಧಾರ ಎನಿಸಿದ್ದಾರೆ. ಈ ಋತುವಿನಲ್ಲಿ ಈಗಾಗಲೇ ಏಳು ಗೋಲುಗಳನ್ನು ಗಳಿಸಿರುವ ಭಾರತದ ಅಂತಾರಾಷ್ಟ್ರೀಯ ಆಟಗಾರ ಛೆಟ್ರಿ, ತಂಡ ಗಳಿಸಿರುವ 13 ಗೋಲುಗಳಲ್ಲಿ ತನ್ನ ಪ್ರಭುತ್ವ ಸಾಧಸಿದ್ದಾರೆ. ವಿಂಗರ್ ಉದಾಂತ್ ಸಿಂಗ್ ಹಾಗೂ ಆಶಿಕ್ ಕರುನಿಯಾನ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವುದು ಕೋಚ್ ಕ್ವಾಡ್ರಾಟ್ ಅವರಿಗೆ ಚಿಂತೆಯ ವಿಷಯವಾಗಿದೆ. ಹೊಸ ಪ್ರತಿಭೆ ದೆಶೊರ್ನ್ ಬ್ರೌನ್ ತಂಡದ ಮೇಲೆ ಪರಿಣಾಮ ಬೀರಬಹುದು.
''ಸುನಿಲ್ ಛೆಟ್ರಿ ನಮ್ಮ ತಂಡದಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಆಟಗಾರ ಆದರೆ ನಾವು ಅವಕಾಶಗಳನ್ನು ನಿರ್ಮಿಸಿರುತ್ತೇವೆ. ಇತರ ಆಟಗಾರರೂ ಗೋಲು ಗಳಿಸಬೇಕು. ಅಟ್ಯಾಕ್ ಮಾಡುವ ಆಟಗಾರರೆಲ್ಲರೂ ಗೋಲು ಗಳಿಸಲು ಕಠಿಣ ಶ್ರಮ ಪಡುತ್ತಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಜಯಕ್ಕಾಗಿ ನೆರವು ನೀಡಲಿದ್ದಾರೆ ಎಂಬ ನಂಬಿಕೆ ನನಗಿದೆ. ನಾವು ಉತ್ತಮ ರೀತಿಯಲ್ಲಿ ಆಡುತ್ತಿದ್ದೇವೆ, ಅದೇ ರೀತಿ ಉತ್ತಮ ಅವಕಾಶಗಳನ್ನು ನಿರ್ಮಿಸುತ್ತಿದ್ದೇವೆ,'' ಎಂದು ಬೆಂಗಳೂರು ತಂಡದ ಗೋಲ್ ಕೀಪಿಂಗ್ ಕೋಚ್ ಜೆವಿಯರ್ ಪಿನಿಲ್ಲೋಸ್ ಹೇಳಿದ್ದಾರೆ.
ಬೆಂಗಳೂರು ತಂಡದ ಇನ್ನೊಂದು ಶಕ್ತಿ, ಅದರ ಡಿಫೆನ್ಸ್. ಋತುವಿನಲ್ಲಿ ತಂಡ ಇದುವರೆಗೂ ಕೇವಲ ಏಳು ಗೋಲುಗಳನ್ನು ಮಾತ್ರ ನೀಡಿದೆ. ಇದು ಜೆಮ್ಷೆಡ್ಪುರ ತಂಡಕ್ಕೆ ಕಠಿಣ ಸವಾಲಾಗಲಿದೆ. ಬ್ಲೂ ಪಡೆಯ ಬ್ಯಾಕ್ ಲೇನ್ ಮುರಿಯಲು ಸರ್ಗಿಯೋ ಕ್ಯಾಸ್ಟಲ್ ಇಲ್ಲದಿರುವುದು ಮತ್ತೊಂದು ಚಿಂತೆಯಾಗಿದೆ.
''ಉತ್ತಮ ಫುಟ್ಬಾಲ್ ಆಡಬಲ್ಲೆವು ಎಂಬುದನ್ನು ಜೆಮ್ಷೆಡ್ಪುರ ತಂಡ ಈ ಋತುವಿನಲ್ಲಿ ತೋರಿಸಿದೆ. ಉತ್ತಮ ಫುಟ್ಬಾಲ್ ಆಡಿರುವ ಜೆಮ್ಷೆಡ್ಪುರ ಉತ್ತಮ ತಂಡವಾಗಿ ಮೂಡಿಬಂದಿದೆ, ಅವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಉತ್ತಮ ರೀತಿಯಲ್ಲಿ ಸಜ್ಜಾಗಬೇಕು. ನಾವು ಅತಿಯಾದ ಆತ್ಮವಿಶ್ವಾಸ ತೋರಿಸಬಾರದು,'' ಎಂದು ಪಿನಿಲ್ಲೋಸ್ ಹೇಳಿದ್ದಾರೆ.
ಜೆಮ್ಷೆಡ್ಪುರ ತಂಡಕ್ಕೆ ಇಲ್ಲಿ ಜಯದ ಅಗತ್ಯ ಇದೆ. ಪಿಟಿ ಹಾಗೂ ಕ್ಯಾಸ್ಟಲ್ ಇಲ್ಲದೆ ಆಂಟೋನಿಯೋ ಇರಿಯಾಂಡೋ ಪಡೆ ಯಶಸ್ಸಿನ ಹಾದಿ ತುಳಿಯಬೇಕಾಗಿದೆ .ಅವರಿಬ್ಬರಿಲ್ಲದೆ ತಂಡ ವಿಭಿನ್ನವಾಗಿ ಕಾಣುವುದು ಸಹಜ. ಫಾರೂಕ್ ಚೌಧರಿ ಹಾಗೂ ಅನಿಕೇತ್ ಜಾಧವ್ ತಮ್ಮ ನೈಜ ಸಾಮರ್ಥ್ಯ ತೋರಬೇಕಾಗಿದೆ. ಕಳೆದ ಐದು ಪಂದ್ಯಗಳಿಂದ ತಂಡ ಗಳಿಸಿರುವುದು ಕೇವಲ ಮೂರು ಅಂಕವಾದ ಕಾರಣ ಆಟಗಾರರು ತಮ್ಮ ಜವಾಬ್ದಾರಿಯನ್ನು ಮರೆಯುವಂತಿಲ್ಲ.
''ಪ್ರತಿಯೊಂದು ಪಂದ್ಯವೂ ಭಿನ್ನವಾಗಿರುತ್ತದೆ. ನೀವು ಅವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಸಿಕ್ಕ ಅವಕಾಶದಿಂದ ಗೋಲುಗಳನ್ನು ಗಳಿಸಬೇಕು. ಕಳೆದ ಮೂರು ಪಂದ್ಯಗಳಲ್ಲಿ ಆರು ಗೋಲುಗಳನ್ನು ನೀಡಲಾಗಿದೆ, ಸರ್ಗಿಯೋ ಇಲ್ಲದೆಯೂ ನಾವು ಹಲವಾರು ಗೋಲುಗಳನ್ನು ಗಳಿಸುವ ಅವಕಾಶ ನಿರ್ಮಿಸಿದ್ದೆವು. ಆದರೆ ನಾವು ಅದನ್ನು ಗೋಲಾಗಿ ಪರಿವರ್ತಿಸಿಲ್ಲ. ಅವರ ಅನುಪಸ್ಥಿತಿ ಕಾಡುವುದು ಸಹಜ, ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲ, ಆದರೆ ಮುಂದಿನ ಪಂದ್ಯದಲ್ಲಿ ಆಡಬಹುದೆಂಬ ನಿರೀಕ್ಷೆ ಇದೆ,'' ಇರಿಯಾಂಡೋ ಹೇಳೀದ್ದಾರೆ.