ಹೈದರಾಬಾದ್, ಜನವರಿ 11: ರಫಾಯಲ್ ಕ್ರಿವೆಲ್ಲರೋ (40ನೇ ನಿಮಿಷ) ಹಾಗೂ ನಿರಿಜುಸ್ ವಾಸ್ಕಿಸ್ (43 ಮತ್ತು 65ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ದುರ್ಬಲ ಹೈದರಾಬಾದ್ ಎಫ್ ಸಿ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಚೆನ್ನೈಯಿನ್ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ತಲುಪಿ ಪ್ಲೇ ಆಫ್ ತಲಪುವ ಆಸೆಯನ್ನು ಜೀವಂತವಾಗಿಸಿರಿಕೊಂಡಿತು. ಹೈದರಾಬಾದ್ ಎಫ್ ಸಿ ಪರ ಮಾರ್ಸೆಲಿನೋ ಪೆರೆರಾ (87ನೇ ನಿಮಿಷ) ಅವರು ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
ಚೆನ್ನೈಯಿನ್ ಮೇಲುಗೈ
ರಫಾಯಿಲ್ ಕ್ರಿವೆಲ್ಲರೋ (40ನೇ ನಿಮಿಷ) ಹಾಗೂ ನಿರಿಜುಸ್ ವಾಸ್ಕಿಸ್ (43ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಚೆನ್ನೈಯಿನ್ ಎಫ್ ಸಿ ತಂಡ ಹೈದರಾಬಾದ್ ವಿರುದ್ಧ ನಿರೀಕ್ಷೆಯಂತೆ ಪ್ರಥ ಮಾರ್ಧದಲ್ಲಿ 2-0 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು. ಚೆನ್ನೈಯಿನ್ ಎಫ್ ಸಿ ಗೋಲು ಗಳಿಸಿದೆ ಎನ್ನುವುದಕ್ಕಿಂಥ ಹೈದರಾಆಬಾದ್ ದುರ್ಬಲವಾಗಿ ಆಡಿತು ಎಂದರೆ ತಪ್ಪಾಗಲಾರದು. ಆಶೀಶ್ ರಾಯ್ ಚೆಂಡನ್ನು ಗೋಲ್ ಕೀಪರ್ ಗೆ ಹಿಂದಿರುಗಿಸಲು ಯತ್ನಿಸಿದರು. ಆದರೆ ವಾಸ್ಕಿಸ್ ಅದನ್ನು ತಡೆದು ಗೋಲು ಗಳಿಸುವ ಅವಕಾಶವಿದ್ದರೂ ಅತ್ಯಂತ ಎಚ್ಚರಿಕೆಯಿಂದ ಚೆಂಡನ್ನು ರಫಾಯಲ್ ಕ್ರಿವೆಲ್ಲರೋ ಅವರಿಗೆ ನೀಡಿದರು. ಚೆಂಡಿನ ನಿರೀಕ್ಷೆಯಲ್ಲಿರದ ರಫಾಯಲ್ ಒಮ್ಮೆ ನಿಯಂತ್ರಣ ಕಳೆದುಕೊಂಡರು. ಆದರೆ ಕೂಡಲೇ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಗೋಲ್ ಬಾಕ್ಸ್ ಗೆ ಗುರಿಯಿಟ್ಟರು. ಕಮಲ್ಜಿತ್ ಸಿಂಗ್ ಚೆಂಡನ್ನು ತಡೆಯಲು ಯತ್ನಿಸಿದರೂ ಆಗಲೇ ಚೆಂಡು ನೆಟ್ ಗೆ ಮುತ್ತಿಟ್ಟಿತ್ತು. ಮೂರು ನಿಮಿಷ ಕಳೆಯುತ್ತಿದ್ದಂತೆ ನಿರಿಜುಸ್ ವಾಸ್ಕಿಸ್ 43ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲು ಗಳಿಸಿ 2-0 ಮುನ್ನಡೆ ಕಲ್ಪಿಸಿದರು.
ಮೇಲಕ್ಕೇರಲು ತಳಮಟ್ಟದಲ್ಲಿ ಫೈಟ್
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ ನ 56ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಹೈದರಾಬಾದ್ ನ ಮನೆಯಂಗಣವಾಗಿರುವ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ಸ್ ಅಂಗಣ ಕುತೂಹಲದ ಪಂದ್ಯಕ್ಕೆ ಸಾಕ್ಷಿಯಾಯಿತು. ಹೈದರಾಬಾದ್ ಗೆ ಅಗ್ರ ನಾಲ್ಕರಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಅವಕಾಶ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಇಲ್ಲಿ ಜಯ ಅನಿವಾರ್ಯವಗಿದೆ. 11 ಪಂದ್ಯಗಳನ್ನಾಡಿ ಹೈದರಾಬಾದ್ ಗಳಿಸಿರುವುದು ಕೇವಲ 5 ಅಂಕಗಳು. ಕೇರಳ ವಿರುದ್ಧದ ಹಿಂದಿನ ಪಂದ್ಯದಲ್ಲಿ 1-5 ಗೋಲುಗಳ ಅಂತರದಲ್ಲಿ ಅನುಭವಿಸಿದ ಸೋಲು ಹೈದರಾಬಾದ್ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಿದೆ.
ತಂಡ ಇದುವರೆಗೂ 26 ಗೋಲುಗಳನ್ನು ಎದುರಾಳಿ ತಂಡಗಳಿಗೆ ಬಿಟ್ಟುಕೊಟ್ಟಿರುವುದು ತಂಡದ ಡಿಫೆನ್ಸ್ ವಿಭಾಗ ಎಷ್ಟು ದುರ್ಬಲವಾಗಿದೆ ಎಂಬುದನ್ನು ಸಾರುತ್ತಿದೆ. ಮ್ಯಾಥ್ಯೂ ಕಿಗ್ಲಾನ್, ಸಾಹಿಲ್ ಪನ್ವಾರ್ ಹಾಗೂ ಆದಿಲ್ ಖಾನ್ ತಮ್ಮ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲರಾಗಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಆದರೆ ಹಿಂದಿನ ವೈಫಲ್ಯಗಳನ್ನು ಮರೆತು ಹೊಸ ಹುಮ್ಮಸ್ಸಿನೊಂದಿಗೆ ಮನೆಯಂಗಣದಲ್ಲಿ ಮಿಂಚಬೇಕೆಂಬ ಹಂಬಲದೊಂದಿಗೆ ಹೈದರಾಬಾದ್ ಅಂಗಣಕ್ಕಿಳಿಯಿತು.
ಚೆನ್ನೈಯಿನ್ ತಂಡಕ್ಕೆ ಅಂತಿಮ ನಾಲ್ಕರ ಹಂತಕ್ಕೆ ತಲುಪಲು ಅವಕಾಶ ಇನ್ನೂ ಜೀವಂತವಾಗಿದೆ. ಮುಂದಿನ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದರೆ ಲೆಕ್ಕಾಚಾರದ ಆಧಾರದ ಮೇಲೆ ಚೆನ್ನೈಯಿನ್ ತಂಡ ತನ್ನ ಆಮೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ. ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಚೆನ್ನೈಯಿನ್ ದುರ್ಬಲವಾಗಿ ಕಾಣುತ್ತಿರುವ ಹೈದರಾಬಾದ್ ವಿರುದ್ಧ ಜಯ ಗಳಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.