ಚೆನ್ನೈ, ಡಿಸೆಂಬರ್ 26: ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಚೇತರಿಕೆಯ ಲಕ್ಷಣ ತೋರಿದ್ದ ಚೆನ್ನೈಯಿನ್ ಎಫ್ ಸಿ ತಂಡಕ್ಕೆ ಗೋವಾ ವಿರುದ್ಧ ಕಠಿಣ ಸವಾಲನ್ನು ಎದುರಿಸಬೇಕಾಗಿದೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡರಿಯದ ಚೆನ್ನೈ ತಂಡ ಚೇತರಿಸಿಕೊಂಡಿದೆ. ಎರಡು ಡ್ರಾ ಹಾಗೂ ಎರಡು ಜಯ ಕಾಣುವ ಮೂಲಕ ತಂಡ ತನ್ನ ನೈಜ ಸಾಮರ್ಥ್ಯ ಆರಂಭಿಸಿದೆ. ತಂಡ ಈ ರೀತಿಯಲ್ಲಿ ಉತ್ತಮ ಪ್ರದರ್ಶನ ತೋರಲು ಆರಂಭಿಸಲು ಮುಖ್ಯ ಕಾರಣ ನೂತನ ಕೋಚ್ ಓವೆನ್ ಕೊಯ್ಲ್ ಅವರ ನೂತನ ರಣತಂತ್ರ. ಚೆನ್ನೈ ಸೋಲಿನ ಹಾದಿಯಲ್ಲೇ ಸಾಗಿತ್ತು, ಆದರೆ ನೂತನ ಕೋಚ್ ಅಗಮನವಾದಾಗಿನಿಂದ ಯಶಸ್ಸಿನ ಹೆಜ್ಜೆ ಇಡಲಾರಂಭಿಸಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ತಂಡ ಗಳಿಸಿದ್ದು ಕೇವಲ ಒಂದು ಅಂಕ. ತಂಡ ಈಗ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದು, ಗೋವಾ ವಿರುದ್ಧ ಜಯ ಗಳಿಸಿದರೆ ಆರನೇ ಸ್ಥಾನ ತಲುಪಲಿದೆ. ಆದರೆ ಈ ಕೆಲಸ ಅಷ್ಟು ಸುಲಭವಾದುದಲ್ಲ.
''ನಾವು ಅದ್ಭುತ ತಂಡವೊಂದನ್ನು ಎದುರಿಸುತ್ತಿದ್ದೇವೆ. ಗೋವಾ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ನನ್ನ ಪ್ರಕಾರ ಗೋವಾ ಭಾರತದಲ್ಲೇ ಉತ್ತಮ ತಂಡ, ಅಂಕ ಪಟ್ಟಿ ಈ ಬಗ್ಗೆ ಸತ್ಯ ಹೇಳುತ್ತಿದೆ. ಎಲ್ಲಕ್ಕಿಂತ ಹೆಚ್ಚಿನ ಅಂಕ ಗಳಿಸಲು ಮುಖ್ಯ ಕಾರಣ ತಂಡದ ಗುಣಮಟ್ಟದ ಆಟ, ನಾವು ಅವರಿಗೆ ಗೌರವ ನೀಡುತ್ತೇವೆ, ಆದರೆ ಅವರಿಗೆ ಹೆದರುವುದಿಲ್ಲ,'' ಎಂದು ಕೊಯ್ಲ್ ಹೇಳಿದ್ದಾರೆ.
ಉತ್ತಮ ಪ್ರದರ್ಶನ ತೋರುತ್ತಿರುವ ಗೋವಾ ತಂಡ ೧೮ ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಕಳೆದ ಮೂರು ಪಂದ್ಯಗಳಲ್ಲಿ ತಂಡ ಸತತ ಜಯ ಗಳಿಸಿದೆ. ಒಡಿಶಾ ವಿರುದ್ಧ ನಡೆದ ಪಂದ್ಯದಲ್ಲಿ 2-0 ಅಂತರದಲ್ಲಿ ಗೆದ್ದು ಚೆನ್ನೈ ಗೆ ಆಗಮಿಸಿದೆ.ಕಾಡೆತ್ತು ಖ್ಯಾತಿಯ ಗೋವಾ ನಾಳೆಯ ಪಂದ್ಯದಲ್ಲೂ ಜಯ ಗಳಿಸಿ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ.
ಉತ್ತಮ ಪ್ರದರ್ಶನವನ್ನು ತೋರುತ್ತಿರುವ ನಿರಿಜುಸ್ ವಾಸ್ಕಿಸ್ ಅವರು ಈಗ ತಂಡದ ಬೆನ್ನೆಲುಬೇನಿಸಿದ್ದಾರೆ. ಕೊಯ್ಲ್ ಕೂಡಾ ಈ ಆಟಗಾರನ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಲಿಥುವೇನಿಯಾದ ಈ ಯುವ ಆಟಗಾರ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಗೋಲು ಗಳಿಸಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಚೆನ್ನೈಯಿನ್ ತಂಡದ ಒಟ್ಟು ಗೋಲು ಗಳಿಕೆಯ 62.5% ರಷ್ಟನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಲಿಯಂಜುವಾಲ ಚಾಂಗ್ತೆ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದ್ದು, ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವ್ಹಸಿದ್ದಾರೆ.
''ಕೇರಳ ಬ್ಲಾಸ್ಟರ್ಸ್ ವಿರುದ್ಧ ತೋರಿದ ಪ್ರದರ್ಶನವನ್ನೇ ಮುಂದುವರಿಸಿದರೆ ನಾವು ಯಶಸ್ಸು ಕಾಣಬಲ್ಲೆವು. ನಾಳೆ ಎರಡು ಆಕ್ರಮಣಕಾರಿ ತಂಡಗಳು ಜಯಕ್ಕಾಗಿ ಹೋರಾಟ ನಡೆಸಲಿವೆ. ಗೆಲ್ಲುತ್ತೇವೆಂಬ ಭರವಸೆ ನಮಗಿದೆ, ಆದ್ದರಿಂದ ಗೆಲ್ಲುತ್ತೇವೆ,'' ಎಂದು ಚೆನ್ನೈಯಿನ್ ತಂಡದ ಕೋಚ್ ಕೊಯ್ಲ್ ಹೇಳಿದ್ದಾರೆ.
ದಾಖಲೆಗಳನ್ನು ಗಮನಿಸಿದರೆ ಚೆನ್ನೈ ತಂಡ ಗೋಲನ್ನು ಗಳಿಸುವಲ್ಲಿ ಸಜ್ಜಾಗುವ ಪ್ರಮಾಣದಲ್ಲಿ ಉತ್ತಮ ರೀತಿಯಲ್ಲಿ ಸುಧಾರಣೆ ಕಂಡಿದೆ. ಋತುವಿನ ಆರಂಭದಿನಲೂ ತಂಡ ಚೆಂಡನ್ನು ನಿಯಂತ್ರಿಸಲು ಕಠಿಣ ಸಾಹಸ ಪಡುತ್ತಿತ್ತು. ಸೆಟ್ ಪೀಸಸ್ ಮೂಲಕ ತಂಡ ಗಳಿಸಿದ್ದು ಕೇವಲ ಒಂದು ಗೋಳು, ನೀಡಿದ್ದು ನಾಲ್ಕು ಗೋಳು. ಇದುವರೆಗೂ ತಂಡ 12 ಗೋಲುಗಳನ್ನು ನೀಡಿದೆ.
ಫರಾನ್ ಕೊರೊಮಿನಾಸ್, ಬ್ರೆನ್ದಾನ್ ಫೆರ್ನಾಂಡೀಸ್ ಮತ್ತು ಹ್ಯೂಗೋ ಬೌಮೌಸ್ ಗೋವಾದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೌರ್ತದಾ ಫಾಲ್ ಹಾಗೂ ಕೊರೊಮಿನಾಸ್ ಅವರನ್ನು ನಿಯಂತ್ರಿಸಿದರೆ ಮಾತ್ರ ಚೆನ್ನೈ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು.
''ಒಡಿಶಾ ವಿರುದ್ಧದ ಪಂದ್ಯದ ನಂತರ ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅಗತ್ಯ ಇದೆ ಎಂದು ತಂಡಕ್ಕೆ ಹೇಳಿದೆ. ಅದೇ ರೀತಿಯಲ್ಲಿ ನಾವು ಸುಧಾರಣೆ ಕಂಡಿದ್ದೇವೆ, ಹಾಗಿದ್ದಲ್ಲಿ ಮಾತ್ರ ಮುಂದಿನ ಪಂದ್ಯದಲ್ಲಿ 100% ಹೋರಾಟ ನೀಡಲು ಸಾಧ್ಯ ,'' ಎಂದು ಲೊಬೆರಾ ಹೇಳಿದ್ದಾರೆ. '' ಚೆನ್ನೈಯಿನ್ ತಂಡ ಹೊಸ ಕೋಚ್ ಆಗಮನದಿಂದ ಸಾಕಷ್ಟು ಬದಲಾವಣೆ ಕಂಡಿದೆ, ಉತ್ತಮ ರೀತಿಯಲ್ಲಿ ರಕ್ಷಣಾತ್ಮಕ ಆಟ ಆಡುವ ಮೂಲಕ ನಮ್ಮ ತಂಡಕ್ಕೆ ನಾಳೆಯ ಪಂದ್ಯ ಅಷ್ಟು ಸುಲಭವೆನಿಸಿಲ್ಲ,'' ಎಂದು ಹೇಳಿದರು.