ಉತ್ತಮ ಪೈಪೋಟಿಯ ಪ್ರಥಮಾರ್ಧ
ಮನೆಯಂಗಣದಲ್ಲಿ ಚೆನ್ನೈ ಗೆ ಜಯ ಗಳಿಸುವ ಛಲ, ಮುಂಬೈಗೆ ಮನೆಯಂಗಣದ ಹೊರಗಡೆ ಮೊದಲ ಯಶಸ್ಸು ಕಾಣುವ ಹಂಬಲ ಪರಿಣಾಮ ಇಂಡಿಯನ್ ನ ಎಂಟನೇ ಪಂದ್ಯದ ಪ್ರಥಮಾರ್ಧ ರೋಚಕತೆಯಿಂದ ಕೂಡಿದರೂ ಗೋಲು ಗಳಿಸುವಲ್ಲಿ ಇತ್ತಂಡಗಳು ವಿಫಲವಾದವು. ಹಲವು ಅವಕಾಶಗಳು ಸೃಷ್ಟಿಯಾದರೂ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. ಪಂದ್ಯ ಆರಂಭಗೊಂಡ ಮೊದಲ ನಿಮಿಷದಲ್ಲೇ ಚೆನ್ನೈ ಗೋಲು ಗಳಿಸಿಯೇ ಬಿಟ್ಟೀತೆಂಬ ಸಂಭ್ರಮ ಮನೆ ಮಾಡಿತ್ತು.
ಮುಂಬೈ ಗೋಲಿ ಅಮರಿಂದರ್ ಸಿಂಗ್ ಉತ್ತಮ ಆಟ
ಆದರೆ ಮುಂಬೈ ಗೋಲ್ ಕೀಪರ್ ಅಮರಿಂದರ್ ಸಿಂಗ್ ಅದಕ್ಕೆ ಅವಕಾಶ ಕೊಡಲಿಲ್ಲ. ಇದೇ ರೀತಿ ಎರಡು ಬಾರಿ ಚೆನ್ನೈಯಿನ್ ಗೋಲ್ ಬಾಕ್ಸ್ ಗೆ ಗುರಿ ಇಟ್ಟಿತ್ತು, ಆದರೆ ಅಮರಿಂದರ್ ಅವರ ಕೈಚಳಕ ಮುಂಬೈ ಸಿಟಿ ತಂಡವನ್ನು ಆಘಾತದಿಂದ ರಕ್ಷಿಸಿತ್ತು. ಮುಂಬೈ ಸಿಟಿ ಎಫ್ ಸಿ ತಂಡದ ಸೆರ್ಗೆ ಕೆವಿನ್ ಗೆ ನಿಜವಾಗಿಯೂ ಅದೃಷ್ಟ ಇರಲಿಲ್ಲ.
ಚೆನ್ನೈ ನ ಗೋಲ್ ಕೀಪರ್ ವಿಶಾಲ್ ಕೈಥ್ ಮನೆಯಂಗಣದಲ್ಲಿ ಪ್ರಥಮಾರ್ಧದ ಹೀರೋ ಎನಿಸಿದರು. ಏಕೆಂದರೆ ಕೆವಿನ್ ಅವರಿಗೆ ಗೋಲು ಗಳಿಸಲು ಕೈಥ್ ಅವರನ್ನು ಹೊರತು ಪಡಿಸಿದರೆ ಬೇರೆ ಯಾರೂ ಇರಲಿಲ್ಲ. ಕೆವಿನ್ ಗುರಿ ತಪ್ಪಿ ತಲೆಯ ಮೇಲೆ ಕೈ ಇಟ್ಟರು. ಇತ್ತಂಡಗಳು ಸಮಬಲದ ಹೋರಾಟ ನೀಡಿದ ಕಾರಣ ಅಲ್ಲಿ ಗೋಲ್ ಗೆ ಅವಕಾಶ ಇರಲಿಲ್ಲ. ಕುತೂಹಲ ದ್ವಿತೀಯಾರ್ಧಕ್ಕೆ ಲಗ್ಗೆ ಇಟ್ಟಿತು.
ಜಯದ ನಿರೀಕ್ಷೆಯಲ್ಲಿ ಚೆನ್ನೈ
ಚೆನ್ನೈಯಿನ್ ಎಫ್ ಸಿ ಮೊದಲ ಪಂದ್ಯದಲ್ಲಿ ಆಘಾತ ಅನುಭವಿಸಿದ ನಂತರ ಮನೆಯಂಗಣದಲ್ಲಿ ಗೆಲ್ಲುವ ಭರವಸೆಯೊಂದಿಗೆ ಮುಂಬೈ ಸಿಟಿ ಎಫ್ ಸಿ ವಿರುದ್ಧ ಹೋರಾಟಕ್ಕೆ ಸಜ್ಜಾಯಿತು. ಮನೆಯಂಗಣದಲ್ಲಿ ಪ್ರೇಕ್ಷಕರ ಬೆಂಬಲದ ಭರವಸೆ ಹಾಗೂ ಹಿಂದಿನ ತಪ್ಪುಗಳ ಸರಿಪಡಿಸಿಕೊಂಡು ಜಯದ ಖಾತೆ ತೆರೆಯುವ ಹಂಬಲ ಹೊರತಾಗಿ ತಂಡದ ಮುಂದೆ ಬೇರೆ ಯಾವುದೇ ಗುರಿ ಇರಲಿಲ್ಲ .
ಮುಂಬೈ ಸಿಟಿ ಎಫ್ ಸಿ ಜಯದ ಖಾತೆ ತೆರೆದು ಆತ್ಮವಿಶ್ವಾಸದೊಂದಿಗೆ ಅಂಗಣಕ್ಕೆ ಇಳಿಯಿತು. ಗೋವಾ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಎಲ್ಲ ವಿಭಾಗದಲ್ಲೂ ವೈಫಲ್ಯ ಕಂಡಿತ್ತು. ಚೆನ್ನೈ ವಿರುದ್ಧ ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಮುಂಬೈ ತಂಡಕ್ಕೆ ಇದೆ. ಮುಂಬೈ ತಂಡದಲ್ಲಿ ಏಳು ಮಂದಿ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಆತ್ಮವಿಶ್ವಾಸದಲ್ಲಿರುವ ಉಭಯ ತಂಡಗಳು
ಆದರೆ ಕೋಚ್ ಜಾರ್ಜ್ ಕೋಸ್ಟಾ ಉಳಿದ ಹನ್ನೊಂದು ಮಂದಿ ಆಟಗಾರರ ಬಗ್ಗೆ ಆತ್ಮ ವಿಶ್ವಾಸ ಹೊಂದಿದ್ದಾರೆ. ಇದು ಮುಂಬೈ ಪಾಲಿಗೆ ಮನೆಯಂಗಣದ ಹೊರಗೆ ನಡೆಯುತ್ತಿರುವ ಮೊದಲ ಪಂದ್ಯವಾಗಿದೆ. ಹಾಗಾಗಿ ಆಟಗಾರರು ಹೊಸ ಜವಾಬ್ದಾರಿಯೊಂದಿಗೆ ಅಂಗಣಕ್ಕಿಳಿದರು. ಮನೆಯಂಗಣದಲ್ಲಿ ಋತುವಿನ ಮೊದಲ ಪಂದ್ಯ ಆಡುತ್ತಿರುವುದರಿಂದ ಹೆಚ್ಚು ಜವಾಬ್ದಾರಿಯಿಂದ ಆಟ ಪ್ರದರ್ಶಿಸಿ ಎಂದು ಚೆನ್ನೈ ಕೋಚ್ ಜಾನ್ ಗ್ರೆಗೋರಿ ತಮ್ಮ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ. ಆದರೆ ಅಂಗಣದಲ್ಲಿ ಏನು ನಡೆಯುತ್ತದೋ ಅದೇ ಸತ್ಯ.