ಬೆಂಗಳೂರು, ಜನವರಿ 22: ದೆಶಾರ್ನ್ ಬ್ರೌನ್ (23ನೇ ನಿಮಿಷ), ರಾಹುಲ್ ಬಿಕೇ (25ನೇ ನಿಮಿಷ) ಹಾಗೂ ಸುನಿಲ್ ಛೆಟ್ರಿ (61ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಒಡಿಶಾ ತಂಡವನ್ನು 3-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನ ತಲುಪಿತು.
ಪ್ರಥಮಾರ್ಧದಲ್ಲಿ ಎರಡು ಗೋಲುಗಳಿಂದ ಮುನ್ನಡೆ ಕಂಡಿದ್ದ ಬೆಂಗಳೂರು ತಂಡದ ಪರ ನಾಯಕ ಸುನಿಲ್ ಛೆಟ್ರಿ ದ್ವಿತಿಯಾರ್ಧದಲ್ಲಿ ಪೆನಾಲ್ಟಿ ಮೂಲಕ ಗಳಿಸಿದ ಗೋಲು ತಂಡಕ್ಕೆ ಅಮೂಲ್ಯ ಜಯ ತಂದುಕೊಟ್ಟಿತು. ನಾಯಕ ಸುನಿಲ್ ಛೆಟ್ರಿ 9ನೇ ಗೋಲು ಗಳಿಸಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನ ಹಂಚಿಕೊಂಡರು.
ಬೆಂಗಳೂರು ಮೇಲುಗೈ
ಪ್ರಥಮಾರ್ಧದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡಕ್ಕೆ 2-0 ಗೋಲಿನಿಂದ ಮುನ್ನಡೆ ಸಿಕ್ಕಿದೆ. ಇತ್ತೀಚಿಗಷ್ಟೇ ತಂಡಕ್ಕೆ ಸೇರ್ಪಡೆಯಾಗಿದ್ದ ದೆಶಾರ್ನ್ ಬ್ರೌನ್ 23ನೇ ನಿಮಿಷದಲ್ಲಿ ಗಳಿಸಿದ ಗೋಲು ಬೆಂಗಳೂರು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಮತ್ತೆ ಮೂರು ನಿಮಿಷಗಳಲ್ಲೇ ಅಂದರೆ 25ನೇ ನಿಮಿಷದಲ್ಲಿ ರಾಹುಲ್ ಬಿಕೆ ತಂಡದ ಪರ ಎರಡನೇ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.
ಜಯವೊಂದೇ ಮಂತ್ರ
ಅಲ್ಪ ವಿರಾಮದ ನಂತರ ಇಂಡಿಯನ್ ಸೂಪರ್ ಲೀಗ್ ಮತ್ತೆ ತನ್ನ ಸಂಭ್ರಮವನ್ನು ಮುಂದುವರಿಸಿದೆ. ಈ ಬಾರಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬಲಿಷ್ಠ ಬೆಂಗಳೂರು ಎಫ್ ಸಿ ಮತ್ತು ಸ್ಫೂರ್ತಿಯ ಸೆಲೆಯಂತಿರುವ ಒಡಿಶಾ ಎಫ್ ಸಿ ತಂಡಗಳು ಮುಖಾಮುಖಿಯಾದವು. ಹಾಲಿ ಚಾಂಪಿಯನ್ ಬೆಂಗಳೂರು ತಂಡ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಮಿಶ್ರ ಫಲ ಕಂಡಿತ್ತು. ಮುಂಬಯ ಸಿಟಿ ವಿರುದ್ಧದ ಹಿಂದಿನ ಪಂದ್ಯದಲ್ಲಿ ಬೆಂಗಳೂರು ತಂಡ ಜಯ ಗಳಿಸುವ ನಿರೀಕ್ಷೆ ಹೊಂದಿತ್ತು. ಆದರೆ ಮುಂಬೈ ತಂಡ ಬೆಂಗಳೂರಿಗೆ ಆಘಾತ ನೀಡಿತ್ತು.
ಇಂದಿನ ಪಂದ್ಯದಲ್ಲಿ ಬೆಂಗಳೂರು ಜಯ ಗಳಿಸಿದರೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಲಿದೆ. ದಿಫೆನ್ಸ್ ವಿಭಾಗದಲ್ಲಿ ಬೆಂಗಳೂರು ಬಲಿಷ್ಠವಾಗಿದೆ,. ಇದುವರೆಗೂ ತಂಡ ಕೇವಲ 9 ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶ ನೀಡಿರುವುದು ಗಮನಾರ್ಹ. ಅಟ್ಯಾಕ್ ವಿಭಾಗದಲ್ಲಿ ಸುನಿಲ್ ಛೆಟ್ರಿ ಇದುವರೆಗೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆಶಿಕ್ ಕುರುನಿಯನ್ ಮತ್ತು ಉದಾಂತ್ ಸಿಂಗ್ ಮನೆಯಂಗಣದಲ್ಲಿ ಉತ್ತಮ ರೀತಿಯಲ್ಲಿ ತಮ್ಮ ನಾಯಕನಿಗೆ ಬೆಂಬಲ ಸೂಚಿಸಿದರೆ ಬೆಂಗೂರಿನ ಜಯದ ಹಾದಿ ಸುಗಮವಾಗಲಿದೆ.
ಪ್ರವಾಸಿ ಒಡಿಶಾ ತಂಡವನ್ನು ಹಗುರವಾಗಿ ಕಾಣುವಂತಿಲ್ಲ. ಏಕೆಂದರೆ ಇದುವರೆಗು ಆಡಿರುವ ಪಂದ್ಯಗಳಲ್ಲಿ ಒಡಿಶಾ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿರುವ ಒಡಿಶಾ ತಂಡ ಈಗ ಐದರಲ್ಲಿ ಐದರ ಸಾಧನೆ ಮಾಡುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. 13 ಪಂದ್ಯಗಳಲ್ಲಿ 9 ಗೋಲು ಗಳಿಸಿರುವ ಅರಿದಾನೆ ಸ್ಯಾಂಟನಾ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಮಿಡ್ ಫೀಲ್ಡ್ ನಲ್ಲಿ ಕ್ಸಿಸ್ಕೋ ಹೆರ್ನಾಂಡೀಸ್ ಮತ್ತು ಮಾರ್ಕಸ್ ತೆಬರ್ ಒಡಿಶಾದ ಯಶಸ್ಸಿನ ಆಟಗಾಆರರೆನಿಸಿದ್ದಾರೆ.