ಭುವನೇಶ್ವರ : ಕೇರಳ ಬ್ಲಾಸ್ಟರ್ಸ್ ಮತ್ತು ಒಡಿಶಾ ಎಫ್ ಸಿ ತಂಡಗಳ ನಡುವಿನ ಕೊನೆಯ ಪಂದ್ಯ 4-4 ಗೋಲುಗಳಿಂದ ಡ್ರಾಗೊಂಡಿದ್ದು, ಇತ್ತಂಡಗಳು ಅಂಕ ಹಂಚಿಕೊಂಡು ಗೌರವ ಮತ್ತು ನೆಮ್ಮದಿಯೊಂದಿಗೆ ನಿರ್ಗಮಿಸಿದವು. ಆತಿಥೇಯ ಒಡಿಶಾ ಪರ ಮ್ಯಾನ್ವೆಲ್ ಒನೌ ಅವರ ಹ್ಯಾಟ್ರಿಕ್ (1, 36 ಮತ್ತು 51ನೇ ನಿಮಿಷ) ಮತ್ತು ಪೆರೆಜ್ ಗ್ಯುಡೆಸ್ (44ನೇ ನಿಮಿಷ) ಅವರ ಅದ್ಭುತ ಸಾಧನೆ ಮಾಡಿದರೆ ಪ್ರವಾಸಿ ಕೇರಳ ಬ್ಲಾಸ್ಟರ್ಸ್ ಪರ ನಾರಾಯಣ್ ದಾಸ್ ನೀಡಿದ ಉಡುಗೊರೆ ಗೋಲು (6ನೇ ನಿಮಿಷ), ಮೆಸ್ಸಿ ಬೌಲಿ (28ನೇ ನಿಮಿಷ), ಬಾರ್ಥಲೋಮ್ಯೊ ಒಗ್ಬಚೆ (82 ಮತ್ತು 90ನೇ ನಿಮಿಷ) ಗಳಿಸಿದ ಗೋಲಿನಿಂದ ಸಮಬಲ ಸಾಧಿಸುವಂತಾಯಿತು.
ಪ್ರಥಮಾರ್ಧದಲ್ಲಿ ಗೋಲಿನ ಮಳೆ:
ಗೆದ್ದು ಗೌರವದೊಂದಿಗೆ ನಿರ್ಗಮಿಸಬೇಕೆಂಬುದು ಇತ್ತಂಡಗಳ ಮುಖ್ಯ ಗುರಿಯಾಗಿತ್ತು. ಇದರ ಪರಿಣಾಮ ಗೋಲು ದಾಖಲಾಗಲೇ ಬೇಕು, ಮನೆಯಂಗಣದಲ್ಲಿ ಮಿಂಚಿದ ಒಡಿಶಾ ಪ್ರಥಮಾರ್ಧದಲ್ಲಿ 3-2 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿದೆ. ಅದರಲ್ಲಿ ಒಡಿಶಾ ಒಂದು ಗೋಲನ್ನು ಉಡುಗೊರೆಯಾಗಿದೆ. ಮ್ಯಾನ್ವೆಲ್ ಒನೌ ಪಂದ್ಯ ಆರಂಭಗೊಂಡ 1ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಆದರೆ ನಾರಾಯಣ ದಾಸ್ ಮಾಡಿದ ಪ್ರಮಾದದಿಂದಾಗಿ ಕೇರಳ ಬ್ಲಾಸ್ಟರ್ಸ್ ಸಮಬಲ ಸಾಧಿಸಿತು, ಅದು ನಾರಾಯಣ ದಾಸ್ ಅವರ ಉಡುಗೊರೆ ಗೋಲಾಗಿತ್ತು. 28ನೇ ನಿಮಿಷದಲ್ಲಿ ಮೆಸ್ಸಿ ಬೌಲಿ ಗಳಿಸಿದ ಗೋಲಿನಿಂದ ಕೇರಳ ಬ್ಲಾಸ್ಟರ್ಸ್ 2-1 ಅಂತರದಿಂದ ಮುನ್ನಡೆ ಕಂಡಿತು. ಆದರೆ ನಂತರ ಒಡಿಶಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 36ನೇ ನಿಮಿಷದಲ್ಲಿ ಮ್ಯಾನ್ವೆಲ್ ಒನೌ ವೈಯಕ್ತಿಕ ಎರಡನೇ ಗೋಲು ಗಳಿಸುವ ಮೂಲಕ ಪಂದ್ಯ 2-2ರಲ್ಲಿ ಸಮಬಲಗೊಂಡಿತು. 44ನೇ ನಿಮಿಷದಲ್ಲಿ ಪೆರೇಜ್ ಗ್ಯುಡೇಸ್ ಪೆನಾಲ್ಟಿ ಮೂಲಕ ಗಳಿಸಿದ ಗೋಲಿನಿಂದ ಒಡಿಶಾ 3-2 ಅಂತರದಲ್ಲಿ ಪ್ರಥಮಾರ್ಧವನ್ನು ತನ್ನದಾಗಿಸಿಕೊಂಡಿತು.
ಗೌರವ ಕಾಯ್ದುಕೊಳ್ಳುವ ಹಂಬಲ:
ಹೀರೋ ಇಂಡಿಯನ್ ಸೂಪರ್ ಲೀಗ್ ನ ತಮ್ಮ ಕೊನೆಯ ಪಂದ್ಯದಲ್ಲಿ ಗೆದ್ದು ಗೌರವದೊಂದಿಗೆ ನಿರ್ಗಮಿಸಬೇಕೆಂಬ ಹಂಬಲದೊಂದಿಗೆ ಕೇರಳ ಬ್ಲಾಸ್ಟರ್ಸ್ ಹಾಗೂ ಒಡಿಶಾ ಎಫ್ ಸಿ ತಂಡಗಳು ಅಂಗಣಕ್ಕಿಳಿದವು. ಚೆನ್ನೈಯಿನ್ ತಂಡ ಮುಂಬೈ ಸಿಟಿ ತಂಡವನ್ನು ಸೋಲಿಸುವ ಮೂಲಕ ಒಡಿಶಾದ ಸೆಮಿಫೈನಲ್ ಕನಸು ನುಚ್ಚು ನೂರಾಯಿತು. ಆದರೆ ಒಡಿಶಾ ತಂಡ ಈ ಬಾರಿಯ ಲೀಗ್ ನಲ್ಲಿ ಉತ್ತಮ ಪ್ರದರ್ಶನ ತೋರಿ ಆರನೇ ಸ್ಥಾನ ಗಳಿಸಿರುವುದು ಜೊಸೆಫ್ ಗೊಂಬಾವ್ ಅವರಿಗೆ ಕೋಚ್ ಆಗಿ ತೃಪ್ತಿಪಟ್ಟಿದೆ. ಬೆಂಗಳೂರು ತಂಡದಿಂದ ಸಾಲದ ರೂಪದಲ್ಲಿ ಒಡಿಶಾ ಸೇರಿಕೊಂಡ ಮ್ಯಾನ್ವೆಲ್ ಒನೌ ಮೂರು ಪಂದ್ಯಗಳನ್ನಾಡಿ ನಾಲ್ಕು ಗೋಲುಗಳನ್ನು ಗಳಿಸಿದ್ದಾರೆ. ಇದರಿಂದ ತಂಡದ ಇತರ ಆಟಗಾರರ ಮನೋಬಲ ಹೆಚ್ಚಿಸಿದೆ.
ಕೇರಳ ಬ್ಲಾಸ್ಟರ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಗಾಯದ ಸಮಸ್ಯೆ ತಂಡವನ್ನು ಕಾಡಿದ್ದ ಕಾರಣ ಅನೇಕ ವಿದೇಶಿ ಆಟಗಾರರು ಅಂಗಣದ ಸೈಡ್ ಲೈನ್ ನಲ್ಲೇ ಕಾನ ಕಳೆಯಬೇಕಾಯಿತು. ಸಂದೇಶ್ ಜಿಂಗಾನ್ ಅವರು ಋತುವಿನ ಆರಂಭದಲ್ಲೇ ಗಾಯಗೊಂಡಿದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.
ಕೋಚ್ ಎಲ್ಕೋ ಷೆಟ್ಟೋರಿ ಪ್ರತಿಯೊಂದು ಪಂದ್ಯಕ್ಕೂ ಆಡುವ ಹನ್ನೊಂದು ಮಂದಿಯಲ್ಲಿ ಬದಲಾವಣೆ ತರುತ್ತಿದ್ದುದು, ತಂಡದ ಹೊಂದಾಣಿಕೆಯಲ್ಲಿನ ಕೊರತೆಗೆ ಪ್ರಮುಖ ಕಾರಣವಾಗಿತ್ತು. ನಾಲ್ಕೂ ತಂಡಗಳು ಈಗಾಗಲೇ ಅಂತಿಮ ನಾಲ್ಕರ ಹಂತಳು ತಲುಪಿದ್ದರಿಂದ ಈಗ ಉಳಿದಿರುವ ಪಂದ್ಯಗಳು ಪ್ರಾಮುಖ್ಯತೆ ಹೊಂದಿರುವುದಿಲ್ಲ. ಇತ್ತಂಡಗಳಿಗೂ ಕೊನೆಯ ಪಂದ್ಯವಾಗಿರುವುದರಿಂದ ಇಲ್ಲಿ ಗೆಲ್ಲುವ ಹಂಬಲ ಇರುವುದು ಸ್ಪಷ್ಟ. ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಐವಿಸಿದ್ದರಿಂದ ಒಡಿಶಾ ಸೆಮಿಫೈನಲ್ ತಲಪುವ ಅವಕಾಶವನ್ನು ಕಳೆದುಕೊಂಡಿತು. ಕೇರಳ ಕೂಡ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಂಡು ಬೆಂಗಳೂರು ವಿರುದ್ಧ ಜಯ ಗಳಿಸಿ ಇಲ್ಲಿಗೆ ಆಗಮಿಸಿತು.