ನಾರ್ಥ್ ಈಸ್ಟ್ ಗೆ ಅಜೇಯದ ಗುರಿ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಜೇಯದ ನಡೆಯಲ್ಲಿ ಸಾಗುತ್ತಿರುವ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಮತ್ತೊಂದು ಜಯವನ್ನು ಗಮನದಲ್ಲಿರಿಸಿಕೊಂಡು ಜೆಮ್ಷೆಡ್ಪುರ ವಿರುದ್ಧ ಅಂಗಣಕ್ಕಿಳಿಯಿತು. ಮರುದಾಳಿಯನ್ನೇ ಅಸ್ತ್ರವಾಗಿರಿಸಿಕೊಂಡಿರುವ ಪರ್ವತತಪ್ಪಲಿನ ತಂಡ ಇದುವರೆಗೂ ಯಶಸ್ಸಿನ ಹಾದಿ ತುಳಿದಿದೆ. ಪ್ರತಿಯೊಂದು ಪಂದ್ಯದಲ್ಲೂ ಬ್ರೇಕ್ ನ ನಂತರ ನೈಜ ಆಟ ಪ್ರದರ್ಶಿಸುವ ಅದರಲ್ಲಿ ಯಶಸ್ಸು ಕಂಡಿದೆ. ಮಿಡ್ ಫೀಲ್ಡ್ ನಲ್ಲಿ ಖಾಸ್ಸಾ ಕಮರಾ ತಂಡದ ಪರ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದಾರೆ. ಎದುರಾಳಿ ತಂಡದ ದಾಳಿಗೆ ಪ್ರತಿದಾಳಿ ನೀಡುವುದರ ಜತೆಯಲ್ಲಿ ಕಮರಾ ಗೋಲು ಗಳಿಸುವ ಹಲವಾರು ಅವಕಾಶಗಳನ್ನು ಸೃಷ್ಟಿಸಿದ್ದಾರೆ.
ಸವಾಲೊಟ್ಟುವ ತಂಡ
ನಾರ್ಥ್ ಈಸ್ಟ್ ನ ಇಡ್ರಿಸಾ ಸಿಲ್ಲಾ, ನಿನ್ಥೋಯಿಂಗಂಬಾ ಮೀತೈ, ಕ್ವೆಸಿ ಅಪ್ಪಿಯ್ಯ ಮತ್ತು ಲೂಯಿಸ್ ಮಚಾಡೋ ಅವರಿಂದಾಗಿ ನಾರ್ಥ್ ಈಸ್ಟ್ ಈಗ ಎಲ್ಲ ತಂಡಗಳಿಗೂ ಸವಾಲೊಟ್ಟುವ ತಂಡವಾಗಿ ಬೆಳೆದು ನಿಂತಿದೆ. ಡಿಫೆನ್ಸ್ ವಿಭಾಗದಲ್ಲಿ ಶಿಸ್ತಿನ ಆಟ ಪ್ರದರ್ಶಿಸುತ್ತಿರುವುದೇ ನಾರ್ಥ್ ಈಸ್ಟ್ ನ ಯಶಸ್ಸಿಗೆ ಪ್ರಮುಖ ಕಾರಣ. ಇದರಿಂದಾಗಿ ಇದುವರೆಗೂ ಮೂರು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಕಳೆದ ಐದು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ. ಐಟರ್ ಮನ್ರೊಯ್ ಅವರ ಅನುಪಸ್ಥಿತಿಯಲ್ಲಿ ರೆಡ್ ಮೈನರ್ಸ್ ಖ್ಯಾತಿಯ ಜೆಮ್ಷೆಡ್ಪುರ ಎಫ್ ಸಿ ಅಂಗಣಕ್ಕಿಳಿಯಿತು. ಮನ್ರೊಯ್ ಹಿಂದಿನ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದು ಅಮಾನತುಗೊಂಡಿದ್ದರು. ಇದರಿಂದಾಗಿ ತಂಡ ಹೆಚ್ಚಾಗಿ ನೆರಿಜಸ್ ವಾಸ್ಕಿಸ್ ಅವರ ಮೇಲೆ ಅವಲಂಬಿತವಾಗಿದೆ.
ತಂಡಕ್ಕೆ ಉಕ್ಕಿನ ಭದ್ರತೆ
ಜೆಮ್ಷೆಡ್ಪುರ ಗಳಿಸಿರುವ 7 ಗೋಲುಗಳಲ್ಲಿ ಲಿಥುವೇನಿಯಾದ ಆಟಗಾರ 6ನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾರೆ. ಮುಂಬೈ ಸಿಟಿ ತಂಡದ ವಿರುದ್ಧ ತೋರಿದ ಪ್ರದರ್ಶನಕ್ಕೆ ಕೋಚ್ ಓವೆನ್ ಕೊಯ್ಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಹತ್ತು ಮಂದಿ ಆಟಗಾರರಿದ್ದರೂ ಗೋಲಿನ ಮಳೆಯನ್ನೇ ಕರೆಯಬಲ್ಲ ಮುಂಬೈಗೆ ಒಂದೇ ಒಂದು ಗೋಲು ಗಳಿಸಲು ಅವಕಾಶ ನೀಡದಿರುವುದು ವಿಶೇಷ. ಪೀಟರ್ ಹರ್ಟ್ಲೀ ಹಾಗೂ ಸ್ಟೀಫನ್ ಎಝಿ ತಂಡಕ್ಕೆ ಉಕ್ಕಿನ ಭದ್ರತೆ ನೀಡಿದ್ದಾರೆ. ಈ ಋತುವಿನಲ್ಲಿ ಇದುವರೆಗೂ 18 ಸಾಧ್ಯತೆಯ ಗೋಲುಗಳನ್ನು ತಡೆದಿರುವ ಟಿಪಿ ರೆಹನೇಶ್ ತಂಡಕ್ಕೆ ಆಧಾರ ಎನಿಸಿದ್ದಾರೆ.