ಜೇಮ್ಶೆಡ್ಪುರ, ಡಿಸೆಂಬರ್ 19: ಆಡಿರುವ ಆರು ಪಂದ್ಯಗಳಲ್ಲಿ ಕೇವಲ ಒಂದು ಜಯ ಗಳಿಸಿರುವ ಜೆಮ್ಶೆಡ್ಪುರ ಎಫ್ಸಿ ಗುರುವಾರ ಇಲ್ಲಿನ ಜೆಆರ್ ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿರುವ ಮುಂಬೈ ಸಿಟಿ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಮೂರು ಅಂಕಗಳನ್ನು ಗಳಿಸಿ ಅಗ್ರ ನಾಲ್ಕು ಸ್ಥಾನದಗಳಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ.
ಅಂಟೋನಿಯೋ ಇರಿಯನ್ದೋ ಪಡೆ ಈ ಋತುವಿನಲ್ಲಿ ಉತ್ತಮ ಆರಂಭ ಕಂಡಿತ್ತು. ಸತತ ಎರಡು ಜಯ ಗಳಿಸುವ ಮೂಲಕ ಉತ್ತಮ ಆತ್ಮವಿಶ್ವಾಸ ತೋರಿತ್ತು. ಸ್ಪೇನ್ ಮೂಲದ ಯುವ ಆಟಗಾರ ಸೆರ್ಗಿಯೋ ಕ್ಯಾಸ್ಟಲ್ ಹಾಗೂ ಫ್ರಾನ್ಸಿಸ್ಕೋ ಲೂನಾ (ಪಿಟಿ ) ತಂಡಕ್ಕೆ ಅಗತ್ಯ ಇರುವ ಗೋಲು ಗಳಿಸಿ ಉತ್ತಮ ಆರಂಭ ಕಲ್ಪಿಸಿದ್ದಾರೆ. ಭಾರತದ ಆಟಗಾರರಾದ ಫಾರುಖ್ ಚೌಧರಿ ಅನಿಕೇತ್ ಜಾಧವ್ ಮತ್ತು ಗೋಲ್ ಕೀಪರ್ ಸುಬ್ರತಾ ಪಾಲ್ ಉತ್ತಮ ರೀತಿಯಲ್ಲಿ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಇತ್ತೀಚಿನ ವಾರಗಳಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮೂರು ಪಂದ್ಯಗಳು ಡ್ರಾ ಗೊಂಡಿದ್ದು ಕೋಚ್ ಇರಿಯನ್ದೋ ಅವರನ್ನು ಚಿಂತೆಗೆ ಗುರಿಮಾಡಿದೆ.
''ಕಳೆದ ಪಂದ್ಯಗಳಲ್ಲಿ ನಾವು ನಮ್ಮ ತಂಡದಲ್ಲಿರುವ ಎಲ್ಲ ಸ್ಟ್ರೈಕರ್ ಗಳನ್ನೂ ಬಳಸಿ ನೋಡಿದ್ದೇವೆ. ಕೆಲವರು ಆಡುವ ಹನ್ನೊಂದರಲ್ಲೇ ಸ್ಥಾನ ಪಡೆದರು, ಇನ್ನು ಕೆಲವರು ಬೆಂಚ್ ನಲ್ಲಿದ್ದು ತಂಡವನ್ನು ಸೇರಿಕೊಂಡರು. ಆದರೆ ಎಲ್ಲರೂ ಪಂದ್ಯ ಆಡಿದ್ದಾರೆ. ತಂಡದಲ್ಲಿ ಸ್ಥಾನ ಪಡೆದ ನಂತರ ಗೋಲು ಗಳಿಸುವುದರ ಆಚೆಯೂ ಯೋಚಿಸಬೇಕು. ಕೇವಲ ತಂಡದ ಪ್ರಮಾದಗಳ ಬಗ್ಗೆ ಮಾತನಾಡುವುದಲ್ಲ, ಯಶಸ್ಸಿನ ಬಗ್ಗೆಯೂ ಮಾತನಾಡಬೇಕು.'' ಎಂದು ಇರಿಯನ್ದೋ ಹೇಳಿದ್ದಾರೆ.
ಕ್ಯಾಸ್ಟಲ್ ಹಾಗೂ ಪಿಟಿ ತಂಡದಿಂದ ಹೊರಗುಳಿದಾಗ ಟಾಟಾ ಪಡೆ ಬಹಳ ಸಮಸ್ಯೆಗಳನ್ನು ಎದುರಿಸಿತ್ತು. ಪಿಟಿ ತಂಡಕ್ಕೆ ಮರಳಿದ ನಂತರ ಕಳೆದ ವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು. ಆದರೆ ಕ್ಯಾಸ್ಟಲ್ ಅಂಗಣಕ್ಕಿಳಿಯಲಿಲ್ಲ. ಗಾಯದ ಕಾರಣ ಮಿಡ್ ಫೀಲ್ಡರ್ ನೋಯೆ ಅಕೋಸ್ಟ ಅವರು ಕೂಡ ಕೆಲವು ಪಂದ್ಯಗಳಿಂದ ವಂಚಿತರಾಗಿದ್ದಾರೆ.
ಕಳೆದ ಮೂರು ಪಂದ್ಯಗಳಲ್ಲೂ ಜೆಮ್ಶೆಡ್ಪುರ ಎಫ್ ಸಿ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡಿ ಜಯದಿಂದ ವಂಚಿತವಾಗಿತ್ತು. ಕೇರಳ ಬ್ಲಾಸ್ಟರ್ಸ್ ವಿರುದ್ಧ (2-2) ಮತ್ತು ನಾರ್ತ್ ಈಸ್ಟ್ ವಿರುದ್ಧ (1-1) ಡ್ರಾ ಕಂಡಿತ್ತು. ಮುಂಬೈ ಸಿಟಿ ಎಫ್ ಸಿ ಕಳೆದ ಹದಿನೈದು ನಿಮಿಷಗಳಲ್ಲಿ ಆರು ಗೋಲು ಗಳಿಸಿರುವುದು ಗಮನಾರ್ಹ. ಪಂದ್ಯದ ಕೊನೆಯ ಕ್ಷಣದಲ್ಲಿ ಎಡವುವ ಟಾಟಾ ಪಡೆಯ ದೌರ್ಬಲ್ಯವನ್ನು ಸದುಪಯೋಗಪಡಿಸಿಕೊಳ್ಳಲು ಸಜ್ಜಾಗಿದೆ.
''ಕೊನೆಯ ಕ್ಷಣದಲ್ಲಿ ಗೋಲು ನೀಡುವುದು ನನ್ನ ಪ್ರಕಾರ ಒತ್ತಡದಲ್ಲಿ. ಕೊನೆಯ ಕ್ಷಣದಲ್ಲಿ ಸ್ಕೋರ್ ಲೈನ್ ಕಾಯ್ದುಕೊಳ್ಳಲು ಯತ್ನಿಸಬೇಕು. ತಂಡ ಗೆಲ್ಲುವ ಸ್ಥಿತಿಯಲ್ಲಿದ್ದಾಗ ಇದು ಅನಿವಾರ್ಯ. ಕೆಲವು ಸಂದರ್ಭದಲ್ಲಿ ತಂಡ ಒತ್ತಡಕ್ಕೆ ಸಿಲುಕುವುದು ಸಹಜ. ಇದು ಸಹಜ, ಆ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ. ಇದು ನಮ್ಮ ತಂಡದಲ್ಲಿ ಮಾತ್ರವಲ್ಲ ಲೀಗ್ ನಲ್ಲಿ ಪ್ರತಿಯೊಂದು ತಂಡಕ್ಕೂ ಆಗುತ್ತದೆ. ನಾವು ಒತ್ತಡವನ್ನು ನಿಭಾಯಿಸಲು ಅರಿತಿದ್ದೇವೆ. ಇಂಥ ಪರಿಸ್ತಾತಿಯಲ್ಲಿ ಅನುಭವಿ ಆಟಗಾರರು ನೆರವಾಗುತ್ತಾರೆ,;; ಎಂದು ಇರಿಯನ್ದೋ ಹೇಳಿದ್ದಾರೆ.
ಭಾನುವಾರ ಬೆಂಗಳೂರು ಎಫ್ ಸಿ ವಿರುದ್ಧ ಜಯ ಗಳಿಸುವ ಮೂಲಕ ಮುಂಬೈ ಸಿಟಿ ಎಫ್ ಸಿ ಅತ್ಯಂತ ಆತ್ಮವಿಶ್ವಾಸದೊಂದಿಗೆ ಜೆಮ್ಶೆಡ್ಪುರ ಕ್ಕೆ ಆಗಮಿಸಿದೆ. ಕೊನೆಯ ಕ್ಷಣದ ವರೆಗೂ ಗೋಲು ಪೈಪೋಟಿ ನೀಡುವ ಮುಂಬೈ ತಂಡಕ್ಕೆ ರೌಲಿನ್ ಬೋರ್ಗೆಸ್ ಹಿಂದಿನ ಪಂದ್ಯದ ಜಯದ ರೂವಾರಿ ಎನಿಸಿದರು.
''ನಾವು ಅತ್ಯಂತ ಆತ್ಮವಿಶ್ವಾಸದ್ಲಲಿರುವುದು ನಿಜ. ಇದು ಬೆಂಗಳೂರು ತಂಡವನ್ನು ಸೋಲಿಸಿದ ಕಾರಣಕ್ಕೆ ಅಲ್ಲ, ಟಾಪ್ ನಾಲ್ಕರಲ್ಲಿ ಸ್ಥಾನ ಕಾಯ್ದುಕೊಳ್ಳಲು ನಮಗೆ ಆ ಮೂರು ಅಂಕ ಬೇಕಾಗಿತ್ತು. ನಮ್ಮ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿರುವುದು ಖುಷಿಯ ಸಂಗತಿ. ನಮಗೆ ಮೂರು ಅಂಕ ಗಳಿಸುವುದು ಮುಖ್ಯ. ನಾವು ಟಾಪ್ ನಾಲ್ಕಕ್ಕೆ ಹತ್ತಿರವಾಗಿದ್ದೇವೆ. ಹಿಂದಿನ ಪಂದ್ಯದಲ್ಲಿ ನಾವು ಆ ಸಾಧನೆ ಮಾಡಿದ್ದೇವೆ, ನಾಳೆಯ ಪಂದ್ಯದಲ್ಲೂ ಅದೇ ಪ್ರದರ್ಶನ ಮುಂದುವರಿಸಲಿದ್ದೇವೆ,'' ಎಂದು ಕೋಸ್ಟಾ ಹೇಳಿದರು.