ಕೋಲ್ಕತ್ತಾ, ಜನವರಿ 18: ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೋಲು ಅನುಭವಿಸಿದ ನಂತರ ಎಚ್ಚೆತ್ತುಕೊಂಡಿರುವ ಎಟಿಕೆ ಶನಿವಾರ ನಡೆಯಲಿರುವ ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.
ಹಿಂದಿನ ಪಂದ್ಯದಲ್ಲಿ ಆಂಟೋನಿಯೋ ಹಬ್ಬಾಸ್ ಪಡೆ, ಕೇರಳ ಬ್ಲಾಸ್ಟರ್ಸ್ ವಿರುದ್ಧ ಅಚ್ಚರಿಯ ಆಘಾತ ಅನುಭವಿಸಿತ್ತು. ಮನೆಯಂಗಣದಲ್ಲಿ ನಡೆದ ಪಂದ್ಯದ ಕೊನೆಯ ಕ್ಷಣದಲ್ಲಿ ಹಬ್ಬಾಸ್ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಕಾರಣ ಅವರನ್ನು ಅಂಗಣದಿಂದ ಹೊರಕ್ಕೆ ಕಳುಹಿಸಲಾಯಿತು. ಇದರಿಂದಾಗಿ ನಾಳೆಯ ಪಂದ್ಯದಲ್ಲಿ ಅವರು ಟಚ್ ಲೈನ್ ನಲ್ಲಿ ಕಾಣಿಸಿಕೊಳ್ಳುವಂತಿಲ್ಲ.
12 ಪಂದ್ಯಗಳನ್ನಾಡಿರುವ ಎಟಿಕೆ 21 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಗೋವಾಕ್ಕಿಂತ ಕೇವಲ ಮೂರು ಅಂಕ ಹಿಂದೆ ಬಿದ್ದಿದೆ. ಮತ್ತೆ ಅಗ್ರ ಸ್ಥಾನವನ್ನು ತಲುಪಬೇಕಾದರೆ ಹಬ್ಬಾಸ್ ಪಡೆಯ ಪ್ರಮುಖ ಆಟಗಾರ ರಾಯ್ ಕೃಷ್ಣ ತಮ್ಮ ನೈಜ ಆಟ ಪ್ರದರ್ಶಿಸಬೇಕಾಗಿದೆ. ಕಾಡಡೆತ್ತು ಎಂದೇ ಖ್ಯಾತಿ ಪಡೆದಿರುವ ಗೋವಾದ ಡಿಫೆನ್ಸ್ ವೀಭಾಗವನ್ನು ಮುರಿಯವಲ್ಲಿ ಎಟಿಕೆ ಯಶಸ್ವಿಯಾದರೆ ಮಾತ್ರ ಜಯದ ಹಾದಿ ಸುಗಮವಾಗುತ್ತದೆ.
''ನಾಳೆ (ಶನಿವಾರ) ನಾವು ಕೋಲ್ಕೊತಾದಲ್ಲಿ ಆಡಲಿದ್ದೇವೆ. ಇದು ವಿಶೇಷವಾದ ಸ್ಥಳ, ನಾವು ಬೆಂಗಳೂರನ್ನು ಸೋಲಿಸಿದ್ದೇವೆ. ಆದ್ದರಿಂದ ನಾವು ಗೋವಾ ತಂಡವನ್ನೂ ಸೋಲಿಸಬಹುದು. ಈ ಮೂಲಕ ನಾವು ಲೀಗ್ ನ ಆಗ್ರ ಸ್ಥಾನಕ್ಕೇರಲಿದ್ದೇವೆ,'' ಎಂದು ಎಟಿಕೆ ತಂಡದ ಸಹಾಯಕ ಕೋಚ್ ಮಾನ್ವೆಲ್ ಪೆರೆಜ್ ಕ್ಯಾಸ್ಕಲ್ಲಾನ ಹೇಳಿದ್ದಾರೆ.
ಅರದಾನ ಸ್ಯಾಂಟನಾ (9) ಹೊರತುಪಡಿಸಿದರೆ ಅತಿ ಹೆಚ್ಚು ಗೋಲು ಗಳಿಕೆಯಲ್ಲಿ ರಾಯ್ ಕೃಷ್ಣ ಇದ್ದಾರೆ. ತಂಡದ ಯಶಸ್ಸಿಗೆ ನೆರವಾದವರಲ್ಲಿ ಇನ್ನೋರ್ವ ಪ್ರಮುಖ ಆಟಗಾರ ಡೇವಿಡ್ ವಿಲಿಯಮ್ಸ್, ಇದುವರೆಗೂ ಐದು ಗೋಲುಗಳನ್ನು ಗಳಿಸಿ ಮೂರು ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ. ಆದರೆ ವಿಲಿಯಮ್ಸ್ ಗಾಯದ ಕಾರಣ ಸತತ ಎರಡನೇ ಪಂದ್ಯಕ್ಕೆ ಗೈರಾಗಲಿದ್ದಾರೆ, ಇದರಿಂದಾಗಿ ಎಡು ಗಾರ್ಸಿಯಾ ಆವರು ಅಂಗಣಕ್ಕಿಳಿಯಲಿದ್ದಾರೆ.
12 ಪಂದ್ಯಗಳನ್ನಾಡಿ 25 ಗೋಲುಗಳನ್ನು ಗಳಿಸಿರುವ ಗೋವಾ ತಂಡ ಈ ಬಾರಿ ಅದ್ಭುತ ಪ್ರದರ್ಶನ ನೀಡಿದೆ. ಫೆರಾನ್ ಕೊರೊಮಿನಾಸ್ ಕೆಲವು ಪಂದ್ಯಗಳಿಂದ ವಂಚಿತರಾಗಿದ್ದರೂ ಸ್ಥಿರ ಪ್ರದರ್ಶನ ತೋರಿ ಎಂಟು ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ಹ್ಯುಗೋ ಬೌಮಾಸ್ ನಾಲ್ಕು ಗೋಲುಗಳನ್ನು ಗಳಿಸಿರುವುದಲ್ಲದೆ, ಅಷ್ಟೇ ಗೋಲುಗಳನ್ನು ಗಳಿಸಲು ನೆರವಾಗಿದ್ದಾರೆ. ಟ್ಯಾಕಲ್, ಟಚ್ ಹಾಗೂ ಪಾಸ್ ಗಳ ವಿಷಯದಲ್ಲೂ ಗೋವಾ ಮಂಚೂಣಿಯಲ್ಲಿದೆ, ಪ್ರತಿಯೊಂದು ಪಂದ್ಯದಲ್ಲೂ ಚೆಂಡಿನ ನಿಯಂತ್ರಣದಲ್ಲಿ ಗೋವಾ ಅಗ್ರಸ್ಥಾನ ಕಾಯ್ದುಕೊಂಡಿದೆ. ಐದು ಗೋಲು ಗಳಿಸುವಲ್ಲಿ ನೆರವಾಗಿದ್ದ ಬ್ರೆಂಡಾನ್ ಫೆರ್ನಾಂಡೀಸ್ ನಾಲ್ಕನೇ ಯಲ್ಲೋ ಕಾರ್ಡ್ ಗೆ ಗುರಿಯಾದ ಕಾರಣ ನಾಳೆಯ ಪಂದ್ಯದಿಂದ ಹೊರಗುಳಿಯಲಿದ್ದಾರೆ.
''ಎಲ್ಲಾ ತಂಡಗಳಿಗೂ ಇದು ಪ್ರಮುಖವಾಗಿದೆ. ಇದು ಕೇವಲ ಮೊದಲ ನಾಲ್ಕು ಸ್ಥಾನಗಳ ಕುರಿತಾದುದಲ್ಲ. ನಾವು ಮೊದಲ ಸ್ಥಾನವನ್ನು ಏರು ಗುರಿ ಹೊಂದಿದ್ದೇವೆ. ನಾಳೆಯ ಪಂದ್ಯ ನಮ್ಮ ಪಾಲಿಗೆ ದೊಡ್ಡ ಸವಾಲು ಏಕೆಂದರೆ ಇದು ಉತ್ತಮ ಅವಕಾಶ. ನಾಳೆ ಪಂದ್ಯ ಗೆಲ್ಲುವುದೇ ನಮ್ಮ ಗುರಿ, ಏಕೆಂದರೆ ನಾಳೆ ಅಗ್ರಸ್ಥಾನದಲ್ಲಿರುವ ತಂಡ ಯಾವುದೆಂಬುದು ತೀರ್ಮಾನವಾಗುತ್ತದೆ,'' ಎಂದು ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಹೇಳಿದ್ದಾರೆ.