ಮುಂಬೈ, ಜನವರಿ 31: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಟಾಪ್ ನಾಲ್ಕರಲ್ಲಿ ತನ್ನ ಸ್ಥಾನ ಕಾಯ್ದುಕೊಳ್ಳಬೇಕಾದರೆ ಮನೆಯಂಗಣದಲ್ಲಿ ಶುಕ್ರವಾರ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸುವ ಅನಿವಾರ್ಯತೆಯಲ್ಲಿದೆ.
ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಮುಂಬೈ ಸಿಟಿ ತಂಡ ನಾಳೆಯ ಪಂದ್ಯದಲ್ಲಿ ಜಯ ಗಳಿಸಿದರೆ ಒಡಿಶಾ ತಂಡವನ್ನು ಹಿಂದಿಕ್ಕುವುದಲ್ಲದೆ, ಎರಡು ಅಂಕ ಮೇಲುಗೈ ಸಾಧಿಸಿ ಟಾಪ್ ನಾಲ್ಕರಲ್ಲಿ ತನ್ನ ಸ್ಥಾನವನ್ನು ಸದ್ಯಕ್ಕೆ ಭದ್ರಪಡಿಸಿಕೊಳ್ಳಲಿದೆ. ಈ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿ ನಿರಾಸೆಗೊಂಡಿರುವ ಜಾರ್ಜ್ ಕೋಸ್ಟಾ ಪಡೆಗೆ ಇಲ್ಲಿ ಗೆಲ್ಲಬೇಕಾದ ಒತ್ತಡವಿದೆ.
ಮೊಡೌ ಸೌಗೌ ಗಾಯದಿಂದ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದು, ಹಾಗೆ ಆದರೆ ಮುಂಬೈ ತಂಡದ ಅಟ್ಯಾಕ್ ವಿಭಾಗದ ಆತ್ಮವಿಶ್ವಾಸ ಹೆಚ್ಚಲಿದೆ. ನಾಲ್ಕು ಯಲ್ಲೋ ಕಾರ್ಡ್ ಪಡೆದ ಪ್ರತೀಕ್ ಚೌಧರಿ ನಾಳೆಯ ಪಂದ್ಯದಿಂದ ವಂಚಿತರಾಗಲಿದ್ದಾರೆ. ಮನೆಯಂಗಣದಲ್ಲಿ ಮೂರನೇ ಜಯದ ನಿರೀಕ್ಷೆಯಲ್ಲಿರುವ ಮುಂಬೈ ತಂಡಕ್ಕೆ 19 ವರ್ಷದ ಆಟಗಾರ ಹಿಮಿಂಗ್ತಾನ್ ಮಾವಿಯಾ ಅವರು ಮ್ಯಾಟೋ ಗ್ರಿಗಿಕ್ ಅವರನ್ನು ಸೇರಿಕೊಳ್ಳಲಿದ್ದಾರೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ರೌಲಿನ್ ಬೋರ್ಗಸ್ ಹಾಗೂ ಸೌರವ್ ದಾಸ್ ಉತ್ತಮ ಪ್ರದರ್ಶನ ನೀಡಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಹೈದರಾಬಾದ್ ವಿರುದ್ಧ ಅವಕಾಶಗಳನ್ನು ನಿರ್ಮಿಸುವಲ್ಲಿ ತಂಡ ವಿಫಲವಾಗಿರುವ ಕಾರಣ ಕೋಸ್ಟಾ, ಆಟದ ರಣತಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.
''ನಮ್ಮ ಆಟಗಾರರು ಉತ್ತಮ ರೀತಿಯಲ್ಲಿ ಆಡುತ್ತಾರೆಂಬ ನಂಬಿಕೆ ನನಗಿದೆ. ನಾನು ತಂಡದಲ್ಲಿ ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಬದಲಾಯಿಸಬಹುದು, ಆದರೆ ನನ್ನ ಆಟದ ಪದ್ಧತಿಯನ್ನೇ ಬದಲಾಯಿಸಲು ಸಾಧ್ಯವಿಲ್ಲ. ೃತುವಿನ ಕೊನೆಯಲ್ಲಿ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಆದರೆ ನಾವು ಕಠಿಣ ಶ್ರಮ ವಹಿಸುತ್ತಿದ್ದೇವೆ ಎಂಬುದು ಮಾತ್ರ ಗೊತ್ತಿದೆ. ಈ ಸಂದರ್ಭದಲ್ಲಿ ಅಂಕ ಕಳೆದುಕೊಂಡರೆ ಚೇತರಿಸಿಕೊಳ್ಳುವುದು ಕಷ್ಟ. ಆದರೆ ನಾವು ಪಂದ್ಯವನ್ನು ಗೆಲ್ಲಲು ಕಠಿಣ ಹೋರಾಟ ನಡೆಸಲಿದ್ದೇವೆ,'' ಎಂದು ಕೋಸ್ಟಾ ಹೇಳಿದ್ದಾರೆ.
ಪ್ರವಾಸಿ ತಂಡದಲ್ಲಿ ಗಮನಹರಿಸಿಕೊಳ್ಳಲು ಸಾಕಷ್ಟು ವಿಷಯಗಳಿವೆ. ಈ ಋತುವಿನಲ್ಲಿ ಅತಿ ಕಡಿಮೆ ಗೋಲು ಗಳಿಸಿದ ತಂಡವೆಂದರೆ ಅದು ನಾರ್ಥ್ ಈಸ್ಟ್ ಯುನೈಟೆಡ್. ಮನೆಯಂಗಣದ ಹೊರಗೆ ನಡೆದ ಮೂರು ಪಂದ್ಯಗಳಲ್ಲಿ ಮಾತ್ರ ತಂಡ ಗೋಲು ಗಳಿಸಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ತಂಡ ಗೋಲು ಗಳಿಸಿರಲೇ ಇಲ್ಲ, ಮಿಡ್ ಫೀಲ್ಡ್ ವಿಭಾಗದಲ್ಲಿ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡದಿರುವುದೇ ಹಿನ್ನಡೆಗೆ ಪ್ರಮುಖ ಕಾರಣ.
ಗಾಯದ ಸಮಸ್ಯೆ ತಂಡದ ಹಿನ್ನಡೆಗೆ ಪ್ರಮುಖ ಕಾರಣ. ಸ್ಟಾರ್ ಸ್ಟ್ರೈಕರ್ ಅಸಮೋಹ್ ಗ್ಯಾನ್ ನಿರ್ಗಮಿಸಿದ ನಂತರ ತಂಡದ ಹಿನ್ನಡೆ ಆರಂಭವಾಯಿತು. ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಆ್ಯಂಡಿ ಕಿಯೊಗ್ ಮತ್ತು ಸಿಮಾನ್ ಲುಂಡೆವೆಲ್ ಇನ್ನು ತಂಡಕ್ಕೆ ಹೊಂದಿಕೊಂಡಿಲ್ಲ. ಪ್ಲೇ ಆಫ್ ಅವಕಾಶದಿಂದ ದೂರ ಉಳಿದಿರುವ ರಾಬರ್ಟ್ ಜೆರ್ನಿ ಪಡೆ ಈ ಹಂತದಲ್ಲಿ ಅಂಕ ಕಳೆದುಕೊಂಡರೆ ಮತ್ತೆ ಚೇತರಿಕೆಗೆ ಅವಕಾಶ ಇರುವುದಿಲ್ಲ.