ಹೈದರಾಬಾದ್, ಜನವರಿ 24: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪಂದ್ಯದಿಂದ ಪಂದ್ಯಕ್ಕೆ ಮಿಶ್ರ ಫಲವನ್ನು ಅನುಭವಿಸಿತ್ತಿರುವ ಮುಂಬೈ ಸಿಟಿ ಎಫ್ ಸಿ ಶುಕ್ರವಾರ ಇಲ್ಲಿನ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ಸ್ ಅಂಗಣದಲ್ಲಿ ಹೈದರಾಬಾದ್ ವಿರುದ್ಧ ಜಯ ಗಳಿಸಿ ಅಂತಿಮ ನಾಲ್ಕರ ಹಂತ ತಲಪುವ ಗುರಿ ಹೊಂದಿದೆ.
ಜಾರ್ಜ್ ಕೋಸ್ಟಾ ಅವರ ತರಬೇತಿಯಲ್ಲಿ ಪಳಗಿರುವ ಮುಂಬೈ ಸಿಟಿ ಎಫ್ ಸಿ 13 ಪಂದ್ಯಗಳನ್ನಾಡಿ 19 ಅಂಕಗಳನ್ನು ಗಳಿಸಿದೆ, ಒಡಿಶಾ ವಿರುದ್ಧ ಒಂದು ಪಂದ್ಯ ಉಳಿದಿದ್ದು, ಹೈದರಾಬಾದ್ ವಿರುದ್ಧ ಜಯ ಗಳಿಸಿ ಮುಂದಿನ ಹಾದಿಯನ್ನು ಸುಗಮಗೊಳಿಸುವ ಗುರಿ ಹೊಂದಿದೆ.
ಸತತ ಹತ್ತು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿರುವ ಹೈದರಾಬಾದ್ ಐಎಸ್ ಎಲ್ ನ ಅಂತಿಮ ನಾಲ್ಕರ ಹಂತವನ್ನು ತಲಪುವಲ್ಲಿ ವಿಫಲವಾಗಿದೆ. ಅಂತಿಮ ಐದು ಪಂದ್ಯಗಳಿಂದ ಹೈದರಾಬಾದ್ ಐದು ಅಂಕಗಳನ್ನು ಗಳಿಸಿದರೆ ಮಾತ್ರ ಹೈದರಾಬಾದ್ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ ತಂಡವೆಂಬ ಕುಖ್ಯಾತಿಯಿಂದ ಮುಕ್ತವಾಗಲಿದೆ, ಹಾಗಾಗದಿದ್ದಲ್ಲಿ ಅತಿ ಕಡಿಮೆ ಅಂಕ ಗಳಿಸಿದ ತಂಡವೆಂಬ ಅಪಕೀರ್ತಿ ಹೊಂದಲಿದೆ.
ಮುಂಬೈ ಕೂಡ ಈ ಬಾರಿಯ ಐಎಸ್ ಎಲ್ ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಸಮ್ಮಿಶ್ರ ಫಲಿತಾಂಶಗಳ ಮೂಲಕ ಸಾಗಿ ಬಂದಿದೆ. ಆದರೆ ಹಾಲಿ ಚಾಂಪಿಯನ್ ಬೆಂಗಳೂರು ವಿರುದ್ಧ ಮನೆಯಂಗಣದಲ್ಲಿ ಕಂಡ 2-0 ಗೋಲುಗಳ ಜಯ ತಂಡದ ಮನೋಬಲವನ್ನು ಹೆಚ್ಚಿಸಿದೆ. ಈ ಋತುವಿನಲ್ಲಿ ಮುಂಬೈ ತಂಡ ಮನೆಯಿಂದ ಹೊರಗಡಡೆ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದೆ, ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಒಂದು ಸೋಲನುಭವಿಸಿ 12 ಅಂಕಗಳನ್ನು ಗೆದ್ದುಕೊಂಡಿದೆ.
''ನಮ್ಮ ಪಾಲಿಗೆ ಇದು ಅತ್ಯಂತ ಪ್ರಮುಖ ಪಂದ್ಯ. ನಾವು ಯಾವುದೇ ರೀತಿಯ ಪ್ರಮಾದ ಮಾಡಬಾರದೆಂಬುದನ್ನು ಅರಿತಿದ್ದೇವೆ, ಆದ್ದರಿಂದ ಈ ಪಂದ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಹೈದರಾಬಾದ್ ತಂಡವನ್ನೂ ನಾವು ಗೌರವಿಸಿತ್ತೇವೆ,'' ಎಂದು ಜಾರ್ಜ್ ಕೋಸ್ಟಾ ಹೇಳಿದ್ದಾರೆ.
''ನೀವು ಅಂಕಪಟ್ಟಿ ಕಡೆಗೆ ಗಮನಿಸಿದರೆ ಅವರು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಆದರೆ ನೀವು ಅವರು ಆಡಿರುವ ಪಂದ್ಯಗಳನ್ನು ಗಮನಿಸಿದರೆ, ಅವರು ಕೊನೆಯ ವರೆಗೂ ಹೋರಾಟ ನೀಡುವ ತಂಡವಾಗಿದೆ. ಅವರಲ್ಲಿ ಉತ್ತಮ ಆಟಗಾರರಿದ್ದಾರೆ. ಉತ್ತಮ ವಿದೇಶಿ ಆಟಗಾರರಿದ್ದಾರೆ. ನಮಗೆ ನಾಳೆಯ ಪಂದ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಾಗುವುದು ಸ್ಪಷ್ಟ, ಅಂತಿಮವಾಗಿ ನಮಗೆ ಜಯ ಗಳಿಸಬೇಕಾಗಿದೆ,'' ಎಂದು ಕೋಸ್ಟಾ ಹೇಳಿದರು.
ಹೈದರಾಬಾದ್ ಹಾಗೂ ಮುಂಬೈ ಈ ಋತುವಿನಲ್ಲಿ ಸಾಕಷ್ಟು ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿವೆ. ಹೈದರಾಬಾದ್ 31 ಗೋಲುಗಳನ್ನು ಬಿಟ್ಟುಕೊಟ್ಟಿದ್ದು, ಮುಂಬೈ ಸಿಟಿ 21 ಗೋಲುಗಳನ್ನು ನೀಡಿ ಎಎರಡನೇ ಸ್ಥಾನದಲ್ಲಿದೆ. ಮೊಡೌ ಸೌಗೌ 4 ಪಂದ್ಯಗಳಲ್ಲಿ 3 ಗೋಲುಗಳನ್ನು ಗಳಿಸಿ ತಂಡದ ಯಶಸ್ಸಿಗೆ ಕಾರಣಾಗಿದ್ದಾರೆ, ಆದ್ದರಿಂದ ಮುಂಬೈ ಈ ಆಟಗಾರನ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಮೂರು ಅಂಕಗಳನ್ನು ಗಳಿಸುವ ಗುರಿಹೊಂದಿದೆ.
''ಅವರ ಎಲ್ಲ ಅಂಕಿಅಂಶಗಳನ್ನು ಗಮನಿಸುತ್ತಿದ್ದೇನೆ. ನಾವು 31 ಗೋಲುಗಳನ್ನು ನೀಡಿದ್ದೇವೆ. ನೀವು ಸ್ಪರ್ಧೆಯಲ್ಲಿ ಉಳಿಯಬೇಕಾದರೆ, ಅಗ್ರ ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕಾದರೆ ಎದುರಾಳಿ ತಂಡಕ್ಕೆ ಗೋಲು ಗಳಿಸಲು ಆವಕಾಶ ನೀಡಬಾರದು. ಅದರ ಪ್ರಮಾಣ ಕಡಿಮೆ ಇರಬೇಕು. ಇದು ಕೇವಲ ಡಿಫೆಂಡರ್ಸ್ ಗಳ ಸಮಸ್ಯೆಯಲ್ಲ. ಇದು, ಇಡೀ ತಂಡದ ಸಮಸ್ಯೆಯಾಗಿದೆ. ನಾವು ಗೋಲ್ ಕೀಪರ್ ಸೇರಿದಂತೆ 11 ಆಟಗಾರರೊಂದಿಗೆ ದಾಳಿ ಮಾಡಿದೆವು, ಅದೇ ರೀತಿ ಸ್ಟ್ರೈಕರ್ ಸೇರಿದಂತೆ 11 ಆಟಗಾರರ ಮೂಲಕ ಡಿಫೆಂಡ್ ಮಾಡಿದೆವು,'' ಎಂದು ಹೈದರಾಬಾದ್ ತಂಡದ ಮಧ್ಯಂತರ ಕೋಚ್ ಜವೇರಿ ಗುರ್ರಿ ಲೊಪೇಜ್ ಹೇಳಿದ್ದಾರೆ.