ಭುವನೇಶ್ವರ, ಜನವರಿ 29: ಮನೆಯಂಗಣದಲ್ಲಿ ನೂರು ಪ್ರತಿಶತ ಯಶಸ್ಸಿನ ಗುರಿ ಹೊಂದಿರುವ ಒಡಿಶಾ ಎಫ್ ಸಿ ಬುಧವಾರ ಕಳಿಂಗ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಅಂತಿಮ ನಾಲ್ಕರ ಹಂತ ತಲಪುವ ಗುರಿ ಹೊಂದಿದೆ,
ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದ್ದ ಜೊಸೆಫ್ ಗೊಂಬಾವ್ ಪಡೆಗೆ ಬೆಂಗಳೂರಿನಲ್ಲಿ ಬೆಂಗಳೂರು ಎಫ್ ಸಿ ವಿರುದ್ಧ 0-3 ಅಂತರದಲ್ಲಿ ಸೋಲು ಅನುಭವಿಸುವ ಮೂಲಕ ಜಯದ ಓಟಕ್ಕೆ ಬ್ರೇಕ್ ಬಿದ್ದಿತ್ತು. ನಂತರ ಬೆಂಗಳೂರು ಎಫ್ ಸಿಯ ಆಟಗಾರ ಮ್ಯಾನ್ವೆಲ್ ಒನೌ ಅವರನ್ನು ಒಡಿಶಾ ಸಾಲದ ರೋಪದಲ್ಲಿ ಪಡೆದಿತ್ತು. ಅರಿಡಾನೆ ಸ್ಯಾಂಟನಾ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದ ಕಾರಣ ಒಡಿಶಾ ಕ್ಲಬ್ ಈ ತೀರ್ಮಾನ ಕೈಗೊಂಡಿತು. 14 ಪಂದ್ಯಗಳಲ್ಲಿ 9 ಗೋಲುಗಳನ್ನು ಗಳಿಸಿರುವ ಸ್ಯಾಂಟನಾ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಒನೌ ಆಡುತ್ತಾರೆಂಬ ನಿರೀಕ್ಷೆ ತಂಡದ್ದು.
ಲೀಗ್ ಕೊನೆಯ ಹಂತದತ್ತ ಹೆಜ್ಜೆ ಹಾಕುತ್ತಿದ್ದಂತೆ ಒಡಿಶಾ ಎಫ್ ಸಿ ನಾಲ್ಕನೇ ಸ್ಥಾನದಲ್ಲಿ ತನ್ನ ಅಸ್ಥಿತ್ವವನ್ನು ಭದ್ರಪಡಿಸಿಕೊಳ್ಳಬೇಕಾದರೆ ಇಲ್ಲಿ ಜಯದ ಅಗತ್ಯ ಇದೆ. ವಿಶೇಷವೆಂದರೆ ಒಡಿಶಾ ತಂಡ, ಎಟಿಕೆ, ಗೋವಾ ಮತ್ತು ಬೆಂಗಳೂರು ತಂಡಗಳ ವಿರುದ್ಧ ಇನ್ನೂ ಗೋಲು ಗಳಿಸಿಲ್ಲ. ಮಾರ್ಕಸದ ತೆಬರ್ ಗಾಯದ ಕಾರಣ ನಾಳೆಯ ಪಂದ್ಯ ಆಡುತ್ತಿಲ್ಲ. ಅದೇ ರೀತಿ ಶುಭಂ ಸಾರಂಗಿ ಹಾಗೂ ಕಾರ್ಲೋಸ್ ಡೆಲ್ಗಾಡೋ ನಾಲ್ಕು ಹಳದಿ ಕಾರ್ಡು ಪಡೆದು ಅಮಾನತಿಗೊಳಗಾಗಿದ್ದಾರೆ.
""ಗೋವಾ ಉತ್ತಮ ತಂಡ. ಲೀಗ್ ನಲ್ಲೇ ಶ್ರೇಷ್ಠ ತಂಡಗಳಲ್ಲಿ ಒಂದು. ಅವರು ಹೇಗೆ ಆಡುತ್ತಾರೆಂಬುದು ನಮಗೆ ಚೆನ್ನಾಗಿ ಗೊತ್ತು. ನಾವು ಆಡಿರುವ ಪ್ರತಿಯೊಂದು ಪಂದ್ಯವೂ ನಮ್ಮದೇ ಶೈಲಿಯದ್ದಾಗಿದೆ. ಆದರೆ ಎದುರಾಳಿ ತಂಡದ ಸ್ಥಿತಿಯನ್ನು ಅರಿತುಕೊಂಡು ನಾವು ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುತ್ತೇವೆ. ಈ ವಾರ ನಾವು ಉತ್ತಮವಾಗಿ ಅಭ್ಯಾಸ ಮಾಡಿದ್ದೇವೆ. ಹುಡುಗರು ಎಲ್ಲ ರೀತಿಯಲ್ಲೂ ಸಿದ್ಧರಾಗಿದ್ದಾರೆ ಎಂಬುದು ನನ್ನ ನಂಬಿಕೆ,'' ಎಂದು ಒಡಿಶಾ ತಂಡದ ಕೋಚ್ ಗೊಂಬಾವ್ ಹೇಳಿದ್ದಾರೆ.
ಮನೆಯಂಗಣದ ಹೊರಗಡೆ ನಡೆದ ಎರಡು ಪಂದ್ಯಗಳಲ್ಲಿ ಗೋವಾ ಸೋಲನುಭವಿಸಿತ್ತು. ಮಿಡ್ ಫೀಲ್ಡರ್ ಅಹಮದ್ ಜಹೊವ್ ಅವರ ಅನುಪಸ್ಥಿತಿಯಲ್ಲಿರುವ ಗೋವಾ ತಂಡ ಯಾವುದೇ ರೀತಿಯಲ್ಲಿ ಅಂಕವನ್ನು ಕಳೆದುಕೊಳ್ಳಬಾರದು ಎಂಬುದು ಕೋಚ್ ಸರ್ಗಿಯೊ ಲೊಬೆರಾ ಅವರ ಲೆಕ್ಕಾಚಾರ. ತಂಡ ಈಗ ಹ್ಯೂಗೋ ಬೌಮಸ್ ಅವರನ್ನು ಹೆಚ್ಚು ಆಧರಿಸಿದೆ, ಕಾರಣ ಆರು ಗೋಲುಗಳನ್ನು ಗಳಿಸಿರುವ ಬೌಮಾಸ್ ಆರು ಗೋಲು ಗಳಿಸಲು ನೆರವಾಗಿದ್ದಾರೆ.
''ಈ ಋತು ಬಹಳ ಕಠಿಣವಾಗಿದೆ. ಅಲ್ಲದೆ ಸಾಕಷ್ಟು ಸ್ಪರ್ಧೆಯಿಂದ ಕೂಡಿದೆ. ಪ್ರತಿಯೊಂದು ತಂಡವೂ ಜಯದ ನಿರೀಕ್ಷೆಯಲ್ಲಿರುವುದೇ ಇದಕ್ಕೆ ಕಾರಣ. ನಮಗೆ ಇದೊಂದು ದೊಡ್ಡ ಸವಾಲು. ನಾಳೆಯ ಪಂದ್ಯದಲ್ಲಿ ಗೆದ್ದು ಅಗ್ರ ಸ್ಥಾನ ಗಳಸಿ, ಮತ್ತೆ ಪ್ರಶಸ್ತಿ ಗೆಲ್ಲುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ,'' ಎಂದು ಲಾಸ್ ಪಾಮ್ಸ್ ನ ಮಾಜಿ ಕೋಚ್ ಹೇಳಿದ್ದಾರೆ.