ಭುವನೇಶ್ವರ, ಜನವರಿ 11: ಟಾಪ್ ನಾಲ್ಕರಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ತಂಡಗಳ ನಡುವೆ ತೀವ್ರ ರೀತಿಯ ಪೈಪೋಟಿ ನಡೆಯುತ್ತದೆ. ಅಂಥ ಪೈಪೋಟಿ ಒಡಿಶಾ ಹಾಗೂ ಮುಂಬೈ ಸಿಟಿ ತಂಡಗಳ ನಡುವೆ ಶನಿವಾರ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲದಿಂದ ಕೂಡಿರುತ್ತದೆ. ಏಕೆಂದರೆ ಎರಡೂ ತಂಡಗಳು ನಾಲ್ಕರ ಹಂತಕ್ಕೆ ಸಮೀಪದಲ್ಲಿವೆ.
ಮನೆಯಂಗಣದ ಹೊರಗಡೆ ಋತುವಿನ ಆರಂಭಿಕ ಪಂದ್ಯಗಳನ್ನಾಡಿದ ಜೊಸೆಫ್ ಗೊಂಬೊವ್ ಪಡೆ ಪುಣೆಯಲ್ಲೂ ಎರಡು ಪಂದ್ಯಗಳನ್ನು ಆಡಿತ್ತು. ನಂತರ ಕಳಿಂಗ ಕ್ರೀಡಾಂಗಣದಲ್ಲಿ ಸತತ ಎರಡು ಜಯ ಗಳಿಸಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿತ್ತು. ಮೊದಲು ಜೆಮ್ಷೆಡ್ಪುರ ತಂಡದ ವಿರುದ್ಧ 2-1 ನಂತರ ಚೆನ್ನೈಯಿನ್ ಎಫ್ ಸಿ ವಿರುದ್ಧ 2-0 ಅಂತರದಲ್ಲಿ ಗೆದ್ದಿತ್ತು.
ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ್ದ ಮುಂಬೈ ಸಿಟಿ ಎಫ್ ಸಿ ತಂಡಕ್ಕೆ ಎಟಿಕೆ ವಿರುದ್ಧ ಸೋಲಾದ ನಂತರ ಜಯದ ಓಟಕ್ಕೆ ಬ್ರೇಕ್ ಬಿದ್ದಿತ್ತು. ಕಳೆದ ಏಳು ಪಂದ್ಯಗಳಲ್ಲಿ ಮುಂಬೈ ಕೇವಲ ಒಂದು ಪಂದ್ಯದಲ್ಲಿ ಸೋತಿತ್ತು. ಇದರಿಂದಾಗಿ ಮುಂಬೈ ಆಡಿರುವ 11 ಪಂದ್ಯಗಳಲ್ಲಿ 16 ಅಂಕಗಳನ್ನು ಗಳಿಸಿ ಅಗ್ರ ನಾಲ್ಕರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು.
ಒಡಿಶಾ ತಂಡ ಇದುವರೆಗೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು, ಇದುವರೆಗೂ ಲಯ ಕಂಡುಕೊಳ್ಳುಲು ಹರಸಾಹಸಪಡುತ್ತಿತ್ತು. ಇದರ ನಡುವೆಯೂ ತಂಡ ಅದ್ಭುತ ಫುಟ್ಬಾಲ್ ಪ್ರದರ್ಶನ ನೀಡಿತ್ತು. 15 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿರುವ ತಂಡಕ್ಕೆ ಇಗ ಜಯದ ಅಗತ್ಯ ಇದೆ. ಈ ಹಿಂದಿನ ಪಂದ್ಯದಲ್ಲಿ ಒಡಿಶಾ ತಂಡ ಮುಂಬೈ ವಿರುದ್ಧ ಗೆದ್ದಿರುವುದು ಗಮನಾರ್ಹ.
ಹಿಂದಿನ ಪಂದ್ಯದ ಫಲಿತಾಂಶ ಹಾಗೂ ಮನೆಯಂಗಣದ ಪ್ರೇಕ್ಷಕರು ನೀಡುತ್ತಿರುವ ಉತ್ತಮ ಪ್ರೋತ್ಸಾಹ ಇದು ತಮ್ಮ ತಂಡಕ್ಕೆ ಮತ್ತಷ್ಟು ಶಕ್ತಿಯನ್ನು ನೀಡಲಿದೆ ಎಂದು ತಂಡದ ಕೋಚ್ ಗೊಂಬಾವ್ ಹೇಳಿದ್ದಾರೆ. ''ಇದು ನಮ್ಮ ಪಾಲಿಗೆ ಅತ್ಯಂತ ಪ್ರಮುಖವಾದ ಪಂದ್ಯ. ಇದು ಆರು ಅಂಕಗಳ ಪಂದ್ಯ. ಇದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಪಂದ್ಯ. ನಾಳೆ ನೀಗ್ ನ ಮೂರರಲ್ಲಿ ಎರಡು ಭಾಗ ಕೊನೆಗೊಳ್ಳುತ್ತದೆ. ನಾವು ಕಠಿಣ ಹೋರಾಟ ನಡೆಸುತ್ತಿದ್ದೇವೆ, ಗೆಲ್ಲುತ್ತೇವೆಂಬ ಆತ್ಮವಿಶ್ವಾಸವೂ ಇದೆ. ಹುಡುಗರೂ ಜಯದ ಹಸಿವಿನಲ್ಲಿದ್ದಾರೆ, ನಾವು ಉತ್ತಮವಾಗಿ ಆಡುತ್ತೇವೆಂಬ ಆತ್ಮವಿಶ್ವಾಸವಿದೆ,'' ಎಂದು ಗೊಂಬಾವ್ ಹೇಳಿದ್ದಾರೆ.
''ಬಹಳ ಸಮಯದಿಂದ ನಾವು ಮನೆಯಂಗಣದಲ್ಲಿ ಪಂದ್ಯಗಳನ್ನು ಆಡಿಲ್ಲ ಅನಿಸುತ್ತೆ, ಮನೆಯಿಂದ ಹೊರಗಡೆ ನಾವು 10 ಪಂದ್ಯಗಳನ್ನು ಆಡಿದ್ದೇವೆ. ಇಲ್ಲಿಗೆ ಬಂದ ನಂತರ ನಮ್ಮ ತಂಡಕ್ಕೆ ಉತ್ತಮ ರೀತಿಯ ಪ್ರೋತ್ಸಾಹ ಸಿಕ್ಕಿದೆ. ಇದು ನಮ್ಮಲ್ಲಿ ಹೊಸ ಉತ್ಸಾಹವನ್ನುಂಟುಮಾಡಿದೆ. ನಾವು ಇಲ್ಲಿರುವುದಕ್ಕೆ ಖುಷಿ ಇದೆ, '' ಎಂದರು.
ಎದುರಾಳಿಯ ಬಗ್ಗೆ ಹೆಚ್ಚಿನ ಗಮನ ಹರಿಸುವುದಕ್ಕಿಂತ ನಮ್ಮ ತಂಡದ ಬಗ್ಗೆ ಗಮನ ಹರಿಸುವುದೇ ಸೂಕ್ತ ಎಂದು ಮುಂಬೈ ಸಿಟಿ ತಂಡದ ಸಹಾಯಕ ಕೋಷ್ ಮಾರ್ಕೋ ಲೈಟ್ ಹೇಳಿದ್ದಾರೆ.
''ಅವರದ್ದು ಉತ್ತಮ ತಂಡ. ಅವರು ಬಹಳ ಸರಳವಾಗಿ ಆಡುತ್ತಾರೆ, ಆದರೆ ಬಹಳ ಪರಿಣಾಮಕಾರಿಯಾಗಿ ಆಡುತ್ತಾರೆ. ಅವರಲ್ಲಿ ಉತ್ತಮ ಆಟಗಾರರಿದ್ದರೂ ನಮ್ಮಲ್ಲಿರುವಂತೆ ಹೊಂದಾಣಿಕೆಯ ಕೊರತೆ ಇದೆ. ಅವರಲ್ಲಿ ಅವರರದ್ದೇ ಆದ ಆಯುಧ ಇದೆ, ನಮ್ಮಲ್ಲಿ ನಮ್ಮದೇ ಆದ ಆಯುಧ ಇದೆ. ಅವರಲ್ಲಿ ಉತ್ತಮ ಗುಣಮಟ್ಟದ ಆಟಗಾರರಿದ್ದಾರೆ. ಉತ್ತಮವಾದ ದೇಶೀಯ ಹಾಗೂ ವಿದೇಶಿ ಆಟಗಾರರಿದ್ದಾರೆ. ಆದರೆ ನಾವು ಇಡೀ ತಂಡವನ್ನು ಪರಿಗಣಸಿತ್ತೇವೆಯೇ ಹೊರತು ಒಬ್ಬ ನಿರ್ದಿಷ್ಟ ಆಟಗಾರನನ್ನಲ್ಲ,'' ಎಂದು ಲೈಟ್ ಹೇಳಿದರು.
ಒಡಿಶಾ ಪರ ಭಾರತೀಯ ಆಟಗಾರರಾದ ವಿನೀತ್ ರಾಯ್ ಹಾಗೂ ಜೆರ್ರಿ ಉತ್ತಮವಾಗಿ ಆಡಿದ್ದಾರೆ. ಇಬ್ಬರೂ ಎರಡು ಗೋಲುಗಳನ್ನು ಗಳಿಸಿದ್ದು, ನಾಲ್ಕು ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ. ಅರಿದಾನೆ ಸ್ಯಾಂಟನಾ ಆರು ಗೋಲುಗಳನ್ನು ಗಳಿಸಿದದ್ದಾರೆ. ಪೌಲೋ ಮಚಾಡೋ ಗಾಯಗೊಂಡಿರುವುದು ಮುಂಬೈ ತಂಡದ ಬಲವನ್ನು ಕುಂದಿಸಿದೆ.