ಜೇಮ್ಷೆಡ್ಪುರ, ಜನವರಿ 19: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸಂಕಷ್ಟವನ್ನು ಎದುರಿಸುತ್ತಿರುವ ಜೆಮ್ಷೆಡ್ಪುರ ಎಫ್ ಸಿ ತಂಡ ಭಾನುವಾರ ಮನೆಯಂಗಣವಾಗಿರುವ ಜೆಆರ್ ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಹೋರಾಟ ನಡೆಸಲಿದ್ದು, ಇಲ್ಲಿ ಜಯವಲ್ಲದೆ ತಂಡಕ್ಕೆ ಬೇರೆ ಯಾವ ಫಲಿತಾಂಶವೂ ಹೆಚ್ಚು ಪ್ರಯೋಜವವಾಗದು.
ಹಿಂದಿನ ಆರು ಪಂದ್ಯಗಳಲ್ಲಿ ಜಯ ಕಾಣದೆ, ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಜೆಮ್ಷೆಡ್ಪುರ ತಂಡ ಈಗ ಸಂಕಷ್ಟದ ಸ್ಥಿತಿ ತಲುಪಿದೆ. ಅಂತಿಮ ನಾಲ್ಕರ ಹಂತ ತಲುಪಲು ಈಗ ಉಳಿದಿರುವ ಪಂದ್ಯಗಳಲ್ಲಿ ಜಯ ಕಾಣಬೇಕಾದ ಅನಿವಾರ್ಯತೆ ಇದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆದ್ದರೆ ಮಾತ್ರ ಅಂತಿಮ ನಾಲ್ಕರ ಹಂತ ತಲಪುವ ಸ್ಪರ್ಧೆಯಲ್ಲಿರುವ ಇತರ ತಂಡಗಳೊಂದಿಗೆ ಸ್ಪರ್ಧೆಯಲ್ಲಿ ಮುಂದುವರಿಯಲು ಸಾದ್ಯವಾಗುತ್ತದೆ.
13 ಅಂಕಗಳನ್ನು ಗಳಿಸಿರುವ ಜೆಮ್ಷೆಡ್ಪುರ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್ಸ್ ತಂಡ ಟಾಟಾ ಪಡೆಗಿಂತ ಒಂದು ಅಂಕ ಮೇಲಿದೆ. ಕೇರಳ ತಂಡಕ್ಕೂ ಇಲ್ಲಿ ಜಯದ ಅನಿವಾರ್ಯತೆ ಇದೆ. ಹೈದರಾಬಾದ್ ಹಾಗೂ ಎಟಿಕೆ ವಿರುದ್ಧ ಜಯ ಗಳಿಸುವ ಮೂಲಕ ಕೇರಳ ಬ್ಲಾಸ್ಟರ್ಸ್ ಚೇತರಿಸಿಕೊಂಡಿದೆ.
ಕಳಪೆ ಪ್ರದರ್ಶನ ನೀಡುವುದಕ್ಕೆ ಮೊದಲು ಜೆಮ್ಷೆಡ್ಪುರ ಒಂದು ಹಂತದಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಿತ್ತು. ಸರ್ಗಿಯೋ ಕ್ಯಾಸ್ಟಲ್ ಹಾಗೂ ಪಿಟಿ ಗಾಯಗೊಂಡ ನಂತರ ತಂಡ ಜಯ ಕಾಣುವಲ್ಲಿ ವಿಫಲವಾಯಿತು ಕೋಚ್ ಆಂಟೋನಿಯೋ ಇರಿಯೊಂಡೊ ಅವರಿಗೆ ಕ್ಯಾಸ್ಟಲ್ ಅವರ ಅನುಪಸ್ಥಿತಿ ಕಾಡುವುದು ಸಹಜ. ಕ್ಯಾಸ್ಟಲ್ ಹೊರತಾಗಿ ಜೆಮ್ಷೆಡ್ಪುರ ತಂಡದ ಇತರ ಯಾವುದೇ ಆಟಗಾರರು ಒಂದಕ್ಕಿಂತ ಹೆಚ್ಚಿನ ಗೋಲು ಗಳಿಸಿಲ್ಲ.
''ನಾವು ಪಂದ್ಯ ಗೆಲ್ಲಬೇಕೆಂದು ನಮ್ಮಿಂದಾದ ಪ್ರಯತ್ನವನ್ನು ಮಾಡುತ್ತಿದ್ದೇವೆ. ಬೆಂಗಳೂರು ವಿರುದ್ಧ ನಡೆದ ಪಂದ್ಯವನ್ನು ನೀವು ಗಮನಿಸಿದರೆ ನಾವು ಹೆಚ್ಚಿನ ಸಮಯ ಚೆಂಡನ್ನು ನಿಯಂತ್ರಿಸಿದ್ದೇವೆ. ನಮ್ಮಿಂದ ಹದಿನಾಲ್ಕು ಕಾರ್ನರ್ ಕಿಕ್ ದಾಖಲಾಗಿತ್ತು, ಅವರದ್ದು ಕೇವಲ ನಾಲ್ಕು. ನಾವು ಅವಕಾಶಗಳನ್ನು ಸೃಷ್ಟಿಮಾಡಿದ್ದೆವು, ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದೆವು. ಅಲ್ಲದೆ ಎರಡನೇ ಗೋಲನ್ನು ಉಡುಗೊರೆಯಾಗಿ ನೀಡಿದೆವು. ನಾವು ಯಾವ ರೀತಿಯಲ್ಲಿ ಶ್ರಮ ವಹಿಸುತ್ತಿದ್ದೇವೋ ಅದೇ ರೀತಿಯಲ್ಲಿ ಆಡುತ್ತೇವೆ, ಈ ಜಯವಿಲ್ಲದ ಓಟ ಮಾತ್ರ ನಿಲ್ಲಬೇಕಾಗಿದೆ,'' ಎಂದು ಇರಿಯೊಂಡೊ ಹೇಳಿದ್ದಾರೆ.
ಫಾರ್ವರ್ಡ್ ವಿಭಾಗದ ನೂತನ ಆಟಗಾರ ಡೇವಿಡ್ ಗ್ರಾಂಡೆ ತಮ್ಮ ಕೊಡುಗೆ ನೀಡಲು ಉತ್ಸುಕರಾಗಿದ್ದಾರೆ. ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಫಾರೂಕ್ ಚೌಧರಿ ಬರಬರುತ್ತ ನಿರಾಶದಾಯಕ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಮೋರು ಪಂದ್ಯಗಳಲ್ಲಿ ಆರು ಗೋಲುಗಳನ್ನು ನೀಡಿರುವುದು ತಂಡದ ಡಿಫೆನ್ಸ್ ವಿಭಾಗದ ಬಗ್ಗೆ ಕೋಚ್ ಗೆ ಚಿಂತೆ ಆವರಿಸುವಂತೆ ಮಾಡಿದೆ. ತಂಡದಲ್ಲಿರುವ ಆತ್ಮ ವಿಶ್ವಾಸ ಮರಳಿ ಪಡೆಯಬೇಕಾದರೆ ಒಂದು ಜಯದ ಅಗತ್ಯ ಇದೆ.
ಜೆಮ್ಷೆಡ್ಪುರ ತಂಡ ಗೋಲು ಗಳಿಸಲು ಪರದಾಡುತ್ತಿರುವಾಗ ಕೇರಳ ಬ್ಲಾಸ್ಟರ್ಸ್ ಇತ್ತೀಚಿನ ಪಂದ್ಯಗಳಲ್ಲಿ ಗೋಲು ಗಳಿಸುವಲ್ಲಿ ಯಶಸ್ವಿಯಾಗಿದೆ. ಎಲ್ಕೋ ಷೆಟೋರಿ ಪಡೆ ಗಳಿಸಿರುವ 16ಗೋಲುಗಳಲ್ಲಿ 11 ಗೋಲುಗಳನ್ನು ಬಾರ್ಥಲೋಮ್ಯೋ ಒಗ್ಬಚೆ ಹಾಗೂ ರಫಾಯಲ್ ಮೆಸ್ಸಿ ಬೌಲಿ ಹಂಚಿಕೊಂಡಿದ್ದಾರೆ.
ಐಎಸ್ ಎಲ್ ಲೀಗ್ ಹಂತದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಸತತ ಮೂರು ಜಯ ಕಂಡಿರಲಿಲ್ಲ, ಆದರೆ ಈಗ ಆ ಅಪೂರ್ವ ಸಾಧನೆಯನ್ನು ಮಾಡುವ ಗುರಿ ಹೊಂದಿದೆ.
''ನನ್ನ ಪ್ರಕಾರ ಅಗ್ರ ನಾಲ್ಕರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶ ಇನ್ನೂ ಇದೆ. ನಮ್ಮಿಂದ ಮೇಲಿರುವ ಕೆಲವು ತಂಡಗಳು ಅಂಕಗಳನ್ನು ಕಳೆದುಕೋಡಿರುವುದು ಇದಕ್ಕೆ ಕಾರಣ, ಇಲ್ಲಿ ಸಾಕಷ್ಟು ಇಕ್ಕಟ್ಟಿನ ಪರಿಸ್ಥಿತಿ ಇದೆ. ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಅಗ್ರ ನಾಲ್ಕು ಸ್ಥಾನಗಳ ಕಡೆಗೆ ಗಮನ ಹರಿಸಿಲ್ಲ, ನಮ್ಮ ಗುರಿ ಸದ್ಯ ಜೆಮ್ಷೆಡ್ಪುರ, ನಂತರ ಗೋವಾ ಮತ್ತು ಬಳಿಕ ಚೆನ್ನೈಯಿನ್ ವಿರುದ್ಧದ ಪಂದ್ಯದ ಮೇಲಿದೆ. ಫುಟ್ಬಾಲ್ ಇರಲಿ ಬದುಕಿರಲಿ ನಾವು ಬಹಳ ದೂರದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು, ಅದು ನಮ್ಮ ಕೈಯಲ್ಲಿ ಇರುವುದಿಲ್ಲ,'' ಎಂದು ಷೆಟೋರಿ ಹೇಳಿದ್ದಾರೆ.