ಗುವಾಹಟಿ, ಫೆಬ್ರವರಿ, 10: ಆತಿಥೇಯ ನಾರ್ಥ್ ಈಸ್ಟ್ ಯುನೈಟೆಡ್ ಪರ ಫೆಡ್ರಿಕೊ ಗೆಲ್ಲೆಗೊ (5ನೇ ನಿಮಿಷ), ರೀಡಿಮ್ ತಾಂಗ್ (77ನೇ ನಿಮಿಷ) ಮತ್ತು ಜೋಸ್ ಡೇವಿಡ್ ಲ್ಯುಡೋ (88ನೇ ನಿಮಿಷ) ಹಾಗೂ ಜೆಮ್ಷೆಡ್ಪುರ ಎಫ್ ಸಿ ಪರ ಡೇವಿಡ್ ಗ್ರಾಂಡೆ (45ನೇ ನಿಮಿಷ), ನೋಯ್ ಅಕೋಸ್ಟಾ ರಿವೆರಾ (82ನೇ ನಿಮಿಷ) ಹಾಗೂ ಎಮರ್ಸನಗ ಗೊಮೆಸ್ ಮೆಮೊ (85ನೇ ನಿಮಿಷ) ಗಳಿಸಿದ ಗೋಲಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 79ನೇ ಪಂದ್ಯ 3-3 ಗೋಲುಗಳಿಂದ ಡ್ರಾಗೊಂಡಿತು. ಇಲ್ಲಿ ಜಯ ಗಳಿಸಿದರೆ ಇತ್ತಂಡಗಳಿಗೆ ಗೌರವ ಸಿಗುತ್ತಿತ್ತೇ ವಿನಃ ಪ್ಲೇ ಆಫ್ ಹಂತದ ಅವಕಾಶ ಇರುತ್ತಿರಲಿಲ್ಲ. ಆ ಕಾರಣ ಇತ್ತಂಡಗಳು ಚಳಿಬಿಟ್ಟು ಆಟ ಪ್ರದರ್ಶಿಸಿದವು, ಪರಿಣಾಮ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಗೋಲಿಗೆ ಗೋಲಿನ ಉತ್ತರ ನೀಡಿದವು. ಪಂದ್ಯ ತೃಪ್ತಿಕರವಾಗಿ ಸಮಬಲದಲ್ಲಿ ಕೊನೆಗೊಂಡಿತು.
ಸಮಬಲದ ಪ್ರಥಮಾರ್ಧ
ಇತ್ತಂಡಗಳು ಸೋಲು ಗೆಲುವಿನ ಲೆಕ್ಕಾಚಾರವನ್ನು ಮರೆತು ತಮ್ಮ ನೈಜ ಸಾಮರ್ಥ್ಯವನ್ನು ತೋರಲು ಮುಂದಾದರು. ಪರಿಣಾಮ ನಾರ್ಥ್ ಈಸ್ಟ್ ತಂಡ ಆರಂಭದಲ್ಲೇ ಗೋಲು ಗಳಿಸಿದರೆ ಪ್ರವಾಸಿ ಜೆಮ್ಷೆಡ್ಪುರ ತಂಡ ಪ್ರಥಮಾರ್ಧದ ಕೊನೆಯಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಫೆಡ್ರಿಕೊ ಗಲ್ಲೆಗೊ ಗಳಿಸಿದ ಗೊಲು ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಇದಕ್ಕೂ ಮುನ್ನ ರಫೀಕ್ ಅಲಿ ಉತ್ತಮ ರೀತಿಯಲ್ಲಿ ತಡೆದ ಕಾರಣ ಮತ್ತೊಂದು ಗೋಲಿನ ಅವಕಾಶ ತಪ್ಪಿತ್ತು. ಬಿಕಾಶ್ ಜೈರುಗೆ ಸಮಬಲಗೊಳಿಸುವ ಅವಕಾಶ ಸಿಕ್ಕರೂ ಸದುಪಯೋಗಪಡಿಸಿಕೊಳ್ಳಲಿಲ್ಲ. ಪ್ರಥಮಾರ್ಧ ಮುಗಿಯುವುದಕ್ಕೆ ಕೆಲ ಕ್ಷಣಗಳು ಬಾಕಿ ಇರುವಾಗ ಡೇವಿಡ್ ಗ್ರಾಂಡೆ 45ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು. ಇದರೊಂದಿಗೆ ದ್ವಿತಿಯಾರ್ಧದ ಪಂದ್ಯ ಸಾಕಷ್ಟು ಕುತೂಹಲಕ್ಕೆ ಸಾಕ್ಷಿಯಾಗುವುದು ಸಹಜ.
ಇಂಡಿಯನ್ ಸೂಪರ್ ಲೀಗ್: ಕೃಷ್ಣ ಹ್ಯಾಟ್ರಿಕ್; ಅಗ್ರ ಸ್ಥಾನಕ್ಕೆ ಎಟಿಕೆ
ಕಳೆದುಕೊಳ್ಳಲು ಏನೂ ಇಲ್ಲ!
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ಹಂತ ತಲುಪಲು ವಿಫಲವಾಗಿರುವ ನಾರ್ಥ್ ಈಸ್ಟ್ ಯುನೈಟೆಡ್ ಹಾಗೂ ಜೆಮ್ಷೆಡ್ಪುರ ಎಫ್ ಸಿ ತಂಡಗಳು ಉಳಿದಿರುವ ಪಂದ್ಯಗಳಲ್ಲಿ ಗೆದ್ದು ಗೌರವ ಕಾಯ್ದುಕೊಳ್ಳಲು ಮುಖಾಮುಖಿಯಾದವು. ಮನೆಯಂಗಣಲ್ಲಿ ಜಯ ಕಾಣಲು ವಿಫಲವಾಗಿರುವ ನಾರ್ಥ್ ಈಸ್ಟ್ ಇದುವರೆಗೂ ಗೆದ್ದಿದ್ದು, ಒಂದು ಅಂಕ ಮಾತ್ರ. ಜಯ ಗಳಿಸಬೇಕಾದರೆ ಗೋಲು ಗಳಿಸಲೇಬೇಕು. ಆದರೆ ಪರ್ವತಪ್ರದೇಶದ ತಂಡ ಗೋಲು ಗಳಿಸುವುದನ್ನೇ ಮರೆತಿತ್ತು. ಅಸಮೋಹ ಗ್ಯಾನ್ ಅವರು ಗಾಯಗೊಂಡು ನಿರ್ಗಮಿಸಿದ ನಂತರ ತಂಡ ಒಂದೇ ಒಂದೂ ಗೋಲನ್ನು ಗಳಿಸದಿರುವುದು ಬೇಸರದ ಸಂಗತಿ.
ಐಎಸ್ಎಲ್ 2020: ಗುವಾಹಟಿಯಲ್ಲಿ ಅಂಕ ಹಂಚಿಕೊಂಡ ನಾರ್ತ್, ಸೌತ್
ಈಗ ಮನೆಯಂಗಣದಲ್ಲಿ ಜಯ ಗಳಿಸಿ ಗೌರವ ಕಾಪಾಡುವುದು ತಂಡದ ಮೇಲಿರುವ ಜವಾಬ್ದಾರಿ. ಹಿಂದಿನ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ಯಿಂದ ಸೋಲು ಅನುಭವಿಸಿದ ನಂತರ ಜೆಮ್ಷೆಡ್ಪುರ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಸ್ಪರ್ಧೆಯಿಂದ ವಂಚಿತವಾಯಿತು. ತರಿ, ಪಿಟಿ ಹಾಗೂ ಕ್ಯಾಸ್ಟಲ್ ಗಾಯಗೊಂಡಿದ್ದು ತಂಡದ ಹಿನ್ನಡೆಗೆ ಮುಖ್ಯ ಕಾರಣವಾಗಿತ್ತು. ನೊಯ್ ಅಕೋಸ್ಟಾ, ಫಾರೂಖ್ ಚೌಧರಿ ಹಾಗೂ ಐಟೋರ್ ಮೊನ್ರಾಯ್ ತಂಡದ ಪರ ಉತ್ತಮವಾಗಿಯೇ ಆಡಿದರು, ಆದರೆ ಅಷ್ಟರಲ್ಲಿ ಕಾಲ ಮಿಂಚಿತ್ತು. ಹಿಂದಿನ ಬಾರಿ ಮುಖಾಮುಖಿಯಾದಾಗ ಇತ್ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು. ಈಗ ಸೋಲಿನ ಹಂಗಿಲ್ಲದ ಕಾರಣ ಇತ್ತಂಡಗಳು ಭಯಮರೆತು ಆಡಬಹುದು