ಗೋವಾ, ಡಿಸೆಂಬರ್ 17: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಕಂಡು, ಬಹಳಷ್ಟು ಸುದೀರ್ಘ ಅವಧಿಗೆ ಅಜೇಯವಾಗಿ ಮುನ್ನುಗ್ಗುತ್ತಿರುವ ನಾರ್ಥ್ ಈಸ್ಟ್ ಯುನೈಟೆಡ್ ಲೀಗ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ದೃಷ್ಟಿಯಿಂದ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಮತ್ತೊಂದು ಹೋರಾಟಕ್ಕೆ ಮುಂದಾಗಿದೆ.
ಇಲ್ಲಿನ ತಿಲಕ್ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ನಾರ್ಥ್ ಈಸ್ಟ್ ಮೂರು ಅಂಕಗಳನ್ನು ತನ್ನದಾಗಿಸಿಕೊಳ್ಳುವ ಗುರಿಹೊಂದಿದೆ, ಪರ್ವತಪ್ಪಲಿನ ತಂಡ ಆರು ಪಂದ್ಯಗಳನ ನಂತರವೂ ಅಜೇಯವಾಗಿ ಮುನ್ನಡೆದಿದೆ. ಶುಕ್ರವಾರದ ಪಂದ್ಯದಲ್ಲಿ ಜಯ ಗಳಿಸಿದರೆ ನಾರ್ಥ್ ಈಸ್ಟ್ ಅಂಕಪಟ್ಟಿಯಲ್ಲಿ ಮುಂಬೈ ಸಿಟಿಯೊಂದಿಗೆ ಮತ್ತು ಎರಡನೇ ಸ್ಥಾಣದಲ್ಲಿರುವ ಎಟಿಕೆ ಮೋಹನ್ ಬಾಗನ್ ಜತೆ ಹಂಚಿಕೊಳ್ಳಲಿದೆ.
ಐಎಸ್ಎಲ್ 2020: ಎಟಿಕೆ ಮೋಹನ್ ಬಾಗನ್ಗೆ ಕೃಷ್ಣಾನುಗ್ರಹ
ಕಳೆದ ಋತುವಿನಲ್ಲಿ ನಾರ್ಥ್ ಈಸ್ಟ್ ಇದೇ ರೀತಿಯ ಪ್ರದರ್ಶನ ತೋರಿತ್ತು. ಆರು ಪಂದ್ಯಗಳ ವರೆಗೂ ಅಜೇಯವಾಗಿ ಉಳಿದಿತ್ತು. ಆದರೆ ಸತತ ಎರಡು ಸೋಲಿನ ನಂತರ ಮತ್ತೆ ಚೇತರಿಸಿಕೊಳ್ಳದೆ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಜೆಮ್ಷೆಡ್ಪುರ ವಿರುದ್ಧ ಜಯ ಗಳಿಸಿದರೆ ನಾರ್ಥ್ ಈಸ್ಟ್ ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಪಂದ್ಯಗಳಲ್ಲಿ ಅಜೇಯವಾಗಿ ಉಳಿದ ಇತಿಹಾಸ ಬರೆಯಲಿದೆ.
"ನಾವು ಕಠಿಣ ಶ್ರ ವಹಿಸುತ್ತಿದ್ದೇವೆ, ಸೋಲಬಾರದು ಎಂಬುದು ನಮ್ಮ ಗುರಿಯಾಗಿದೆ," ಎಂದಿರುವ ಕೋಚ್ ಗೆರಾರ್ಡ್ ನಸ್, "ನಾವು ಪ್ರತಿಯೊಂದು ಪಂದ್ಯದಲ್ಲೂ ಮೂರು ಅಂಕಗಳನ್ನು ಗಳಿಸಲು ಪ್ರಯತ್ನಿಸುತ್ತೇವೆ. ಆದರೆ ಸೋಲಿನ ಬಗ್ಗೆ ನಾನು ಚಿಂತಿಸುತ್ತಿಲ್ಲ. ಅತ್ಯಂತ ಪ್ರಮುಖವಾದ ಅಂಶವೆಂದರೆ ನಾವು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದೇವೆ. ಸುಧಾರಣೆ ಕಂಡುಕೊಳ್ಳುತ್ತಿದ್ದೇವೆ. ನಮ್ಮ ಛಾಪು ಏನಿದೆ ಅದಕ್ಕೆ ಆತುಕೊಂಡು ಕೆಲಸ ಮಾಡುತ್ತೇವೆ," ಎಂದಿದ್ದಾರೆ.
"ನಾಳೆ ನಾವು ಮೂರು ಅಂಕಗಳನ್ನು ಗಳಿಸಿದರೆ ಇದು ನಮ್ಮ ಉತ್ತಮ ಅಜೇಯದ ನಡೆ ಎಂದೆನಿಕೊಳ್ಳಲಿದೆ. ಆದ್ದರಿಂದ ನಾಳೆಯ ಪಂದ್ಯದ ಬಗ್ಗೆ ಎದುರುನೋಡುತ್ತಿದ್ದೇವೆ," ಎಂದರು.
ಜೆಮ್ಷೆಡ್ಪುರ ತಂಡದ ಸ್ಟ್ರೈಕರ್ ನೆರಿಜಸ್ ವಾಸ್ಕೀಸ್ ಅವರ ಬಗ್ಗೆ ನಾರ್ಥ್ ಈಸ್ಟ್ ಎಚ್ಚರಿಕೆಯಿಂದಿದೆ. ಗೋವಾದ ಐಗರ್ ಆಂಗುಲೊ ಅವರೊಂದಿಗೆ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ವಾಸ್ಕಿಸ್ ಇದ್ದಾರೆ. ಲಿಥುವೇನಿಯಾದ ಆಟಗಾರನ ಮೇಲೆ ಟಾಟಾ ಪಡೆ ಹೆಚ್ಚು ಅವಲಂಬಿತವಾಗಿದೆ. ತಂಡ ಗಳಿಸಿರುವ ಏಳು ಗೋಲುಗಳಲ್ಲಿ ನಿರಿಜಸ್ ಆರು ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ.
ಸತತ ಡ್ರಾ ಸಾಧಿಸಿದ ಜೆಮ್ಷೆಡ್ಪುರ ತಂಡ ನಾರ್ಥ್ ಈಸ್ಟ್ ರೀತಿಯಲ್ಲೇ ಯಶಸ್ಸಿನ ಹಾದಿ ತುಳಿದಿದೆ. ನಾಳೆ ಜಯ ಗಳಿಸಿದರೆ ಓವೆನ್ ಕೊಯ್ಲ್ ಪಡೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವತ್ತ ಹೆಜ್ಜೆ ಹಾಕಲಿದೆ.
ಅಮಾನತುಗೊಂಡಿರುವ ಮಿಡ್ ಫೀಲ್ಡರ್ ಐಟರ್ ಮನ್ರಯ್ ಅವರ ಸೇವೆಯಿಂದ ಜೆಮ್ಷೆಡ್ಪುರ ವಂಚಿತವಾಗಲಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ರೆಡ್ ಕಾರ್ಡ್ ಪಡೆದು ಹೊರನಡೆದಿದ್ದರು. ಮಿಡ್ ಫೀಲ್ಡ್ ನಲ್ಲಿ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿರುವ ನಾರ್ಥ್ ಈಸ್ಟ್ ವಿರುದ್ಧ ಮನ್ರಾಯ್ ಅವರ ಅನುಪಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಮುಖ್ಯ.
ಐಎಸ್ಎಲ್: ಒಡಿಶಾ ಎಫ್ಸಿ vs ಬೆಂಗಳೂರು ಎಫ್ಸಿ
ಸ್ಟೀಫನ್ ಎಜಿ ಹಾಗೂ ಪೀಟರ್ ಹಾರ್ಟ್ಲೀ ಅವರು ಡಿಫೆನ್ಸ್ ವಿಭಾಗದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇದರ ಬಗ್ಗೆಯೂ ನಾರ್ಥ್ ಈಸ್ಟ್ ಅತ್ಯಂತ ಎಚ್ಚರವಹಿಸಬೇಕಿದೆ. ನಾರ್ಥ್ ಈಸ್ಟ್ ಹೊರತುಪಡಿಸಿದರೆ ಮುಂಬೈ ಮಾತ್ರ ಇದುವರೆಗೂ ಲೀಗ್ ನಲ್ಲಿ ಅತಿಹೆಚ್ಚು ಗೋಲು ಗಳಿಸಿದೆ.
ನಾರ್ಥ್ ಈಸ್ಟ್ ನಿಂದ ದಿಟ್ಟ ಸವಾಲು ಎದುರಾಗಲಿದೆ ಎಂದು ಹೇಳಿರುವ ಕೊಯ್ಲ್ ತಮ್ಮ ತಂಡದ ಶಕ್ತಿಯ ಬಗ್ಗೆ ಆತ್ಮವಿಶ್ವಾಸದಿಂದ ನುಡಿದಿದ್ದಾರೆ. "ಅವರು (ನಾರ್ಥ್ ಈಸ್ಟ್) ಉತ್ತಮ ತಂಡ ತಾವು ಕಠಿಣ ಶ್ರಮವಹಿಸುವವರು ಎಂಬುದನ್ನು ಅವರ ಸಾಧನೆಯ ಮೂಲಕ ತೋರಿಸಿದ್ದಾರೆ. ಇದರಿಂದಾಗಿ ನಾಳೆಯ ಪಂದ್ಯ ಕಠಿಣ ಎನಿಸಲಿದೆ, ಅವರ ಬಗ್ಗೆ ಅಪಾರವಾದ ಗೌರವವಿದೆ, ಆದರೆ ನಾಳೆ ನಡೆಯುತ್ತಿರುವ ಪಂದ್ಯದಲ್ಲಿ ಗೆಲ್ಲಬೇಕೆಂಬುದು ನಮ್ಮ ಗುರಿ,' ಎಂದು ಕೊಯ್ಲ್ ಹೇಳಿದ್ದಾರೆ.