ಕೋಲ್ಕತಾ, ಫೆಬ್ರವರಿ, 7: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ಸ್ಥಾನವನ್ನು ಗಮನದಲ್ಲಿರಿಸಿಕೊಂಡಿರುವ ಬಲಿಷ್ಠ ಎಟಿಕೆ ತಂಡ ಒಡಿಶಾ ಎಫ್ ಸಿ ವಿರುದ್ಧ ಮತ್ತೊಂದು ಹೋರಾಟಕ್ಕೆ ಮುಂದಾಗಿದೆ. ಈಗ ಕೇವಲ ಜಯವೊಂದೇ ಸಾಲದು ಗೋಲುಗಳ ಅಂತರವನ್ನು ಕಾಯ್ದುಕೊಳ್ಳುವ ಜವಾಬ್ದಾರಿಯೂ ಒಡಿಶಾ ಮೇಲಿದೆ.
ಆಂಟೋನಿಯೋ ಹಬ್ಬಾಸ್ ಪಡೆ ಸತತ ಮೂರು ಜಯ ಗಳಿಸಿ ಈ ಪಂದ್ಯಕ್ಕೆ ಸಜ್ಜಾಯಿತು. ಎದುರಾಳಿ ತಂಡಕ್ಕೆ ಗೋಲು ನೀಡದಿರುವುದು ಗಮನಾರ್ಹ. ಆಗಸ್ ಹಾಗೂ ಪ್ರೀತಮ್ ಕೊತಾಲ್ ಅವರನ್ನೊಳಗೊಂಡ ಡಿಫೆನ್ಸ್ ವಿಭಾಗ ಎದುರಾಳಿ ತಂಡಕ್ಕೆ ಗೋಲು ಗಳಿಸಲು ಕಠಿಣ ಸವಾಲಾಗಿದೆ.
''ಎಟಿಕೆ ಜಯ ಗಳಿಸಲು ಸಜ್ಜಾಗಿದೆ. ಮುಂದಿನ ಪಂದ್ಯವನ್ನು ಗೆಲ್ಲುವುದು ನನ್ನ ಮುಂದಿನ ಗುರಿ. ಒಡಿಶಾ ವಿರುದ್ಧದ ಪಂದ್ಯ. ಅದರಾಚೆ ಯೋಚನೆ ಮಾಡೊಲ್ಲ. ಇದು ನನ್ನ ತಂಡದ ಸಿದ್ಧಾಂತವೂ ಕೂಡ. ನಾವು ಜಯಕ್ಕಾಗಿ ಪರಿಪೂರ್ಣ ಹೋರಾಟ ನೀಡಲಿದ್ದೇವೆ. ಅಸಂಗತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಕೇವಲ ಮುಂದಿನ ಪಂದ್ಯದ ಬಗ್ಗೆ ಮಾತ್ರ ಯೋಚನೆ,'' ಎಂದು ಹಬ್ಬಾಸ್ ಹೇಳಿದ್ದಾರೆ.
ಹಿಂದಿನ ಪಂದ್ಯದಲ್ಲಿ ಗಾಯಗೊಂಡಿದ್ದ ಡೇವಿಡ್ ವಿಲಿಯಮ್ಸ್ ನಾಳೆಯ ಪಂದ್ಯದಲ್ಲಿ ಆಡಲು ಸಜ್ಜಾಗಿರುವುದು ಎಟಿಕೆ ಪಾಲಿಗೆ ಸಂತಸದ ಸುದ್ದಿ.
10 ಗೋಲುಗಳನ್ನು ಗಳಿಸಿರುವ ರಾಯ್ ಕೃಷ್ಣ ತಂಡದ ಪರ ಇದುವರೆಗೂ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಎಡು ಗಾರ್ಸಿಯಾ ಕೂಡ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿತ್ತಿದ್ದು, ವಿಲಿಯಮ್ಸ್ ಕೂಡ ಫಿಟ್ ಆಗಿರುವುದರಿಂದ ಹಬ್ಬಾಸ್ ಅವರಿಗೆ ಆಡುವ ಹನ್ನೊಂದು ಆಟಗಾರರನ್ನು ಆಯ್ಕೆ ಮಾಡುವುದು ಸವಾಲೆನಿಸಲಿದೆ.
''ಮೊದಲ ಹನ್ನೊಂದು ಮಂದಿಯ ಬಗ್ಗೆ ನಾನು ಮಾತನಾಡುವುದಿಲ್ಲ. ಪಂದ್ಯದ ಚಲನೆಯನ್ನು ಆಧರಿಸಿ ನಾವು ಆಯ್ಕೆ ಮಾಡಲಿದ್ದೇವೆ,'' ಎಂದು ಹಬ್ಬಾಸ್ ಹೇಳಿದ್ದಾರೆ.
ಜೊಸೆಫ್ ಗೊಂಬಾವ್ ಅವರ ಒಡಿಶಾ ಪಡೆ ಜಯದ ಲಯಕ್ಕೆ ಮರಳುವ ಅಗತ್ಯ ಇದೆ. ಅಂತಿಮ ನಾಲ್ಕರ ಹಂತ ತಲುಪಬೇಕಾದರೆ ಇಲ್ಲಿ ಜಯದ ಅನಿವಾರ್ಯತೆ ಇದೆ. ಬೆಂಗಳೂರು ಎಫ್ ಸಿ ಯಿಂದ ಆಗಮಿಸಿದ ಆಟಗಾರ ಮ್ಯಾನ್ವೆಲ್ ಒನವ್ ಗೋವಾ ವಿರುದ್ಧ ಎರಡು ಗೋಲುಗಳನ್ನು ಗಳಿಸಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
''ಇದು ಹೊರಗಡೆ ನಡೆಯುವ ನಮ್ಮ ಪಾಲಿನ ಕೊನೆಯ ಪಂದ್ಯವಾಗಿದೆ. ಈ ಲೀಗ್ ನಲ್ಲಿ ತಂಡಗಳ ನಡುವಿನ ಅಂತರ ಹೆಚ್ಚಾಗಿಲ್ಲ. ನಾವು ಏಕಾಗೃತೆಯಿಂದ ಆಡಿದರೆ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಬಹುದು. ನಮಗೆ ಹೇಗೆ ಗೆಲ್ಲಬೇಕು ಎಂಬುದು ಗೊತ್ತಿದೆ,'' ಎಂದು ಗೊಂಬೋವ್ ಹೇಳಿದ್ದಾರೆ. 15 ಪಂದ್ಯಗಳನ್ನು ಆಡಿರುವ ಒಡಿಶಾ 21 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಅಂತಿಮ ನಾಲ್ಕರಲ್ಲಿ ತನ್ನ ಸ್ಥಾನವನ್ನು ಗಳಿಸಲು ಒಡಶಾ ತಂಡ 26 ಅಂಕ ಗಳಿಸಿರುವ ಮುಂಬೈ ಹಾಗೂ 21 ಅಂಕ ಗಳಿಸಿರುವ ಚೆನ್ನೈಯಿನ್ ಜತೆ ಸ್ಪರ್ಧೆಯಲ್ಲಿದೆ.