ಭಾರತದ ಹೆಮ್ಮೆ ಛೆಟ್ರಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕ್ರಿಕೆಟ್ ನಲ್ಲಿ ಹೆಚ್ಚು ಗುರುತಿಸಿಕೊಂಡಿತ್ತು. ಅದು ಬಿಟ್ಟರೆ ಕೊಂಚ ಹಾಕಿ, ಬ್ಯಾಡ್ಮಿಂಟನ್ ನಂತ ಕೆಲವೇ ಕೆಲವು ಕ್ರೀಡೆಗಳಲ್ಲಿ ಭಾರತ ವಿಶ್ವದ ಗಮನ ಸೆಳೆದಿದ್ದನ್ನು ನಾವು ನೋಡಿದ್ದೇವೆ. ಆದರೆ ಇಂದು ಭಾರತ ಫುಟ್ಬಾಲ್ ನತ್ತ ಇಡೀ ವಿಶ್ವವೇ ದೃಷ್ಟಿ ಹರಿಸುವಂತಾಗಿದೆ; ಅದು ಸುನಿಲ್ ಛಟ್ರಿಯಿಂದಾಗಿ.
ನಂ. 1 ಸ್ಥಾನದತ್ತ ದಾಪುಗಾಲು
ಅಂತಾರಾಷ್ಟ್ರೀಯ ಮಟ್ಟದ ಸಕ್ರಿಯ ಫುಟ್ಬಾಲ್ ಆಟಗಾರರಲ್ಲಿ ಅಧಿಕ ಗೋಲ್ ಸಾಧಕರಾಗಿ ಮೂರನೇ ಸ್ಥಾನದಲ್ಲಿದ್ದ ಛೆಟ್ರಿ ಶನಿವಾರವಷ್ಟೇ ದ್ವಿತೀಯ ಸ್ಥಾನಿಗರಾಗಿ ಮೆಸ್ಸಿಗೆ ಸಮಾನ ಸಾಧನೆ ಮೆರೆದರು. ಅದರಲ್ಲೂ ಆಡಿರುವ ಪಂದ್ಯಗಳ ಲೆಕ್ಕಾಚಾರದಲ್ಲಿ ನೋಡಿದರೆ ಛೆಟ್ರಿಯೇ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅಧಿಕ ಗೋಲ್ ಸಾಧಕರಲ್ಲಿ ಪೋರ್ಚುಗಲ್ ನ ಕ್ರಿಸ್ಚಿಯಾನೊ ರೊನಾಲ್ಡೋ (81 ಗೋಲ್/150 ಪಂದ್ಯಗಳು) ಪ್ರಥಮ ಸ್ಥಾನದಲ್ಲಿದ್ದರೆ, ಸುನಿಲ್ ಛೆಟ್ರಿ (64 ಗೋಲ್/102 ಪಂದ್ಯಗಳು) ಮತ್ತು ಲಿಯೋನೆಲ್ ಮೆಸ್ಸಿ 64 ಗೋಲ್/124 ಪಂದ್ಯಗಳು) ದ್ವಿತೀಯ ಸ್ಥಾನದಲ್ಲಿದ್ದಾರೆ.
ಸ್ಫೂರ್ತಿಯ ನಾಯಕ
ಛೆಟ್ರಿ ಸೂರ್ತಿಯ ನಾಯಕರಾಗಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಕ್ರಿಕೆಟ್ ಬೆಂಬಲಿಸುವಂತೆ ಫುಟ್ಬಾಲ್ ಮತ್ತು ಇತರ ಕ್ರೀಡೆಗಳಿಗೂ ಕ್ರೀಡಾಭಿಮಾನಿಗಳು ಪ್ರೋತ್ಸಾಹಿಸಬೇಕು. ಇತರ ಕ್ರೀಡಾಪಟುಗಳೂ ಶ್ರಮ ಪಡುತ್ತಾರೆ; ಅವರನ್ನೂ ಬೆಂಬಲಿಸಿ ಎಂದು ಈ ಹಿಂದೆ ಟ್ವಿಟರ್ ವೀಡಿಯೋ ಮೂಲಕ ಕೇಳಿಕೊಂಡಿದ್ದ ಛೆಟ್ರಿ ಕ್ರೀಡಾಭಿಮಾನಿಗಳ ಪ್ರೀತಿ ಗೆದ್ದಿದ್ದರು.
ಕೈ ಮುಗಿದು ರಾಷ್ಟ್ರಾಭಿಮಾನ ಮೆರೆದಿದ್ದರು
ಕೀನ್ಯಾ ವಿರುದ್ಧ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ತಮ್ಮ 100ನೇ ಪಂದ್ಯವನ್ನಾಡಿದ್ದ ಛೆಟ್ರಿ ಭಾರತ 3-0 ಅಂತರದಿಂದ ಗೆಲ್ಲುವಲ್ಲೂ ನಿರ್ಣಾಯಕ ಪಾತ್ರ ವಹಿಸಿದ್ದರು. ಪಂದ್ಯದ ಬಳಿಕ ಪೆವಿಲಿಯನ್ ಗೆ ಛೆಟ್ರಿ ಹಿಂದಿರುಗುತ್ತಿದ್ದ ವೇಳೆ ಅಭಿಮಾನಿಯೊಬ್ಬರ ಕೈಯಿಂದ ತ್ರಿವರ್ಣ ಧ್ವಜ ಜಾರಿ ನೆಲಕ್ಕೆ ಬಿದ್ದಿತ್ತು. ಆಗ ಧ್ವಜವನ್ನು ಹೆಕ್ಕಿ ಅಭಿಮಾನಿಗೆ ಕೊಡುವಲ್ಲಿ ನೆರವಾಗಿದ್ದ ಛಟ್ರಿ, ಅಭಿಮಾನಿಯೆಡೆಗೆ ಕೈ ಮುಗಿದು 'ಹೀಗಾಗದಂತೆ ಜಾಗ್ರತೆವಹಿಸಿ' ಎಂದು ಕೋರಿಕೊಂಡಿದ್ದರು.